ಕೆಪಿಸಿಸಿ ಸಾರಥಿ ಡಿ.ಕೆ. ಶಿವಕುಮಾರ್ ತವರು ಜಿಲ್ಲೆ ರಾಮನಗರ ಕಾಂಗ್ರೆಸ್ ಮುಖಂಡರ ಒಳ ಜಗಳ ಬೀದಿಗೆ ಬಂದಿದೆ. ಅದರಲ್ಲೂ ಡಿಕೆ ಸಹೋದರರ ಅಪ್ತ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಅವರನ್ನು ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಪರಾಜಿತ ಅಭ್ಯರ್ಥಿಗಳು ಆಗ್ರಹಿಸಿದರು.
ರಾಮನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ 2ನೇ ವಾರ್ಡ್ನ ಪರಾಜಿತ ಅಭ್ಯರ್ಥಿ ಶಿವಕುಮಾರಸ್ವಾಮಿ, 23ನೇ ವಾರ್ಡ್ನ ಪ್ಯಾರಿ ಫಯಾಜ್ ಹಾಗೂ 24ನೇ ವಾರ್ಡ್ ಅಭ್ಯರ್ಥಿ ಸಯೀದಾ ಬಾನು ಪತಿ ಫಯಾಜ್ ಪಾಷಾ ಪಕ್ಷ ವಿರೋಧಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ದೆಹಲಿವರೆಗೂ ತೆರಳಲು ತಯಾರಿರುವುದಾಗಿ ಎಚ್ಚರಿಕೆ ನೀಡಿದರು.
2ನೇ ವಾರ್ಡ್ನ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಶಿವಕುಮಾರಸ್ವಾಮಿ ಮಾತನಾಡಿ, “2ನೇ ವಾರ್ಡ್ನಿಂದ ಸ್ಪರ್ಧಿಸಲು ನಮ್ಮ ನಾಯಕರು ನನಗೆ ಬಿ ಫಾರ್ಮ್ ನೀಡಿದ್ದರು. ಆದರೆ, ರಾಮನಗರ ವಿಧಾನಸಭಾ ಕ್ಷೇತ್ರದ 2018ರ ಪರಾಜಿತ ಅಭ್ಯರ್ಥಿ ಇಕ್ಬಾಲ್ ಹುಸೇನ್, ನಗರಸಭೆ ಮಾಜಿ ಸದಸ್ಯ ಡಿ.ಕೆ.ಶಿವಕುಮಾರ್, ಮಾಜಿ ಅಧ್ಯಕ್ಷೆ ರತ್ನಮ್ಮ ಪತಿ ಪಾಪಣ್ಣ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ,” ಎಂದು ಆರೋಪಿಸಿದರು.