No menu items!
12.4 C
Munich
Wednesday, April 29, 2026

ಕನ್ನಡದ ಸೋನುಸೂದ್ ಚಂದನ್ ಶರ್ಮಾ!

Must read

ಕನ್ನಡದ ಸೋನುಸೂದ್ ಚಂದನ್ ಶರ್ಮಾ!

ಬಾಲಿವುಡ್ ನಟ ಸೋನುಸೂದ್ ನಿಮ್ಗೆ ಗೊತ್ತೇ ಇದೆ. ಕೊರೊನಾ ಕಷ್ಟ ಕಾಲದಲ್ಲಿ ರಿಯಲ್ ಹೀರೋಯಿಸಂ ತೋರಿಸಿರುವ ಸ್ಟಾರ್ ನಟ. ಬಹುಶಃ ಅವರ ಬಗ್ಗೆ ಬರೀತಾ ಹೋದ್ರೆ ಪದಗಳೇ ಸಾಲಲ್ಲ. ಅಂಥಾ ಒಬ್ಬ ಸೋನುಸೂದ್ ನಮ್ಮಲ್ಲೇ ಇದ್ದಾರೆ. ಅವರ ಪರಿಚಯ ಕನ್ನಡದ ಪ್ರತಿ ಮನೆ-ಮನಗಳಿಗೂ ಗೊತ್ತು. ಆದ್ರೆ, ಅವರು ಕನ್ನಡದ ಸೋನುಸೂದ್ ಅಂತ ಮಾತ್ರ ಯಾರಿಗೂ ಗೊತ್ತಿಲ್ಲ! ಅರ್ಥಾತ್ ಅವರ ಸಮಾಜಮುಖಿ, ಮಾನವೀಯ‌‌ ಕೆಲಸಗಳು ಸ್ವತಃ ಅವರ ಕುಟುಂಬಕ್ಕೂ ಗೊತ್ತಿರ್ಲಿಕ್ಕಿಲ್ಲ! ಬಲಗೈಯಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರ್ದು ಅನ್ನೋ ಜಾಯಮಾನದ ಮಹಾನುಭಾವ ಆತ.‌


ಅವರೇ ಒನ್ & ಓನ್ಲಿ ಕನ್ನಡದ ಸೋನುಸೂದ್ ಚಂದನ್ ಶರ್ಮಾ!
ಯೆಸ್, ಕನ್ನಡ ಸ್ಟಾರ್ ಆ್ಯಂಕರ್ , ಫೈರ್ ಬ್ರಾಂಡ್ ಜರ್ನಲಿಸ್ಟ್ ಚಂದನ್ ಶರ್ಮಾ ಅವರೇ ಕನ್ನಡದ ಸೋನುಸೂದ್.
ಹೌದು, ಟಿವಿ ಪರದೆಯಲ್ಲಿ, ಫೇಸ್ ಬುಕ್ , ಯೂಟ್ಯೂಬ್ ನಲ್ಲಿ ಇವರ ಮಾತು, ಮಾತಿನ ಶೈಲಿ, ಇವರೊಳಗಿನ ರಿಯಲ್ ಜರ್ನಲಿಸಂ ಕಂಡು ಇಷ್ಟಪಟ್ಟಿದ್ದೀರಿ. ಆದ್ರೆ, ಇವರು ತೆರೆಮರೆಯಲ್ಲಿ ಮಾಡ್ತಿರೋ ಕೆಲಸ ತಿಳಿದ್ರೆ ಮತ್ತಷ್ಟು ಗೌರವಿಸ್ತೀರಿ, ಪ್ರೀತಿಸ್ತೀರಿ…ಅಷ್ಟೇ ಅಲ್ಲ ಸೆಲ್ಯೂಟ್ ಕೂಡ ಹೊಡಿತೀರಿ..!


ಕಳೆದ 11 ವರ್ಷದ ಸುದೀರ್ಘ ಪತ್ರಿಕೋದ್ಯಮದ ಜರ್ನಿಯಲ್ಲಿ ಜನಪ್ರಿಯತೆ, ಖ್ಯಾತಿ, ಕೀರ್ತಿ ಸಂಪಾದಿಸಿರುವ ಚಂದನ್ ಶರ್ಮಾ ಇಂದು ಕನ್ನಡದ ಸ್ಟಾರ್ ನಿರೂಪಕರಲ್ಲಿ ಮುಂಚೂಣಿಯಲ್ಲಿದ್ದಾರೆ. ಕೇವಲ 29ನೇ ವಯಸ್ಸಲ್ಲಿ ಸುದ್ದಿವಾಹಿನಿಯೊಂದರ ಎಕ್ಸಿಕ್ಯೂಟಿವ್ ಎಡಿಟರ್ ಆಗಿ ಅಧಿಕಾರವಹಿಸಿಕೊಂಡಿದ್ದು ಚಂದನ್ ಶರ್ಮಾ ಸಾಧನೆಗೆ ಹಿಡಿದ ಕೈಗನ್ನಡಿ. ಅತೀ ಚಿಕ್ಕ ವಯಸ್ಸಲ್ಲಿ ಎಕ್ಸಿಕ್ಯುಟಿವ್ ಎಡಿಟರ್ ಆಗಿರುವುದು ಶ್ರಮ ಮತ್ತು ಪ್ರತಿಭೆಗೆ ಸಂದ ಗೌರವ.
ಕಲ್ಲುಮುಳ್ಳಿನ ಹಾದೀಲಿ ನಡೆದು ಸ್ಟಾರ್ ಆಗಿರುವ ಚಂದನ್ ಶರ್ಮಾ ತೆರೆ ಮರೆಯಲ್ಲೂ ರಿಯಲ್ ಹೀರೋ!


ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಇಡೀ ನಾಡು ತತ್ತರಿಸಿದೆ.‌ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿದೆ. ಕೋಟಿ ಕೋಟಿ ಕೊಡ್ತೀವಂದ್ರೂ ಬೆಡ್, ಆಕ್ಸಿಜನ್, ರೆಮ್ ಡಿಸಿವರ್ ಸಿಗ್ತಿಲ್ಲ! ಆಸ್ಪತ್ರೆಗಳೆಲ್ಲಾ ಸೋಂಕಿತರಿಂದ ತುಂಬಿ ತುಳುಕುತ್ತಿವೆ. ಇಂಥಾ ಘನಘೋರ ಪರಿಸ್ಥಿತಿಯಲ್ಲಿ ಚಂದನ್ ಶರ್ಮಾ ಮಾನವೀಯತೆ ಮೆರೆದಿದ್ದಾರೆ. ನಾನಾ ಕುಟುಂಬಗಳ ಕಣ್ಣೀರೊರೆಸಿ ಅಭಯ ನೀಡ್ತಿದ್ದಾರೆ. ನಿಮ್ಮ ಮನೆಮಗ ನಾನಿದ್ದೀನಿ..ಆರಾಮಾಗಿರಿ ಎಂದು ಧೈರ್ಯ ತುಂಬ್ತಿದ್ದಾರೆ. ಪತ್ರಿಕೋದ್ಯಮ ತನಗೆ ತಂದುಕೊಟ್ಟಿರುವ ಜನಪ್ರಿಯತೆ, ಕೀರ್ತಿ, ಸ್ಟಾರ್ ಪಟ್ಟ, ಸಜ್ಜನರ ಸಂಘ ಎಲ್ಲವನ್ನೂ ನೊಂದವರಿಗಾಗಿ ಧಾರೆ ಎರೆಯುತ್ತಿದ್ದಾರೆ!


ನಿತ್ಯ ಬಿಡುವಿಲ್ಲದಂತೆ ಜನರ ಕರೆಗಳು ಚಂದನ್ ಶರ್ಮಾಗೆ ಬರ್ತಿವೆ.‌ ಸಾರ್ ದಯವಿಟ್ಟು ಬೆಡ್ ಕೊಡ್ಸಿ, ಐಸಿಯು ಬೇಕು, ಆಕ್ಸಿಜನ್ ಸಿಕ್ತಿಲ್ಲ…ಅರ್ಜೆಂಟಾಗಿ ರೆಮ್ ಡಿಸಿವರ್ ಬೇಕಿದೆ ..ಹೀಗೆ ನೂರಾರು ಸಮಸ್ಯೆಗಳನ್ನು ಹೇಳಿಕೊಂಡು ಜನ ಕಾಲ್ ಮಾಡ್ತಿದ್ದಾರೆ. ಅದೆಷ್ಟೇ ಬ್ಯುಸಿ ಇದ್ರೂ ಪ್ರತಿಯೊಂದು ಕರೆಗಳನ್ನು ಸ್ವೀಕರಿಸಿ‌ ಪ್ರೀತಿಯಿಂದ ಮಾತಾಡಿ, ಅವರ ಸಮಸ್ಯೆಗಳನ್ನು ಆಲಿಸಿ ತತ್ ಕ್ಷಣವೇ ಸ್ಪಂದಿಸುತ್ತಿದ್ದಾರೆ.‌ ತನಗೆ ಪರಿಚಯವಿರುವ ಡಾಕ್ಟರ್ಸ್ , ಆಸ್ಪತ್ರೆ , ಸ್ನೇಹಿತರನ್ನು ಸಂಪರ್ಕಿಸಿ ತನನ್ನು ನಂಬಿ ಕರೆಮಾಡಿ‌ದ್ದ ಅನಾಮಿಕರ ನೋವಿಗೆ, ಕಷ್ಟಕ್ಕೆ ಜೊತೆಯಾಗಿದ್ದಾರೆ..!


ಇಂಥಾ ಕೆಲಸಗಳನ್ನು ಚಂದನ್‌ ಶರ್ಮಾ ಮಾಡ್ತಿರೋದು ಇದೇ ಮೊದಲಲ್ಲ.‌ ಅದೆಷ್ಟೋ ಜನರಿಗೆ ಉಚಿತ ಆಪರೇಷನ್ ಮಾಡಿಸಿದ್ದಾರೆ, ನಾನಾ ಚಿಕಿತ್ಸೆ ಕೊಡಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಒಂದು ದಿನ BMTC ಡ್ರೈವರ್ ರವಿ ಅನ್ನೋರು ಚಂದನ್ ಶರ್ಮಾ ಗೆ ಕಾಲ್ ಮಾಡಿ, “ಸಾರ್ ನನ್ ಹೆಂಡ್ತಿ ಗರ್ಭಿಣಿ, ಕೊರೊನಾ ಸೋಂಕು ತಗುಲಿದೆ.‌ಯಾವ ಆಸ್ಪತ್ರೆಯವ್ರು ಸೇರಿಸಿಕೊಳ್ತಿಲ್ಲ..ಏನ್ ಮಾಡೋದು ಅಂತ ಗೊತ್ತಾಗ್ತಿಲ್ಲ. ದಯವಿಟ್ಟು ಏನಾದ್ರು ಮಾಡಿ ಸಾರ್ ” ಎಂದು ಕೇಳ್ಕೊಂಡ್ರು. ಕೂಡಲೇ ವಾಣಿವಿಲಾಸ ಆಸ್ಪತ್ರೆಯ ಅಧೀಕ್ಷಕಿ ಡಾ.ಗೀತಾ ಶಿವಮೂರ್ತಿಗೆ ಚಂದನ್ ಕಾಲ್ ಮಾಡಿದ್ರು. ಅವರ ಕರೆಗೆ ಸ್ಪಂದಿಸಿದ ಡಾ.ಗೀತಾ ಶಿವಮೂರ್ತಿ ಘೋಷ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿಸಿದ್ರು. ಕೆಲವೇ ದಿನಗಳಲ್ಲಿ ರವಿ ಪತ್ನಿ ಗಂಡು ಮಗುವಿಗೆ ಜನ್ಮನೀಡಿದ್ರು.


ಹೀಗೆ ಪರೋಪಕಾರಿ ಆಗಿರೋ ಚಂದನ್ ಶರ್ಮಾ ಲೈಫ್ ನಲ್ಲಿ ಎಂದು ಮರೆಯಲಾಗದ ನೋವು ಕೂಡ ಇದೆ. 2008 ರಲ್ಲಿ ಅಣ್ಣ ಪವನ್ ಶರ್ಮಾ ಕ್ಯಾನ್ಸರ್ ನಿಂದ ತೀರಿಕೊಂಡ್ರು. ಇಂಜಿನಿಯರಿಂಗ್ ಮಾಡಿದ್ದ, ಮೃದಂಗ ವಿದ್ವಾನ್ ಆಗಿದ್ದ ಅಣ್ಣನ ಸಾವು ಚಂದನ್ ಶರ್ಮಾಗೆ ನಮ್ಮ ವೈದ್ಯಕೀಯ ವ್ಯವಸ್ಥೆಯ ದಿಗ್ಗದರ್ಶನ ಮಾಡಿಸ್ತು. ಬಡವರಿಗೆ ವೈದ್ಯಕೀಯ ಸೌಲಭ್ಯ ಮರೀಚಿಕೆಯಾಗಿಯೇ ಉಳಿದಿದೆ. ನಾನು ಒಂದಿಷ್ಟು ಹೆಸರು,‌ಕೀರ್ತಿ, ದುಡ್ಡು ಸಂಪಾದಿಸಿದ್ರೆ ನಾಲ್ಕು ಜನರಿಗೆ ನನ್ನಿಂದ ಸಹಾಯ ಆಗ್ಬೇಕು ಅಂತ ಅಂದ್ಕೊಂಡ ಚಂದನ್ ಶರ್ಮಾ ಇವತ್ತು ಸದ್ದಿಲ್ಲದೆ ಜನಸೇವೆ ಮಾಡ್ತಿದ್ದಾರೆ.‌


ಹಾಗೆಯೇ ಚಂದನ್ ಶರ್ಮಾಗೆ ದನ-ಕರುಗಳು, ಪ್ರಾಣಿ-ಪಕ್ಷಿಗಳಂದ್ರೂ ಪ್ರಾಣ.‌ ಮೂಕಪ್ರಾಣಿಗಳ ನೋವಿಗೂ, ಹಸಿವಿಗೂ ಮಿಡಿಯುವ ಸಹೃದಯಿ ಚಂದನ್ ಶರ್ಮಾ ಇದುವರೆಗೆ 300ಕ್ಕೂ ಹೆಚ್ಚು ಬೀದಿನಾಯಿಗಳನ್ನು ರಕ್ಷಿಸಿದ್ದಾರೆ.‌
ದಿ ನ್ಯೂ ಇಂಡಿಯನ್ ಟೈಮ್ಸ್ ನೀಡುವ ಜನಪ್ರಿಯ ನಿರೂಪಕ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕಥಾರ್ ಸಮ್ಮಾನ್ ಸೇರಿದಂತೆ ನಾನಾ ಪ್ರಶಸ್ತಿಗೆ ಚಂದನ್ ಭಾಜನರಾಗಿದ್ದಾರೆ.
ಹ್ಞಾಂ ..ಇನ್ನೊಂದು ವಿಷಯ ಹೇಳ್ಲೇಬೇಕು…ಚಂದನ್ ಶರ್ಮಾರ ಅಪ್ಪ-ಅಮ್ಮ ಇಬ್ಬರಿಗೂ ಕೊರೊನಾ ಸೋಂಕು‌ ತಗುಲಿದ್ದು, ಆಸ್ಪತ್ರೆ ಸೇರಿದ್ದಾರೆ. ಅಪ್ಪ-ಅಮ್ಮ ಆಸ್ಪತ್ರೆಯಲ್ಲಿದ್ದರೂ ಅವರ ಆರೋಗ್ಯದ ಬಗ್ಗೆ ಮಾತ್ರವಲ್ಲದೇ ಕರೆ ಮಾಡುವ ಪ್ರತಿಯೊಬ್ಬರಿಗೂ ಅಷ್ಟೇ ತಾಳ್ಮೆ, ಪ್ರೀತಿಯಿಂದ ಸಮಯಕೊಟ್ಟು, ಅವರ ಕಷ್ಟಕ್ಕೆ ಮಿಡಿಯುತ್ತಿದ್ದಾರೆ…
ಇನ್ನು ಈ ಲೇಖನ ಬರೆಯುವ ಮುನ್ನ ಒಮ್ಮೆ ಚಂದನ್ ಶರ್ಮಾ ಅವರ ಜೊತೆ ಮಾತಾಡಣ ಅಂತ ಕಾಲ್ ಮಾಡಿದ್ರೆ, ಅಯ್ಯೋ ನಾನ್ ಏನೂ ಮಾಡ್ತಿಲ್ಲ.. ಡಾಕ್ಟರ್ಸ್, ನರ್ಸ್ ಗಳು ಪೊಲೀಸರು ಸೇರಿದಂತೆ ಅನೇಕ ಕೊರೊನಾ ವಾರಿಯರ್ಸ್ ಪ್ರಾಣ ಒತ್ತೆಯಾಗಿಟ್ಟು ಕೆಲಸ ಮಾಡ್ತಿದ್ದಾರೆ.‌ ಅವ್ರೆಲ್ಲರ ಮುಂದೆ ನಾನು ತೃಣಮಾತ್ರ. ಎಷ್ಟೋ ಜನರಿಗೆ ಸಹಾಯ ಮಾಡಲು ಆಗ್ತಿಲ್ವಲ್ಲಾ ಎಂಬ ಕೊರಗು ಇದೆ.. ನನ್ ಬಗ್ಗೆ ಬರೆಯುವಂತಹದ್ದಯ ಏನೂ‌ ಇಲ್ಲ ಎಂದು ವಿನಮ್ರವಾಗಿ ತಿರಸ್ಕರಿಸಿದ್ರು.

ಆದ್ರೆ ಅವರ ಕೆಲಸಗಳು ಗೊತ್ತಿದ್ದೂ ಬರೀದೆಯಿದ್ರೆ , ನಾಲ್ಕು ಜನರಿಗೆ ತಿಳಿಸದಿದ್ರೆ ಹೇಗೆ? ಚಂದದ ಚಂದನ್ ಮನಸ್ಸು ಕೂಡ ಅಷ್ಟೇ ಚಂದ…ಚಂದನ್ ಶರ್ಮಾ ಅಂದ್ರೆ ಇಷ್ಟೇ ಅಲ್ಲ..ಇನ್ನೂ ಅನೇಕ ಇಂಟ್ರೆಸ್ಟಿಂಗ್ ವಿಷಯಗಳಿವೆ…ಅವುಗಳ ಬಗ್ಗೆ ಇನ್ನೊಮ್ಮೆ ಬರಿತೀವಿ…ಸದ್ಯಕ್ಕೆ ಇಷ್ಟು ಸಾಕು…ಈಗ ನೀವೇ ಹೇಳಿ.. ಚಂದನ್ ಕನ್ನಡದ ಸೋನು‌ಸೂದ್ ಅಲ್ವೇ?

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article