ಬಹುಮತ ಸಾಬೀತುಪಡಿಸಿದವರಿಗೆ ಸರ್ಕಾರ ರಚನೆಗೆ ಅವಕಾಶ: ತಮಿಳುನಾಡು ರಾಜ್ಯಪಾಲ ಅರ್ಲೇಕರ್ ಸ್ಪಷ್ಟನೆ
ಚೆನ್ನೈ: ಚುನಾವಣಾ ಫಲಿತಾಂಶದ ಬಳಿಕ ಯಾವ ಪಕ್ಷ ಸರ್ಕಾರ ರಚಿಸಲು ಮುಂದಾಗುತ್ತದೆಯೋ, ಅದು ತನ್ನ ಬಳಿ ಸ್ಪಷ್ಟ ಬಹುಮತವಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆಗೆ ಮುಂದಾಗುವ ಯಾವುದೇ ಪಕ್ಷವು ಬಹುಮತದ ಕುರಿತು ಖಾತರಿ ನೀಡಬೇಕು. ಆದರೆ ತಾವು ವೈಯಕ್ತಿಕವಾಗಿ ಶಾಸಕರ ತಲೆ ಎಣಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಹುಮತ ಸಾಬೀತುಪಡಿಸುವ ಪ್ರಕ್ರಿಯೆ ವಿಧಾನಸಭೆಯಲ್ಲೇ ನಡೆಯಬೇಕು. ಅದು ರಾಜ್ಯಪಾಲರ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಸದನದಲ್ಲಿ ವಿಶ್ವಾಸಮತದ ಮೂಲಕ ಪಕ್ಷಗಳು ತಮ್ಮ ಸಂಖ್ಯಾಬಲವನ್ನು ಸಾಬೀತುಪಡಿಸಬೇಕು ಎಂದು ಹೇಳಿದರು.
ಯಾವುದೇ ಪಕ್ಷ ಬಹುಮತದೊಂದಿಗೆ ಬಂದರೆ ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಅಂತಿಮವಾಗಿ ಸಂಖ್ಯಾಬಲವೇ ಮುಖ್ಯ ಎಂದು ರಾಜ್ಯಪಾಲರು ಹೇಳಿದರು.
ಬಹುಮತಕ್ಕೆ ಅಗತ್ಯವಾದ ಸಂಖ್ಯೆಯೊಂದಿಗೆ ಯಾರೇ ಬಂದರೂ ಅವರಿಗೆ ಅವಕಾಶ ನೀಡಲಾಗುತ್ತದೆ. ಅಗತ್ಯ ಸಂಖ್ಯೆಯನ್ನು ತೋರಿಸಿದರೆ ತಾವು ನಾಳೆಯೇ ಪ್ರಮಾಣ ವಚನ ಬೋಧಿಸಲು ಸಿದ್ಧರಾಗಿರುವುದಾಗಿ ತಿಳಿಸಿದರು.
ಟಿವಿಕೆ ಹೊರತುಪಡಿಸಿ ಬೇರೆ ಯಾವುದೇ ಪಕ್ಷ 118 ಸದಸ್ಯರ ಬೆಂಬಲದೊಂದಿಗೆ ಮುಂದೆ ಬರದಿದ್ದರೆ, ಸಂವಿಧಾನಾತ್ಮಕ ಆಯ್ಕೆಗಳ ಕುರಿತು ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಇದೇ ವೇಳೆ, ಎಸ್ಆರ್ ಬೊಮ್ಮಾಯಿ ಪ್ರಕರಣವನ್ನು ಉಲ್ಲೇಖಿಸಿದ ಅವರು, ಅದು ಹೊಸ ಸರ್ಕಾರ ರಚನೆಗೆ ಸಂಬಂಧಿಸಿದ ಪ್ರಕರಣವಲ್ಲ. ಇಲ್ಲಿ ಹೊಸ ಸರ್ಕಾರ ರಚನೆಯ ಪ್ರಶ್ನೆಯಿದ್ದು, ಬಹುಮತದ ಸಂಖ್ಯೆಯೇ ನಿರ್ಣಾಯಕ ಅಂಶವಾಗಲಿದೆ ಎಂದು ವಿವರಿಸಿದರು.



