ದೇಶದ ಆರ್ಥಿಕ ಸ್ಥಿತಿಗೆ ಪ್ರಧಾನಿ ಮೋದಿ ಹೊಣೆ; ಜನರ ಕ್ಷಮೆ ಯಾಚಿಸಬೇಕು – ಡಿ.ಕೆ. ಸುರೇಶ್ ಆಗ್ರಹ
ಬೆಂಗಳೂರು: ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಹೊಣೆಗಾರರು ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ. ಪ್ರಧಾನಿ ನೀಡಿರುವ ಆರ್ಥಿಕ ಸ್ಥಿತಿ ಹಾಗೂ ಬಡತನದ ಕುರಿತ ಹೇಳಿಕೆ ಕುರಿತು ಸ್ಪಷ್ಟನೆ ನೀಡಬೇಕು ಮತ್ತು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಸುರೇಶ್, ಜಾಗತಿಕ ಅಸ್ಥಿರತೆ ಮತ್ತು ನಿರಂತರ ಯುದ್ಧಗಳಿಂದ ಅಭಿವೃದ್ಧಿ ಹಿನ್ನಡೆಯಬಹುದು ಹಾಗೂ ದೊಡ್ಡ ಪ್ರಮಾಣದ ಜನಸಂಖ್ಯೆ ಮತ್ತೆ ಬಡತನಕ್ಕೆ ತಳ್ಳಲ್ಪಡುವ ಸಾಧ್ಯತೆ ಇದೆ ಎಂಬ ಪ್ರಧಾನಿಯವರ ಹೇಳಿಕೆಯನ್ನು ಪ್ರಶ್ನಿಸಿದರು.
“ಪ್ರಧಾನಿಯವರು ಯಾವ ಅರ್ಥದಲ್ಲಿ ಬಡತನದ ಬಗ್ಗೆ ಮಾತನಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ದೇಶದ ಜನರಿಗೆ ನಿಜಸ್ಥಿತಿಯ ಮಾಹಿತಿ ನೀಡುವುದು ಅವರ ಜವಾಬ್ದಾರಿ” ಎಂದು ಹೇಳಿದರು.
ದೇಶದ ಆಡಳಿತ ಚುಕ್ಕಾಣಿ ಮೋದಿ ಅವರ ಕೈಯಲ್ಲಿ ಕಳೆದ 12 ವರ್ಷಗಳಿಂದಿದ್ದು, ಈ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯ ಮೂಲಕ ಕೇಂದ್ರ ಸರ್ಕಾರ ಸುಮಾರು 45 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಗಳಿಸಿದೆ ಎಂದು ಅವರು ಆರೋಪಿಸಿದರು.
“ಕೆಲವು ಕಂಪನಿಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದಲೇ ಬೆಲೆ ಏರಿಕೆ ಮಾಡಲಾಗಿದೆ. ಜನರು ಇದುವರೆಗೆ ಎಚ್ಚೆತ್ತುಕೊಂಡಿಲ್ಲ. ಈಗ ಬಡತನದ ದವಡೆಗೆ ಸಿಲುಕುವಿರಿ ಎಂಬ ಸಂದೇಶ ನೀಡುತ್ತಿರುವುದು ಆತಂಕಕಾರಿ” ಎಂದು ಟೀಕಿಸಿದರು.
ರಾಹುಲ್ ಗಾಂಧಿ ವಿದೇಶದಲ್ಲಿ ಮಾತನಾಡಿದಾಗ ದೇಶದ್ರೋಹಿ ಎಂದು ಟೀಕಿಸುವ ಬಿಜೆಪಿ ನಾಯಕರು, ಪ್ರಧಾನಿ ಮೋದಿ ವಿದೇಶಿ ನೆಲದಲ್ಲಿ ದೇಶದ ಆರ್ಥಿಕ ಸಂಕಷ್ಟದ ಕುರಿತು ಮಾತನಾಡಿರುವುದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂದು ಪ್ರಶ್ನಿಸಿದ ಡಿ.ಕೆ. ಸುರೇಶ್, ಪ್ರಧಾನಿಯವರು ಈ ಹೇಳಿಕೆ ನೆದರ್ಲ್ಯಾಂಡ್ಸ್ ಜನರಿಗೆ ಮಾಡಿದ್ದರಾ ಅಥವಾ ಭಾರತೀಯರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.



