ಕೇರಳದಲ್ಲಿ ತೀವ್ರ ಬಿಸಿಲು: ಜನರಿಗೆ ‘ಸ್ವಯಂ ಲಾಕ್ ಡೌನ್’ ಸೂಚನೆ, ಮಧ್ಯಾಹ್ನ ಹೊರಬಾರದಂತೆ ಸಿಎಂ ಕರೆ
ಕೇರಳ: ರಾಜ್ಯದಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶಾಖದ ಪರಿಣಾಮದಿಂದಾಗುವ ಅನಾಹುತಗಳನ್ನು ತಪ್ಪಿಸಲು ಜನರು ಸ್ವಯಂ ‘ಲಾಕ್ಡೌನ್’ ಅನುಸರಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆ ನೀಡಿದ್ದಾರೆ. ವಿಶೇಷವಾಗಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೊರಗಡೆಯ ಚಟುವಟಿಕೆಗಳನ್ನು ತಗ್ಗಿಸುವಂತೆ ಅವರು ಸೂಚಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರಾಜ್ಯದ ಪಾಲಕ್ಕಾಡ್, ಕೊಲ್ಲಂ ಹಾಗೂ ತ್ರಿಶೂರ್ ಜಿಲ್ಲೆಗಳಿಗೆ ಶಾಖದಲೆಯ ಎಚ್ಚರಿಕೆ ನೀಡಿದೆ. ಈ ಪ್ರದೇಶಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮೀರಿದ್ದು, ಒಣಹವೆಯ ಕಾರಣದಿಂದ ಉಷ್ಣತೆಯ ಪರಿಣಾಮ ಇನ್ನಷ್ಟು ಹೆಚ್ಚಾಗಿದೆ. ಉಳಿದ ಜಿಲ್ಲೆಗಳಲ್ಲಿಯೂ ಪರಿಸ್ಥಿತಿ ಸಮಾನವಾಗಿದ್ದು, ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಸರ್ಕಾರ ಸೂಚಿಸಿದೆ.
ಏಪ್ರಿಲ್ 23 ಮತ್ತು 24ರಂದು ರಾಜ್ಯದ ವಿವಿಧ ಭಾಗಗಳಲ್ಲಿ ಶಾಖದಲೆಯ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ. ಜೊತೆಗೆ, ಏಪ್ರಿಲ್ 27ರವರೆಗೆ ತಮಿಳುನಾಡು, ಆಂಧ್ರಪ್ರದೇಶದ ಕರಾವಳಿ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಬಿಸಿ ಮತ್ತು ಆರ್ದ್ರ ಹವಾಮಾನ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಜನರು ಶಾಖಕ್ಕೆ ದೇಹವನ್ನು ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ದೇಹದಲ್ಲಿ ನೀರಿನ ಪ್ರಮಾಣವನ್ನು ಸಮರ್ಪಕವಾಗಿ ಕಾಪಾಡಿಕೊಳ್ಳಬೇಕು. ಆರೋಗ್ಯ ಕಾಪಾಡಿಕೊಳ್ಳಲು ಒಆರ್ಎಸ್, ಲಸ್ಸಿ, ಮಜ್ಜಿಗೆ ಸೇರಿದಂತೆ ಮನೆಯಲ್ಲಿ ತಯಾರಿಸಿದ ಪಾನೀಯಗಳನ್ನು ಸೇವಿಸುವಂತೆ ಐಎಂಡಿ ಸಲಹೆ ನೀಡಿದೆ.
ಇದಲ್ಲದೆ, ಏಪ್ರಿಲ್ 23ರಿಂದ 27ರವರೆಗೆ ಕೇರಳ ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಗಂಟೆಗೆ 30ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದೇ ರೀತಿಯ ಹವಾಮಾನ ಆಂಧ್ರಪ್ರದೇಶದ ಕರಾವಳಿ ಪ್ರದೇಶ ಮತ್ತು ಯಾನಂ ಭಾಗದಲ್ಲಿಯೂ ಏಪ್ರಿಲ್ 25ರವರೆಗೆ ಮುಂದುವರಿಯಲಿದೆ.



