No menu items!
9.3 C
Munich
Wednesday, April 29, 2026

ಯಡಿಯೂರಪ್ಪ ಸೋತಿದ್ದೇ RSSನಿಂದ ಎಂದ ಎಚ್ಡಿಕೆ

Must read

“ಆರ್‌ಎಸ್‌ಎಸ್‌ನಿಂದಲೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದಾರೆ, ಯಡಿಯೂರಪ್ಪ ಅವರಿಗೆ ಈಗ ಅರಿವಾಗಿದೆ. ಚುನಾಯಿತ ಜನಪ್ರತಿನಿಧಿಗಳಿಂದ ಈ ಸರ್ಕಾರ ನಡೆಯುತ್ತಿಲ್ಲ. ಇದು ಜೀವಂತವಾಗಿರುವ ವಿಷಯ, ನಾನು ಹಿಟ್ ಅಂಡ್ ರನ್ ಮಾಡಿ ಹೋಗಲ್ಲ” ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಹಾಸನ ಜಿಲ್ಲೆ ಸಕಲೆಶಪುರದಲ್ಲಿ ಎಚ್. ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, “ಎತ್ತಿನಹೊಳೆ ಕಾಮಗಾರಿಯನ್ನು ಸಿದ್ದರಾಮಯ್ಯ ನಾನೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದು ಮೂರೇ ವರ್ಷದಲ್ಲಿ ನೀರು ಕೊಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಯೋಜನೆಗೆ ಚಾಲನೆ ಸಿಕ್ಕಿಲ್ಲ” ಎಂದು ಆರೋಪಿಸಿದರು.

 

“ಯೋಜನೆಯ ಹಣ ಮಾತ್ರ ಡಬಲ್ ಆಗಿದೆ. ಎರಡನೇ ಹಂತದಲ್ಲೂ 12 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಹಣ ಬಿಡುಗಡೆಗೆ ತೀರ್ಮಾನ ಆಗಿದೆ. ಒಟ್ಟು 24 ಕೋಟಿ ನೀಡಲು ತೀರ್ಮಾನಿಸಲಾಗಿದೆ. ನನಗೆ ಯೋಜನೆ ಬಗ್ಗೆ ಯಾವುದೇ ತಕರಾರಿಲ್ಲ. ಆದರೆ ಕಾಂಗ್ರೆಸ್‌ನವರ ನಡವಳಿಕೆ ಬಗ್ಗೆ ಅಸಮಾಧಾನವಿದೆ. ಇಲ್ಲಿಯವರೆಗೆ 2 ಹಂತದ ಕೆಲಸ ಮುಗಿದಿದೆ ಎಂಬ ಮಾಹಿತಿ ನೀಡಿದ್ದಾರೆ, ಎಂಟನೇ ಹಂತ ಕಾಮಗಾರಿ ಪ್ರಗತಿಯಲ್ಲಿದೆ ಇಲ್ಲಿಯವರೆಗೂ ಯಾವುದೇ ಪರೀಕ್ಷಾ ಕೆಲಸ ಕೂಡ ಪ್ರಾರಂಭವಾಗಿಲ್ಲ” ಎಂದು ಕುಮಾರಸ್ವಾಮಿ ತಿಳಿಸಿದರು.

 

“ಯೋಜನೆಗಳನ್ನು ಡಿಪಿಎಆರ್ ಅನ್ವಯ ಮಾಡಬೇಕಾಗುತ್ತದೆ. ಇದೀಗ ನಿಯಮ ಮೀರಿ ಲೈನ್ ಎಸ್ಟಿಮೇಷನ್ ಮೇಲೆ ಮಾಡುತ್ತಿದ್ದು 8 ಸಾವಿರ ಕೋಟಿ ಯಿಂದ 24 ಸಾವಿರ ಕೋಟಿಗೆ ಯೋಜನೆ ತಲುಪಿದೆ. ಆದರೂ ಇನ್ನೂ ಕಾಮಗಾರಿ ಮಾತ್ರ ಮುಗಿದಿಲ್ಲ. ಗುತ್ತಿಗೆದಾರರಿಗೆ ಮಾತ್ರ ಹಣ ಸಂದಾಯವಾಗುತ್ತಿದ್ದು ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತನಿಗೆ ಇನ್ನೂ ಹಣ ಸಿಕ್ಕಿಲ್ಲ. ಇಲ್ಲಿಯವರೆಗೂ 9 ಸಾವಿರ ಕೋಟಿ ಹಣ ಬಿಡುಗಡೆ ಆಗಿದೆ. ಇಷ್ಟೊತ್ತಿಗೆ ಪರೀಕ್ಷಾ ಹಂತ ಮುಗಿದು ಕ್ಯನಾಲ್ ಗಳನ್ನಾದರೂ ತುಂಬಿಸಬೇಕಾಗಿತ್ತು. ಚಿಕ್ಕಬಳ್ಳಾಪುರ ಭಾಗದ ಜನರಿಗೆ ಯಾವಾಗ ನೀರು ನೀಡುತ್ತಾರೋ? ಎಂಬ ಕಾಳಜಿ ನನ್ನದು” ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದರು.

“ಕುಮಾರಸ್ವಾಮಿ ಏನು ಮಾಡಿದ್ದಾರೆ? ಎಂಬುದು ಜನಕ್ಕೆ ಗೊತ್ತಿದೆ. ನಾನು ಬಿಜೆಪಿ ಜೊತೆ ಅಧಿಕಾರ ಮಾಡಿದ್ದಾಗ ಎತ್ತಿನಹೊಳೆ ಇರಲಿಲ್ಲ. ಕಾಂಗ್ರೆಸ್ ಜೊತೆ ಅಧಿಕಾರ ಮಾಡಿದಾಗ ನೀರಾವರಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುವ ಸ್ಥಿತಿ ಇರಲಿಲ್ಲ. ಅವರು ಕೇಳಿದ ಅಧಿಕಾರಿಗಳು ಯೋಜನೆ ರೂಪಿಸಿಕೊಂಡಿದ್ದರು, ಸರ್ಕಾರಕ್ಕೆ ಈ ಯೋಜನೆ ಬಗ್ಗೆ ಬದ್ಧತೆ ಇಲ್ಲ. ಬದ್ಧತೆ ಇದ್ದರೆ ಆದಷ್ಟು ಬೇಗ ಕಾಮಗಾರಿ ಮುಗಿಸಬಹುದು. ಕೇವಲ ಹಣ ವರ್ಗಾವಣೆ ಆಗುವುದನ್ನು ಬಿಟ್ಟು ಇಲ್ಲಿಗೆ ಒಬ್ಬ ಅಧಿಕಾರಿ ನೇಮಿಸಿ ಕಾಮಗಾರಿ ಮುಗಿಸಬೇಕು. ದೇವೇಗೌಡರು ಜಾಮದಾರ್ ಎಂಬ ಅಧಿಕಾರಿ ನೇಮಿಸಿ ಕಾಮಗಾರಿ ಮುಗಿಸಿರಲಿಲ್ವಾ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

“ಕಳೆದ ಚುನಾವಣೆಗಿಂತ ಹಿಂದೆ ಈ ಭಾಗಕ್ಕೆ ಬಂದು ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದೆ. ಆದರೆ ಇಲ್ಲಿಯವರೆಗೂ ಕಾಮಗಾರಿ ಕುಂಠಿತವಾಗಿಯೇ ನಡೆದಿದೆ. ಎತ್ತಿನಹೊಳೆ ಯೋಜನೆಯು ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗದ ಬಹುನಿರೀಕ್ಷಿತ ಯೋಜನೆಯಾಗಿದೆ. ಹಣ ಸಂದಾಯವಾಗುತ್ತಿದೆಯೇ ಹೊರತು ಕಾಮಗಾರಿ ಮಾತ್ರ ತ್ವರಿತವಾಗಿ ನಡೆಯುತ್ತಿಲ್ಲ. ಶೀಘ್ರವೇ ಕಾಮಗಾರಿಗೆ ವೇಗ ನೀಡಬೇಕು” ಎಂದು ಕುಮಾರಸ್ವಾಮಿ ಆಗ್ರಹಿಸಿದರು.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article