ಕಬಾಬ್ ವಿಚಾರಕ್ಕೆ ಆರಂಭವಾದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ನಗರದ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೈಲಸಂದ್ರ ದಿನ್ನೆ ನಿವಾಸಿ ಎಂ.ಸುರೇಶ್ ಎಂಬವರ ಪತ್ನಿ ಶಾಲಿನಿ ಚಿಕನ್ ಕಬಾಬ್ ಮಾಡಿದ್ದರು. ಆದರೆ ಮಾಡಿದ ಕಬಾಬ್ ರುಚಿ ಚೆನ್ನಾಗಿಲ್ಲ ಎಂದು ಉಗುಳಿದ್ದಾನೆ. ಇಲ್ಲಿಂದ ಆರಂಭವಾದ ಜಗಳ ಸುರೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಅಂತ್ಯಗೊಂಡಿದೆ.
ಶಾಲಿನಿ ತನ್ನ ಪತಿಗಾಗಿ ಚಿಕನ್ ಕಬಾಬ್ ಮಾಡಿದ್ದರು. ಆದರೆ ಪತಿ ಸುರೇಶ್ ಇದು ಚೆನ್ನಾಗಿಲ್ಲ ಎಂದು ಉಗುಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ಆರಂಭಗೊಂಡಿದ್ದು, ಕೋಪದಿಂದ ಸುರೇಶ್ ಶಾಲಿನಿಗೆ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಹೊಡೆತ ತಿಂದು ಅಸ್ವಸ್ಥರಾದ ಶಾಲಿನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಕೊಂಚ ಚೇತರಿಸಿಕೊಂಡ ನಂತರ ಶಾಲಿನಿ ಗಂಡನ ವಿರುದ್ಧ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಶಾಲಿನಿ ನೀಡಿದ ದೂರಿನಂತೆ ಪೊಲೀಸರು ಸುರೇಶ್ ಬಂಧನಕ್ಕೆ ತನಿಖೆ ಆರಂಭಿಸಿದ್ದಾರೆ. ಈ ನಡುವೆ ಸುರೇಶ್ ದಾರಿ ಬದಿಯ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.