ಕುಮಾರಸ್ವಾಮಿ-ಕಟೀಲ್ ಭೇಟಿ; ಬಿಜೆಪಿ-ಜೆಡಿಎಸ್ ಮೈತ್ರಿ!

0
40

ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಪ್ರಯತ್ನವನ್ನು ನಡೆಸುತ್ತಿದೆ. ಮೇಯರ್ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಆಗಸ್ಟ್ 25 ಬುಧವಾರ ನೂತನ ಮೇಯರ್ ಆಯ್ಕೆ ನಡೆಯಲಿದೆ.

ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ಪಡೆಯಲು ಬಿಜೆಪಿ ಉತ್ಸಾಹ ತೋರಿದೆ. ಕಳೆದ ಬಾರಿಯ ಮೇಯರ್ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರವನ್ನು ಪಡೆದಿದ್ದವು. ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿ ರುಕ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದರು. ಆದರೆ 2018ರಲ್ಲಿ ನಡೆದ ಚುನಾವಣೆ ವೇಳೆ ಆದಾಯ ಮುಚ್ಚಿಟ್ಟ ಪ್ರಕರಣದಲ್ಲಿ ಅವರ ಸದಸ್ಯತ್ವವನ್ನೇ ಹೈಕೋರ್ಟ್ ರದ್ದುಪಡಿಸಿತ್ತು. ಆದ್ದರಿಂದ ಅವರು ಪ್ರತಿನಿಧಿಸುವ ವಾರ್ಡ್‌ಗೆ ಹೊಸದಾಗಿ ಚುನಾವಣೆ ನಡೆಯುತ್ತಿದೆ.

 

ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ. ಎಸ್. ಶ್ರೀವತ್ಸ ಈ ಕುರಿತು ಮಾತನಾಡಿದ್ದಾರೆ, “ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ ಬಳಿಕ ಸ್ಥಳೀಯ ನಾಯಕರ ಜೊತೆ ಮಾತುಕತೆ ನಡೆಯಲಿದೆ” ಎಂದು ಹೇಳಿದ್ದಾರೆ. ಬಿಜೆಪಿಗೆ ಮೇಯರ್ ಸ್ಥಾನ ನೀಡಿದರೆ ಮಾತ್ರ ಜೆಡಿಎಸ್ ಜೊತೆ ಮೈತ್ರಿ ಎಂಬ ನಿಲುವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ. ಆದರೆ ಇದಕ್ಕೆ ಜೆಡಿಎಸ್ ನಾಯಕರು ಅದರಲ್ಲೂ ಮೈಸೂರು ಭಾಗದ ಜೆಡಿಎಸ್ ಶಾಸಕರು ಒಪ್ಪಿಗೆ ನೀಡಲಿದ್ದಾರೆಯೇ? ಎಂಬ ಪ್ರಶ್ನೆ ಈಗ ಎದುರಾಗಿದೆ.

ಬಿಜೆಪಿ ಮೈಸೂರು ಮಹಾನಗರ ಪಾಲಿಕೆಯಲ್ಲಿ 23 ಸ್ಥಾನಗಳನ್ನು ಹೊಂದಿದೆ. ಹೆಚ್ಚು ಸದಸ್ಯರು ಇರುವ ಕಾರಣ ಮೇಯರ್ ಪಟ್ಟ ನಮಗೆ ನೀಡಬೇಕು ಎಂಬುದು ಬಿಜೆಪಿಯ ಬೇಡಿಕೆ. ಕಳೆದ ಬಾರಿ ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಸುನಂದಾ ಪಾಲನೇತ್ರರನ್ನು ಈ ಬಾರಿಯೂ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.

ಇನ್ನು ರುಕ್ಮಿಣಿ ಮಾದೇಗೌಡ ಸ್ಪರ್ಧಿಸುತ್ತಿದ್ದ ವಾರ್ಡ್‌ ನಂಬರ್ 36ರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಿಂದ ಅರ್ಜಿ ಕರೆದಿದೆ. ಶುಕ್ರವಾರದೊಳಗೆ ಅಭ್ಯರ್ಥಿ ಅಂತಿಮಗೊಳಿಸಲಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಶಾಸಕ ಎಲ್. ನಾಗೇಂದ್ರರನ್ನು ಉಪ ಚುನಾವಣೆ ಉಸ್ತುವಾರಿಯಾಗಿ ಬಿಜೆಪಿ ನೇಮಕ ಮಾಡಿದೆ. ಕಳೆದ ಬಾರಿ 400 ಮತಗಳನ್ನು ಪಡೆದು ಸಹ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದರು. ಈ ಬಾರಿ ಬಿಜೆಪಿಗೆ ಪೂರಕವಾದ ವಾತಾವರಣವಿದೆ ಎಂಬುದು ನಾಯಕರ ವಿಶ್ವಾಸವಾಗಿದೆ.

ಕಳೆದ ಬಾರಿ ಮೇಯರ್ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ನಡೆದಿತ್ತು. ಶಾಸಕ ತನ್ವೀರ್ ಸೇಠ್ ಮೈತ್ರಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆದರೆ ಮೈತ್ರಿ ಬಳಿಕ ಕಾಂಗ್ರೆಸ್ ನಾಯಕರು ತನ್ವೀರ್ ಸೇಠ್ ವಿರುದ್ಧ ಅಸಮಾಧಾನಗೊಂಡಿದ್ದರು.

ಈ ಹಿನ್ನಲೆಯಲ್ಲಿ ಈ ಬಾರಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ನಿಲುವು ಏನು? ಎಂಬುದು ಇನ್ನೂ ಅಂತಿಮವಾಗಿಲ್ಲ. ಮೇಯರ್ ಪಟ್ಟವನ್ನು ಕಾಂಗ್ರೆಸ್ ಬಿಟ್ಟುಕೊಡಲಿದೆಯೇ? ಎಂದು ಕಾದು ನೋಡಬೇಕಿದೆ.

ಕಳೆದ ಬಾರಿ ಸಹ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾತುಕತೆ ನಡೆದಿತ್ತು. ಎಚ್. ಡಿ. ಕುಮಾರಸ್ವಾಮಿ ಮೈಸೂರಿಗೆ ತೆರಳಿ ಪಕ್ಷದ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ನಡೆದಿತ್ತು.

LEAVE A REPLY

Please enter your comment!
Please enter your name here