ಇವರು ಉದಯ ವಾರ್ತೆಗಳನ್ನು ವಾಚಿಸುವುದನ್ನು ನೋಡಿರೋ ನಾವು-ನೀವು ಇವರನ್ನು ಪತ್ರಕರ್ತ, ನ್ಯೂಸ್ ರೀಡರ್ ಅಂತ ಅಂದುಕೊಂಡಿರ್ತೀವಿ. ನಿಜ ಇವರು ಜನಪ್ರಿಯ ನಿರೂಪಕ ಹಾಗೂ ವಾರ್ತಾ ವಾಚಕ. ಆದರೆ, ಇದು ಇವರ ಹವ್ಯಾಸವಷ್ಟೇ..! ಎಲ್ಲರಿಗೂ ಇಷ್ಟವಾಗುವಂತೆ ಅಚ್ಚ ಕನ್ನಡದಲ್ಲಿ ವಾರ್ತೆ ವಾಚಿಸುವ ಇವರು ವೃತ್ತಿಯಲ್ಲಿ ಕಟ್ಟಡ ವಿನ್ಯಾಸಗಾರರು…! ಹೆಸರು, ಶ್ರೀಧರ್ ಶರ್ಮಾ.
ಇವರ ತಂದೆ ನಾಗರಾಜ ಶರ್ಮಾ, ತಾಯಿ ನಾಗರತ್ನ, ಪತ್ನಿ ಕವಿತಾ, ಮಗ ಸುಧನ್ವ. ತಂದೆ ಮೂಲತಃ ಗೌರಿಬಿದನೂರಿನವರು. ಆದರೆ, ಕೇಂದ್ರ ಸರ್ಕಾರಿ ನೌಕರರಾಗಿದ್ದರಿಂದ ಆಗಾಗ ದೇಶದ ಬೇರೆ ಬೇರೆ ಕಡೆಗಳಿಗೆ ಹೋಗುವುದು ಅನಿವಾರ್ಯವಾಗಿತ್ತು. ಆದ್ದರಿಂದ ರಾಜಧಾನಿ ಬೆಂಗಳೂರಿಗೆ ಬಂದು ನೆಲೆನಿಂತರು. ಶ್ರೀಧರ್ ಶರ್ಮಾ ಹುಟ್ಟಿ ಬೆಳೆದಿದ್ದು, ವಿದ್ಯಾಭ್ಯಾಸ ಮಾಡಿದ್ದು ಎಲ್ಲವೂ ಬೆಂಗಳೂರಲ್ಲೇ.
ಮೊದಲೇ ಹೇಳಿದಂತೆ ಶ್ರೀಧರ್ ಶರ್ಮಾ ಅವರು ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್, ಕಟ್ಟಡ ವಿನ್ಯಾಸಗಾರ. ಯಾವತ್ತೂ ಕೂಡ ಮಾಧ್ಯಮಕ್ಕೆ ಬರ್ತೀನಿ ಅಂತ ಕನಸು ಕಂಡಿರಲಿಲ್ಲ. ಇವರು ಗಾಂಧಿನಗರದ ಸಿ-ಬೆಂಗಳೂರು ಎಂಬ ಲೋಕಲ್ ಚಾನಲ್ಗೆ ಕಟ್ಟಡ ವಿನ್ಯಾಸ ಕೆಲಸ ಮಾಡಿ ಕೊಡ್ತಾ ಇದ್ದರು. ಅದೊಂದು ದಿನ ನ್ಯೂಸ್ ರೀಡಿಂಗ್ಗೆ ಟೆಸ್ಟ್ ನಡೀತಾ ಇತ್ತು. ಆಗ ಇವರು ಅದನ್ನು ನೋಡ್ತಾ ನಿಂತಿದ್ದರು. ಸಂದರ್ಶನ ಮುಗಿದ ಮೇಲೆ ಚಾನಲ್ನ ಮುಖ್ಯಸ್ಥ ಕುಮಾರ್ ಅವರು ಶ್ರೀಧರ್ ಅವರ ಬಳಿ ಬಂದು, ‘ಯಾರೊಬ್ಬರೂ ಸೆಟ್ ಆಗ್ತಿಲ್ಲ. ನೀನೇಕೆ ಟ್ರೈ ಮಾಡಬಾರದು.. ಬಾ ಅಂತ ಕರೆದು ಸ್ಕ್ರೀನ್ ಟೆಸ್ಟ್ ಮಾಡಿದ್ರು. ಸರಿ, ಎಂದು ಕ್ಯಾಮರ ಮುಂದೆ ವಾರ್ತೆ ಓದಿದ್ರು ಶ್ರೀಧರ್..!
ಅವರ ವಾರ್ತಾ ವಾಚನ ಕುಮಾರ್ ಅವರಿಗೆ ಇಷ್ಟವಾಯ್ತು. ಬಿಡುವಿನ ವೇಳೆಯಲ್ಲಿ ಬಂದು ನ್ಯೂಸ್ ಓದಿ ಹೋಗು ಅಂತ ಹೇಳಿದ್ರು. ಮರುದಿನ ಮಧ್ಯಾಹ್ನ ಬಿಡುವು ಮಾಡಿಕೊಂಡು ಕಚೇರಿಗೆ ಹೋಗಿ ನ್ಯೂಸ್ ಓದಿದ್ರು ಶ್ರೀಧರ್. ಅದು ಸಂಪೂರ್ಣ ಬಸವನಗುಡಿಯಲ್ಲಿ ಟೆಲಿಕಾಸ್ಟ್ ಆಯ್ತ್ಲು. ನಾಲ್ಕನೇ ದಿನ ಇವರನ್ನು ನೋಡಿದ ಜನ ನೀವು ನ್ಯೂಸ್ ಓದ್ತೀರಿ ಅಲ್ವಾ..? ಅಂತ ಗುರುತು ಹಿಡಿದು ಮಾತಾಡಲಾಂಭಿಸಿದ್ರು. ಆಗ ಶ್ರೀಧರ್ ಅವರಲ್ಲಿನ ನಿರೂಪಕ ಇನ್ನೂ ಜಾಗೃತನಾದ. ಸುದ್ದಿ ವಾಚಿಸುವ ಕೆಲಸ ಶ್ರೀಧರ್ಗೆ ತುಂಬಾ ಇಷ್ಟವಾಯ್ತು. ಬಿಡುವು ಸಿಕ್ಕಾಗಲೆಲ್ಲಾ ಸಿ-ಬೆಂಗಳೂರಿಗೆ ಹೋಗಿ ನ್ಯೂಸ್ ಓದಿ ಬರ್ತಿದ್ರು. ಹೀಗೆ ನಿರೂಪಣೆ ಹವ್ಯಾಸವಾಯಿತು.
ಹೀಗಿರುವಾಗ ಒಂದು ದಿನ ಉದಯ ಟಿವಿ ಅರೆಕಾಲಿಕ ನ್ಯೂಸ್ ರೀಡರ್ ಬೇಕಾಗಿದ್ದರೆ ಎಂಬ ಜಾಹಿರಾತು ನೀಡಿತ್ತು. ಅದನ್ನು ನೋಡಿದ ಶ್ರೀಧರ್ ಸಂದರ್ಶನಕ್ಕೆ ಹೋದ್ರು, ಅರೆಕಾಲಿಕ ನ್ಯೂಸ್ ರೀಡರ್ ಆಗಿ ಉದಯ ಟಿವಿಗೆ ಎಂಟ್ರಿಕೊಟ್ರು. 2000ನೇ ಇಸವಿ ಮೇ 24ರಂದು 1 ಗಂಟೆಗೆ ‘ಉದಯ ವಾರ್ತೆ’ಯ ಮೂಲಕ ಉದಯ ಟಿವಿ ಪರದೆ ಪ್ರವೇಶಿಸಿದ ಶ್ರೀಧರ್ ಮತ್ತೆ ಹಿಂತಿರುಗಿ ನೋಡಿಲ್ಲ.
ಹತ್ತಾರು ಚಾನಲ್ಗಳಿಂದ ಆಫರ್ ಬಂದರೂ ಅವುಗಳ ಹಿಂದೆ ಹೋಗುವ ಮನಸ್ಸು ಮಾಡಿಲ್ಲ. ತನ್ನ ಇಂಜಿನಿಯರಿಂಗ್ ವೃತ್ತಿಯನ್ನು ಬಿಟ್ಟು ಪೂರ್ಣ ಪ್ರಮಾಣದ ನಿರೂಪಕರಾಗುವುದು ಶ್ರೀಧರ್ ಅವರಿಗೆ ಇಷ್ಟವಿಲ್ಲ. ಆದ್ದರಿಂದ ಹವ್ಯಾಸಿ ನಿರೂಪಕಾರಿಗೆ ಮುಂದುವರೆದಿದ್ದಾರೆ. ಸತತ 17 ವರ್ಷಗಳಿಂದ ನೀವು ಇವರನ್ನು ಉದಯ ಟಿವಿ, ಉದಯ ನ್ಯೂಸ್ ನಲ್ಲಿ ನೋಡಿರ್ತೀರಿ.
ನ್ಯೂಸ್ ಓದುವುದಲ್ಲದೆ, ಮೆಗಾಮೂವಿ, ಕಾನೂನಿನ ಕಣ್ಣು ಸೇರಿದಂತೆ ಅನೇಕ ವಿಶೇಷ ಕಾರ್ಯಕ್ರಮ, ಚರ್ಚೆಗಳನ್ನು ಇವರು ನಡೆಸಿಕೊಟ್ಟಿದ್ದಾರೆ. ಪ್ರಜಾವಾಣಿ, ಡೆಕನ್ಹೆರಾಲ್ಡ್ನ ‘ಜನಸ್ಪಂದನ’ ಕಾರ್ಯಕ್ರಮದ ನಿರ್ವಹಣೆಯನ್ನು ಸಹ ಶ್ರೀಧರ್ ಮಾಡಿರುವುದನ್ನೂ ಸಹ ನಾವಿಲ್ಲಿ ಸ್ಮರಿಸಬಹುದು.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
10 ನವೆಂಬರ್ 2017 : ಈಶ್ವರ್ ದೈತೋಟ
11 ನವೆಂಬರ್ 2017 : ಭಾವನ
12 ನವೆಂಬರ್ 2017 : ಜಯಶ್ರೀ ಶೇಖರ್
13 ನವೆಂಬರ್ 2017 : ಶೇಷಕೃಷ್ಣ
14 ನವೆಂಬರ್ 2017 : ಶ್ರೀಧರ್ ಶರ್ಮಾ