ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ
ಬೆಂಗಳೂರು:- ಇದು ಬೆಂಗಳೂರು ವಾಹನ ಸವಾರರು ನೋಡಲೇಬೇಕಾದ ಸ್ಟೋರಿ. ಬರೋಬ್ಬರಿ 21 ದಿನಗಳ ಕಾಲ ಬೆಂಗಳೂರಿನ ಈ ರಸ್ತೆಗಳು ಬಂದ್ ಇರಲಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಹೆಚ್.ಎ.ಎಲ್ ಏರ್ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಣತ್ತೂರು ಮುಖ್ಯ ರಸ್ತೆಯಲ್ಲಿ ಬಿ.ಬಿ.ಎಂ.ಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ 10.10.2025 ರಿಂದ 21 ದಿನಗಳ ಕಾಲ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೇಳಿದೆ.
ಪಣತ್ತೂರು ರೈಲ್ವೇ ಬ್ರಿಡ್ಜ್ ಜಂಕ್ಷನ್ ನಿಂದ ಬೋಗನಹಳ್ಳಿ ಜಂಕ್ಷನ್ ವರೆಗೆ ಎರಡು ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು:
ವೈಟ್ ಫೀಲ್ಡ್ ಮತ್ತು ವರ್ತೂರು ಕಡೆಯಿಂದ ಪಣತ್ತೂರು ಮುಖ್ಯ ರಸ್ತೆಯ ಮೂಲಕ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸುವ ವಾಹನಗಳು, ಬಳಗೆರೆ ಟಿ ಜಂಕ್ಷನ್ ಹತ್ತಿರ ಬಲ ತಿರುವು ಪಡೆದು ವಿಬ್ ಗಯಾರ್ ರಸ್ತೆ ಮೂಲಕ ವರ್ತೂರು ಮುಖ್ಯ ರಸ್ತೆ ಕಡೆಗೆ ಹೋಗಿ, ಮಾರತ್ತಹಳ್ಳಿ ಬ್ರಿಡ್ಜ್ ಹತ್ತಿರ ಎಡ ತಿರುವು ಪಡೆದು ಹೊರ ವರ್ತಲೋ ರಸ್ತೆ ತಲುಪಿದ ಮೇಲೆ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸಬಹುದು.
ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಯಿಂದ ಪಣತ್ತೂರು ಮುಖ್ಯ ರಸ್ತೆಯ ಮುಖಾಂತರ ವರ್ತೂರು ಮತ್ತು ವೈಟ್ ಫೀಲ್ಡ್ ಕಡೆಗೆ ಸಂಚರಿಸುವ ವಾಹನಗಳು, ಹೊರ ವರ್ತಲೋ ರಸ್ತೆ ಮೂಲಕ ಮಾರತ್ತಹಳ್ಳಿ ಬ್ರಿಡ್ಜ್ ಕಡೆ ಸಂಚರಿಸಿ, ವರ್ತೂರು ಮುಖ್ಯರಸ್ತೆ ತಲುಪಿ ವರ್ತೂರು ಮತ್ತು ವೈಟ್ ಫೀಲ್ಡ್ ಕಡೆಗೆ ಹಿಂತಿರುಗಬಹುದು.
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ವಾಹನ ಸವಾರರನ್ನು ಸಂಚಾರ ಮಾರ್ಗಗಳನ್ನು ಗಮನಿಸಿ, ಸಮಯಕ್ಕೆ ಮುಂಚಿತವಾಗಿ ಪ್ರಯಾಣ ಮಾಡುವಂತೆ, ಮತ್ತು ರಸ್ತೆ ಕಾಮಗಾರಿ ವೇಳೆ ಸುರಕ್ಷಿತವಾಗಿ ಸಾಗುವಂತೆ ಮನವಿ ಮಾಡಿದೆ.






