ರಿಷಬ್ ಶೆಟ್ಟಿ ಅಂದ್ರೆ ಒಂದು ಕಾಲದಲ್ಲಿ ಬರೀ ಬೆಂಗಳೂರಿನ ರಂಗಭೂಮಿ ಹಾಗೂ ಸಣ್ಣಪುಟ್ಟ ಸಿನಿಮಾಗಳಿಗೆ ಸೀಮಿತವಾಗಿದ್ದ ಹೆಸರು. ಆದರೆ ‘ಕಾಂತಾರ’ ಕಥೆ ಯಾವಾಗ ಬೆಳ್ಳಿತೆರೆಯ ಮೇಲೆ ಅನಾವರಣವಾಯ್ತೋ, ಈ ಕುಂದಾಪುರದ ಹುಡುಗ ರಾತ್ರೋರಾತ್ರಿ ‘ನ್ಯಾಷನಲ್ ಸ್ಟಾರ್’ ಆಗಿ ಹೊರಹೊಮ್ಮಿದರು. ಕೇವಲ ಕನ್ನಡದ ‘ಡಿವೈನ್ ಸ್ಟಾರ್’ ಆಗಿ ಉಳಿಯದೆ, ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮನೆಮಾತಾಗಿದ್ದಾರೆ. ಇವರ ಈ ಅಪ್ರತಿಮ ಬೆಳವಣಿಗೆ ಈಗ ಬರೀ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ದೇಶದ ದೊಡ್ಡ ದೊಡ್ಡ ರಾಜಕೀಯ ಶಕ್ತಿಗಳ ಗಮನವನ್ನೂ ಸೆಳೆದಿದೆ.
ಇದಕ್ಕೆ ಪುರಾವೆ ಎನ್ನುವಂತೆ ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಿಷಬ್ ಶೆಟ್ಟಿ ಭೇಟಿಯಾಗಿದ್ದಾರೆ. ದೆಹಲಿ ಏರ್ಪೋರ್ಟ್ನಲ್ಲಿ ರಿಷಬ್ ಕಾಣಿಸಿಕೊಂಡಾಗ ಅಭಿಮಾನಿಗಳಲ್ಲಿ ನೂರು ಪ್ರಶ್ನೆಗಳಿದ್ದವು. ಆದರೆ ಆ ಎಲ್ಲಾ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು, ಅಮಿತ್ ಶಾ ಅವರ ಜೊತೆ ರಿಷಬ್ ಶೆಟ್ಟಿ ‘ಚಾಯ್ ಪೇ ಚರ್ಚಾ’ ನಡೆಸಿದ್ದಾರೆ. ಈ ಭೇಟಿಯ ಫೋಟೋಗಳನ್ನು ಸ್ವತಃ ರಿಷಬ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಇಂಟರ್ನೆಟ್ನಲ್ಲಿ ಈ ಫೋಟೋಗಳೇ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.
ತಮ್ಮ ಭೇಟಿಯ ಬಗ್ಗೆ ಅತೀವ ಸಂಭ್ರಮದಿಂದ ಬರೆದುಕೊಂಡಿರೋ ರಿಷಬ್, ಗೌರವಾನ್ವಿತ ಗೃಹ ಸಚಿವ ಶ್ರೀ ಅಮಿತ್ ಶಾ ಅವರನ್ನು ಭೇಟಿಯಾಗುವ ಸೌಭಾಗ್ಯ ನನ್ನದಾಯ್ತು ಎಂದಿದ್ದಾರೆ. ದೇಶದ ಗೃಹ ಸಚಿವರು ಒಂದು ಸಿನಿಮಾದ ಬಗ್ಗೆ ಇಷ್ಟೊಂದು ಆಳವಾಗಿ ತಿಳಿದುಕೊಂಡಿರೋದು ನೋಡಿ ರಿಷಬ್ ಅಕ್ಷರಶಃ ಫಿದಾ ಆಗಿದ್ದಾರೆ. ಇದು ನನ್ನ ಜೀವನದ ಮರೆಯಲಾಗದ ಕ್ಷಣಗಳಲ್ಲಿ ಒಂದು ಅಂತ ಬರೆದುಕೊಂಡಿದ್ದಾರೆ.
ಈ ಭೇಟಿಯಲ್ಲಿ ಬರೀ ಸಿನಿಮಾ ಅಷ್ಟೇ ಅಲ್ಲದೆ, ನಮ್ಮ ದೇಶದ ಇತಿಹಾಸ, ಸಂಸ್ಕೃತಿ ಮತ್ತು ಕಲೆಯ ಬಗ್ಗೆಯೂ ಸುದೀರ್ಘ ಚರ್ಚೆ ನಡೆದಿದೆ. ಅಮಿತ್ ಶಾ ಅವರಿಗೆ ಸಿನಿಮಾ ನಿರ್ಮಾಣದ ತಾಂತ್ರಿಕತೆ ಮತ್ತು ಭಾರತೀಯ ಪರಂಪರೆಯ ಬಗ್ಗೆ ಇರೋ ಜ್ಞಾನ ಕಂಡು ರಿಷಬ್ ಆಶ್ಚರ್ಯಚಕಿತರಾಗಿದ್ದಾರೆ. ಮುಂಬರುವ ಸಿನಿಮಾಗಳ ಬಗ್ಗೆಯೂ ಅಮಿತ್ ಶಾ ಅವರು ಮಾಹಿತಿ ಪಡೆದಿದ್ದು, ರಿಷಬ್ ಅವರ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ. ಈ ಭೇಟಿ ಕೇವಲ ಸೌಜನ್ಯದ ಭೇಟಿಯೋ ಅಥವಾ ಇದರ ಹಿಂದೆ ಬೇರೆ ಏನಾದರೂ ಪ್ಲಾನ್ ಇದೆಯೋ ಅನ್ನೋ ಚರ್ಚೆ ಕೂಡ ಈಗ ಶುರುವಾಗಿದೆ.

ಹಾಗೆ ನೋಡಿದ್ರೆ ರಿಷಬ್ ಅವರಿಗೆ ರಾಜಕೀಯ ನಾಯಕರ ಭೇಟಿ ಇದೇ ಮೊದಲಲ್ಲ. 2023ರಲ್ಲಿ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಬಂದಾಗ ಕೂಡ ರಿಷಬ್ ಅವರನ್ನು ಭೇಟಿ ಮಾಡಿ ಶ್ಲಾಘಿಸಿದ್ದರು. ಮೋದಿ ಅವರನ್ನು ‘ಮಹಾ ನಾಯಕ’ ಎಂದು ಕರೆದಿದ್ದ ರಿಷಬ್, ಅಂದು ಕೂಡ ಸಿನಿಮಾದ ಅಗತ್ಯತೆಗಳ ಬಗ್ಗೆ ಚರ್ಚಿಸಿದ್ದರು. ಈಗ ಅಮಿತ್ ಶಾ ಭೇಟಿಯಾಗಿರೋದು ನೋಡಿದ್ರೆ, ರಿಷಬ್ ಬಿಜೆಪಿ ನಾಯಕರ ಜೊತೆ ಆಪ್ತ ನಂಟು ಹೊಂದಿದ್ದಾರೆ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ. ಪಂಚರಾಜ್ಯ ಚುನಾವಣೆಗಳ ರಿಸಲ್ಟ್ ಬರೋ ಹೊತ್ತಲ್ಲೇ ಈ ಭೇಟಿ ನಡೆದಿರೋದು ಹಲವು ವಿಶ್ಲೇಷಣೆಗಳಿಗೆ ದಾರಿ ಮಾಡಿಕೊಟ್ಟಿದೆ.
ರಿಷಬ್ ಶೆಟ್ಟಿ ರಾಜಕೀಯಕ್ಕೆ ಬರ್ತಾರಾ..? ಅನ್ನೋ ಪ್ರಶ್ನೆ ಅಂದು ಕೂಡ ಎದ್ದಿತ್ತು. ಆದರೆ ಏಪ್ರಿಲ್ 1ರಂದು ವೈರಲ್ ಟ್ವಿಟ್ಗೆ ಪ್ರತಿಕ್ರಿಯಿಸಿದ್ದ ರಿಷಬ್, ಸುಮ್ನೆ ಇರಿ ಮರ್ರೆ, ಇದೆಲ್ಲ ಸುಳ್ಳು ಸುದ್ದಿ ಅಂತ ಕೈ ಮುಗಿದು ಕೇಳಿಕೊಂಡಿದ್ದರು. ನಾನು ರಾಜಕೀಯಕ್ಕೆ ಹೋಗುವುದಿಲ್ಲ ಅಂತ ಅಂದು ಹೇಳಿದ್ದರು. ಆದರೆ ಈಗಿನ ಇವರ ನಡೆ ನೋಡಿದ್ರೆ ಭವಿಷ್ಯದಲ್ಲಿ ಏನು ಬೇಕಾದರೂ ಆಗಬಹುದು ಅನ್ನೋದು ಸಿನಿ ಪಂಡಿತರ ಲೆಕ್ಕಾಚಾರ. ಯಾಕಂದ್ರೆ ಭಾರತದಲ್ಲಿ ಸಿನಿಮಾ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು ಅನ್ನೋದು ಎಲ್ಲರಿಗೆ ಗೊತ್ತಿರುವ ವಿಚಾರ



