No menu items!
11.1 C
Munich
Wednesday, April 29, 2026

ಸಾಲಗಾರರ ಕಾಟ ತಪ್ಪಿಸಲು ಉಗ್ರಗಾಮಿಯಾದ ಭೂಪ!

Must read

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ನಾಪತ್ತೆಯಾದ ವ್ಯಕ್ತಿ ಉಗ್ರಗಾಮಿಯಾಗಿ ಪತ್ತೆ ಎಂಬ ಸುಳ್ಳುಸುದ್ದಿಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾದ ವ್ಯಕ್ತಿಯ ಮೊಬೈಲ್ ಲೊಕೇಶನ್ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದು, ಸಾಲಗಾರರ ಕಾಟ ತಪ್ಪಿಸಲು ಉಗ್ರನಾಗಿರುವ ಬಗ್ಗೆ ಸುಳ್ಳು ಸುದ್ದಿ ಹಬ್ಬಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅಷ್ಟಕ್ಕೂ ಉಪ್ಪಿನಂಗಡಿಯಿಂದ ನಾಪತ್ತೆಯಾದ ವ್ಯಕ್ತಿ ಉಗ್ರನಾದ ಬಗೆ ಹೇಗೆ? ಎಂಬುದೇ ರೋಚಕ ಕತೆ. ಕಳೆದ 2-3 ವರ್ಷಗಳ ಕಾಲ ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ಉತ್ತರ ಪ್ರದೇಶ ಮೂಲದ 48ರ ಹರೆಯದ ರಫೀಕ್ ಖಾನ್ ಎಂಬಾತ ಗ್ಯಾರೇಜ್ ಅಂಗಡಿ ನಡೆಸುತ್ತಿದ್ದ.

 

ಆದರೆ ಕಳೆದ ಜುಲೈ 18ರಿಂದ ಉಪ್ಪಿನಂಗಡಿಯಿಂದ ರಫೀಕ್ ಖಾನ್ ಧಿಡೀರ್ ಆಗಿ ನಾಪತ್ತೆಯಾಗಿದ್ದ. ಉಪ್ಪಿನಂಗಡಿ ಮೂಲದ ಮಹಿಳೆಯ ಜೊತೆ ವಿವಾಹವಾಗಿದ್ದ ರಫೀಕ್ ಖಾನ್, ಬೆಂಗಳೂರಿಗೆ ಹೋಗಿ ಬರೋದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದ. ಆಗಸ್ಟ್ ಒಂದನೇ ವಾರದಲ್ಲಿ ಗಂಡ ನಾಪತ್ತೆಯಾಗಿರುವ ಬಗ್ಗೆ ರಫೀಕ್ ಖಾನ್ ಹೆಂಡತಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

 

ಇದಾದ ಬಳಿಕ ಕಳೆದ ವಾರ ದೆಹಲಿ ಪೊಲೀಸರಿಂದ ಬಂಧಿತರಾಗಿದ್ದ 6 ಉಗ್ರರ ಪೈಕಿ ರಫೀಕ್ ಖಾನ್ ಇರುವ ಅನುಮಾನ ವ್ಯಕ್ತವಾಗಿತ್ತು. ದೆಹಲಿ ಪೊಲೀಸರು ಲಕ್ನೋದಲ್ಲಿ ಬಂಧಿಸಿರೋ ಅಮೀರ್ ಜಾವೇದ್‌ಗೂ ರಫೀಕ್ ಖಾನ್‌ಗೂ ಹೋಲಿಕೆ ಕಂಡುಬಂದಿತ್ತು. ಉತ್ತರ ಪ್ರದೇಶದಿಂದಲೇ ಉಪ್ಪಿನಂಗಡಿಗೆ ಬಂದು ರಫೀಕ್ ಖಾನ್ ನೆಲೆಸಿದ್ದ ಕಾರಣ, ಸ್ಥಳೀಯವಾಗಿ ಹಿಂದಿ ಮತ್ತು ಉರ್ದು ಭಾಷೆಯನ್ನು ರಫೀಕ್ ಖಾನ್ ಮಾತನಾಡುತ್ತಿದ್ದ. ಹೀಗಾಗಿ ಉಪ್ಪಿನಂಗಡಿಯಲ್ಲಿ ನಾಪತ್ತೆಯಾದ ರಫೀಕ್ ಖಾನ್ ದೆಹಲಿಗೆ ಉಗ್ರನಾಗಿ ಪತ್ತೆಯಾಗಿದ್ದಾನೆ ಎಂಬ ಸುದ್ದಿ ಹರಿದಾಡಿದೆ. ಈ ವಿಚಾರ ಉಪ್ಪಿನಂಗಡಿ, ನೆಕ್ಕಿಲಾಡಿ ಪರಿಸರದ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಪೊಲೀಸರಿಗೆ ಗೊತ್ತಾಗದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯ ಬಣ್ಣ ಪಡೆದು ಹರಿದಾಡುತ್ತಿರುವ ಬಗ್ಗೆಯೇ ಪೊಲೀಸ್ ಇಲಾಖೆಯೇ ಆಶ್ಚರ್ಯ ವ್ಯಕ್ತಪಡಿಸಿತ್ತು. ಒಂದು ಹಂತದಲ್ಲಿ ಸ್ವತಃ ಎಡಿಜಿಪಿಯವರೇ ದೆಹಲಿ ಪೊಲೀಸರ ಸಂಪರ್ಕ ಸಾಧಿಸಿ, ಉಪ್ಪಿನಂಗಡಿಯಲ್ಲಿ ನಾಪತ್ತೆಯಾದ ವ್ಯಕ್ತಿ ಬಂಧನವಾಗಿದ್ದರ ಬಗ್ಗೆ ಮಾಹಿತಿ ಕೇಳಿದ್ದರು. ‌ಆದರೆ ದೆಹಲಿ ಪೊಲೀಸರು ಈ ವಿಚಾರ ಸುಳ್ಳು, ಬಂಧನವಾಗಿರುವ ಉಗ್ರರ ಪೈಕಿ ಕರ್ನಾಟಕ ಮೂಲದವರು ಯಾರೂ ಇಲ್ಲ ಎಂಬ ಮಾಹಿತಿ ನೀಡಿದ್ದರು.

 

ಆದರೆ ಉಪ್ಪಿನಂಗಡಿಯಿಂದ ನಾಪತ್ತೆಯಾದ ವ್ಯಕ್ತಿ ಎಲ್ಲಿ ಹೋದ? ಎಂಬುವುದರ ಬಗ್ಗೆ ಗಂಭೀರ ತನಿಖೆ ಆರಂಭಿಸಿದ ಪೊಲೀಸರಿಗೆ, ರಫೀಕ್ ಖಾನ್ ಮೊಬೈಲ್ ಟವರ್ ಲೊಕೇಶನ್ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದೆ. ಆದರೆ ಬೆಂಗಳೂರಿಗೆ ಹೋದವನು ಹಿಮಾಚಲ ಪ್ರದೇಶಕ್ಕೆ ಯಾಕೆ ಹೋಗಿದ್ದಾನೆ? ಎಂಬುವುದರ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಾಗಿದೆ.

 

ಆದರೆ ರಫೀಕ್‌ಖಾನ್ ನೆಕ್ಕಿಲಾಡಿ ಭಾಗದಲ್ಲಿ ಗ್ಯಾರೇಜ್ ನಡೆಸುತ್ತಿದ್ದು, ಸ್ಥಳೀಯರಿಂದ ಸಾಕಷ್ಟು ಸಾಲವನ್ನು ಪಡೆದುಕೊಂಡಿದ್ದ. ಸಾಲದ ಮರುಪಾವತಿ ಮಾಡಲಾಗದೇ ತಲೆ ಮರೆಸಿಕೊಳ್ಳಲು ಹಿಮಾಚಲದತ್ತ ಹೋಗಿರೋದು ಬೆಳಕಿಗೆ ಬಂದಿದೆ. ಸಾಲಗಾರರ ಕಾಟ ತಪ್ಪಿಸಲು ತನಿಖಾ ತಂಡದ ವಶವಾಗಿರುವ ಬಗ್ಗೆಯೂ ಸುಳ್ಳು ಸುದ್ದಿ ಹಬ್ಬಿಸಿರುವ ಸಾಧ್ಯತೆಗಳಿವೆ. ಸದ್ಯ ಹಿಮಾಚಲ ಪ್ರದೇಶದ ಟವರ್ ಲೊಕೇಶನ್‌ನಲ್ಲಿ ರಫೀಕ್ ಖಾನ್‌ ಮೊಬೈಲ್ ಸಂಪರ್ಕ ಸಿಕ್ಕಿದ್ದು, ಉಪ್ಪಿನಂಗಡಿ ಪೊಲೀಸರು ಹಿಮಾಚಲ ಪ್ರದೇಶ ಪೊಲೀಸರೊಂದಿಗೆ ಸಂಪರ್ಕ ಕಾರ್ಯದಲ್ಲಿ ತೊಡಗಿದ್ದಾರೆ.

ಒಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾದ ಉಪ್ಪಿನಂಗಡಿಯ ವ್ಯಕ್ತಿ ನಾಪತ್ತೆ ಪ್ರಕರಣ ಸುಖಾಂತ್ಯವಾಗುವ ಸಾಧ್ಯತೆಗಳಿವೆ. ಆದರೆ ಹಲವು ಮಂದಿ ಆತುರಕ್ಕೊಳಪಟ್ಟು, ನಾಪತ್ತೆಯಾದವನಿಗೆ ಉಗ್ರಪಟ್ಟ ಕಟ್ಟಿ ಕೈ ಕೈ ಹಿಸುಕಿಕೊಳ್ಳುವಂತೆ ಮಾಡಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article