ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕಿನ ಗುಣಸಾಗರ ಬಳಿ ನಡೆದಿದೆ.
ಸೋಮವಾರ ಸಂಜೆ ಮನೆಯಿಂದ ಸ್ಯಾಂಟ್ರೋ ಕಾರಿನಲ್ಲಿ ಒಬ್ಬರೇ ಹೊರಟಿದ್ದ ಧರ್ಮೇಗೌಡ ಅವರು ರಾತ್ರಿಯಾದರೂ ವಾಪಸ್ ಬಾರದ ಕಾರಣ ಗನ್ ಮ್ಯಾನ್, ಪೊಲೀಸರು, ಸ್ಥಳೀಯರು ಹುಡುಕಾಟ ನಡೆಸಿದ್ದರು. ನಂತರ ಕಡೂರು ತಾಲೂಕಿನ ಗುಣಸಾಗರ ಬಳಿ ಇರುವ ರೈಲ್ವೆ ಹಳಿಯ ಮೇಲೆ ಮೃತದೇಹ ಪತ್ತೆಯಾಗಿದೆ, ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಧರ್ಮೇಗೌಡ ತಮ್ಮ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆನ್ನಲಾಗಿದ್ದು, ಇದರಲ್ಲಿ ಹಲವು ವಿಷಯಗಳ ಜೊತೆಗೆ ಇತ್ತೀಚೆಗೆ ವಿಧಾನಪರಿಷತ್ ನಲ್ಲಿ ನಡೆದ ಗಲಾಟೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರ ತನಿಖೆಯ ಬಳಿಕವೇ ಡೆತ್ ನೋಟ್ ಕುರಿತ ಸತ್ಯಾಸತ್ಯತೆ ಬಯಲಿಗೆ ಬರಲಿದೆ.
ವಿಧಾನಪರಿಷತ್ ಸಭಾಪತಿ ಸ್ಥಾನದಲ್ಲಿ ತಾವು ಕುಳಿತಿದ್ದ ವೇಳೆ ಕೆಲವು ಸದಸ್ಯರು ಅವಮಾನಕರ ರೀತಿಯಲ್ಲಿ ತಮ್ಮನ್ನು ಕೆಳಗಿಳಿಸಿದ್ದ ಘಟನೆಯಿಂದ ಧರ್ಮೇಗೌಡ ಮನನೊಂದಿದ್ದರು ಎಂದು ಹೇಳಲಾಗಿದೆ. ಧರ್ಮೇಗೌಡ ಅವರ ಆತ್ಮಹತ್ಯೆಗೆ ಪರಿಷತ್ ನಲ್ಲಿ ನಡೆದ ಗಲಾಟೆಗೆ ಕಾರಣವಾಯಿತು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.