ನಟ ದರ್ಶನ್ ಜಾಮೀನು ರದ್ದು ಕೋರಿ ಅರ್ಜಿ: ಏ.2 ರಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ
ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ದರ್ಶನ್ ಜೈಲು ಸೇರಿದ್ದರು. ಕೆಲವು ದಿನಗಳು ಜೈಲು ವಾಸದ ಬಳಿಕ ಹೈ ಕೋರ್ಟ್ನಿಂದ ದರ್ಶನ್ಗೆ ರೆಗ್ಯೂಲರ್ ಜಾಮೀನು ಸಿಕ್ಕಿದೆ. ಆದರೆ, ಬೆಂಗಳೂರು ಪೊಲೀಸರು ದರ್ಶನ್ ಜಾಮೀನು ಅರ್ಜಿ ರದ್ದು ಮಾಡುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆಯಲ್ಲಿ ಆಸಕ್ತಿ ತೋರಿಸಿದೆ. ವಿಚಾರಣೆಗೆ ದಿನಾಂಕ ನಿಗದಿ ಮಾಡಿದೆ.
ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದು ನಡೆಯಬೇಕಿತ್ತು. ವಿಚಾರಣೆಗೆ ಪಟ್ಟಿಯಾಗದ ಹಿನ್ನೆಲೆ ದರ್ಶನ್ ಪ್ರಕರಣದಲ್ಲಿನ ರಾಜ್ಯದ ವಿಶೇಷ ವಕೀಲ ಅನಿಲ್ ನಿಶಾನಿ ಅರ್ಜಿ ವಿಚಾರಣೆ ನಡೆಸುವಂತೆ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಕೋರ್ಟ್ ಏ. 2 ರಂದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.
ಕಳೆದ ವಿಚಾರಣೆಯಲ್ಲಿ ಅರ್ಜಿ ವಿಚಾರಣೆಗೆ ಒಪ್ಪಿಕೊಂಡಿದ್ದ ಸುಪ್ರೀಂಕೋರ್ಟ್ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಮೂಲಗಳ ಪ್ರಕಾರ ಈವರೆಗೂ ದರ್ಶನ್ ಸುಪ್ರೀಂಕೋರ್ಟ್ ನೋಟಿಸ್ಗೆ ಪ್ರತಿಕ್ರಿಯಿಸಿಲ್ಲ ಹಾಗೂ ಅವರ ವಕೀಲರು ವಕಾಲತ್ತು ಕೂಡಾ ಹಾಕಿಲ್ಲ.
ಹೈಕೋರ್ಟ್ನಲ್ಲಿ ಗೆಲುವು ಪಡೆದಂತೆ ಸುಪ್ರೀಂಕೋರ್ಟ್ನಲ್ಲಿಯೂ ಗೆಲುವು ಪಡೆಯಲು ಖ್ಯಾತ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ದರ್ಶನ್ ಕುಟುಂಬದವರು ನೇಮಿಸಿಕೊಂಡಿದ್ದಾರೆ ಹಾಗೂ ಹೈಕೋರ್ಟ್ನಲ್ಲಿ ನಡೆದ ವಾದ ಪ್ರತಿವಾದದ ಎಲ್ಲ ದಾಖಲೆ ನೀಡಲಾಗಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸದ್ಯಕ್ಕೆ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ.