ಕೇರಳದಲ್ಲಿ ಯುಡಿಎಫ್ ಭರ್ಜರಿ ಮುನ್ನಡೆ; ಎಲ್ ಡಿಎಫ್ ಸರ್ಕಾರಕ್ಕೆ ಸೋಲಿನ ಭೀತಿ
ಕೇರಳ: ಏಪ್ರಿಲ್ 9ರಂದು ನಡೆದ ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಸೋಮವಾರ ವೇಗ ಪಡೆದುಕೊಂಡಿದ್ದು, ಆರಂಭಿಕ ಫಲಿತಾಂಶಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಡ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ಸರ್ಕಾರ ಸೋಲಿನತ್ತ ಸಾಗುತ್ತಿರುವ ಸೂಚನೆಗಳು ಸ್ಪಷ್ಟವಾಗಿವೆ.
ಎಕ್ಸಿಟ್ ಪೋಲ್ಗಳ ಮುನ್ಸೂಚನೆಗಳಿಗೆ ತಕ್ಕಂತೆ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಸ್ಪಷ್ಟ ಮುನ್ನಡೆ ದೊರೆತಿದ್ದು, ಕೇರಳದಲ್ಲಿ ದೀರ್ಘಕಾಲದಿಂದ ಅಸ್ತಿತ್ವದಲ್ಲಿದ್ದ ಕಮ್ಯೂನಿಸ್ಟ್ ಆಡಳಿತ ಅಂತ್ಯದ ಅಂಚಿನಲ್ಲಿದೆ.
140 ಸದಸ್ಯರ ವಿಧಾನಸಭೆಯಲ್ಲಿ ಆರಂಭಿಕ ಎಣಿಕೆ ಸುತ್ತುಗಳಲ್ಲೇ ಯುಡಿಎಫ್ 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಲ್ಡಿಎಫ್ ಕೇವಲ 40 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿತ್ತು. ಇತ್ತೀಚಿನ ಮಾಹಿತಿ ಪ್ರಕಾರ, ಯುಡಿಎಫ್ 99 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎಲ್ಡಿಎಫ್ 38 ಕ್ಷೇತ್ರಗಳಲ್ಲಿ ಹಾಗೂ ಎನ್ಡಿಎ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಈ ಫಲಿತಾಂಶ ಆಡಳಿತ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ಸರ್ಕಾರದ ಹಲವು ಸಚಿವರು ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಕಣ್ಣೂರು ಜಿಲ್ಲೆಯ ತಮ್ಮ ಭದ್ರಕೋಟೆಯಾದ ಧರ್ಮಡಂ ಕ್ಷೇತ್ರದಲ್ಲಿ ಆರಂಭಿಕ ಸುತ್ತುಗಳಲ್ಲೇ ಹಿಂದುಳಿದಿರುವುದು ಅಚ್ಚರಿಗೆ ಕಾರಣವಾಗಿದೆ.
ಇದರ ಜೊತೆಗೆ ಸಚಿವರಾದ ವೀಣಾ ಜಾರ್ಜ್, ಎಂ.ಬಿ. ರಾಜೇಶ್, ಒ.ಆರ್. ಕೇಲು, ಆರ್. ಬಿಂಧು, ಜೆ. ಚಿಂಚುರಾಣಿ, ಪಿ. ರಾಜೀವ್, ಕೆ.ಬಿ. ಗಣೇಶ್ ಕುಮಾರ್, ವಿ.ಎನ್. ವಾಸವನ್, ವಿ. ಶಿವನ್ಕುಟ್ಟಿ, ವಿ. ಅಬ್ದುರಹಿಮಾನ್, ಕಾಡನ್ನಪ್ಪಲ್ಲಿ ರಾಮಚಂದ್ರನ್, ಎ.ಕೆ. ಸಸೀಂದ್ರನ್ ಹಾಗೂ ರೋಶಿ ಆಗಸ್ಟಿನ್ ಕೂಡ ಆರಂಭಿಕ ಹಂತದಲ್ಲೇ ಹಿನ್ನಡೆ ಅನುಭವಿಸುತ್ತಿದ್ದಾರೆ.
ಮತ ಎಣಿಕೆ ಮುಂದುವರಿದಂತೆ ಕೇರಳದ ರಾಜಕೀಯ ಚಿತ್ರಣ ಮತ್ತಷ್ಟು ಸ್ಪಷ್ಟವಾಗಲಿದ್ದು, ಯುಡಿಎಫ್ ಅಧಿಕಾರಕ್ಕೇರಲಿದೆಯೇ ಎಂಬುದರ ಬಗ್ಗೆ ಕುತೂಹಲ ಹೆಚ್ಚಿದೆ.



