ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ಅಡಿಯಲ್ಲಿ ಈಗಾಗಲೇ 2 ಅತ್ಯುತ್ತಮ ಚಿತ್ರಗಳು ಬಂದಿವೆ. ಈ ಇಬ್ಬರ ಕಾಂಬಿನೇಷನ್ ಅಡಿಯಲ್ಲಿ ಬಂದ ಮೊದಲನೆಯ ಚಿತ್ರ ರಾಜಕುಮಾರ ಕನ್ನಡ ಚಿತ್ರರಂಗದಲ್ಲಿ ಶಾಶ್ವತ ಇಂಡಸ್ಟ್ರಿ ಹಿಟ್ ಆಗಿಯೇ ಉಳಿದುಕೊಂಡಿದೆ. ಹೀಗೆ ಈ ಕಾಂಬಿನೇಷನ್ ಮೊದಲ ಚಿತ್ರದಲ್ಲಿಯೇ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆದ ನಂತರ ಮತ್ತೊಮ್ಮೆ ಹೊಂಬಾಳೆ ಫಿಲ್ಮ್ಸ್ ಜೊತೆ ಕೈಜೋಡಿಸಿ ಯುವರತ್ನ ಎಂಬ ಉತ್ತಮ ಸಂದೇಶವುಳ್ಳ ಚಿತ್ರವನ್ನ ಮಾಡಿದ್ದರು.
ಹೀಗೆ ರಾಜಕುಮಾರ ಮತ್ತು ಯುವರತ್ನ ಎಂಬ 2 ದೊಡ್ಡ ಚಿತ್ರಗಳನ್ನು ಕೊಟ್ಟಿದ್ದ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಜೋಡಿ ಮತ್ತೊಂದು ಸಿನಿಮಾದಲ್ಲಿ ಕೆಲಸ ಮಾಡಲು ಸಜ್ಜಾಗಿತ್ತು. ಪುನೀತ್ ಮತ್ತು ಸಂತೋಷ್ ಕಾಂಬಿನೇಷನ್ ಅಡಿಯಲ್ಲಿ ಚಿತ್ರ ಬರುತ್ತಿದೆ ಎಂದರೆ ಬಾಕ್ಸ್ ಆಫೀಸ್ ಶೇಕ್ ಆಗುವುದು ಎಂಬುದನ್ನು ಅರಿತಿದ್ದ ಜನತೆ ಹಾಗೂ ಸಿನಿ ರಸಿಕರು ಈ ಇಬ್ಬರ ಕಾಂಬಿನೇಷನ್ ನಲ್ಲಿ ಬರಲಿರುವ ಮುಂದಿನ ಚಿತ್ರ ಯಾವುದರ ಆಧಾರದ ಮೇಲೆ ಇರಲಿದೆ ಎಂಬ ಕುತೂಹಲಕ್ಕೆ ಒಳಗಾಗಿದ್ದರು.
ಈ ಹಿಂದೆ ಸಂತೋಷ್ ಆನಂದ್ ರಾಮ್ ತಿಳಿಸಿದಂತೆ ಪುನೀತ್ ಮತ್ತು ಅವರ ಕಾಂಬಿನೇಷನ್ ನಲ್ಲಿ ಬರಬೇಕಿದ್ದ ಆ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಕ್ಯಾಟಗರಿಯ ಚಿತ್ರವಾಗಿತ್ತು. ಆದರೆ ಈ ಚಿತ್ರ ಸೆಟ್ಟೇರುವ ಮುನ್ನವೇ ಪುನೀತ್ ನಿಧನ ಹೊಂದಿರುವುದರಿಂದ ಆ ಚಿತ್ರ ನಿಂತು ಹೋಗುತ್ತಾ ಅಥವಾ ಬೇರೆ ನಟರಿಗೆ ಆ ಚಿತ್ರವನ್ನು ಸಂತೋಷ್ ಮಾಡುತ್ತಾರಾ ಎಂಬ ಪ್ರಶ್ನೆಗಳು ಎದ್ದಿದ್ದವು. ಈ ಪ್ರಶ್ನೆಗಳಿಗೆ ಇದೀಗ ಉತ್ತರ ದೊರೆತಿದ್ದು ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಪುನೀತ್ ನಟಿಸಬೇಕಿದ್ದ ಈ ಚಿತ್ರಕ್ಕೆ ಪುನೀತ್ ಅವರ ಅಣ್ಣನ ಮಗನಾದ ಯುವ ರಾಜ್ ಕುಮಾರ್ ನಾಯಕನಾಗಲಿದ್ದಾರೆ.
ಹೌದು ಪುನೀತ್ ರಾಜ್ ಕುಮಾರ್ ನಟಿಸಬೇಕಿದ್ದ ಚಿತ್ರಕ್ಕೆ ಇದೀಗ ಯುವ ರಾಜ್ ಕುಮಾರ್ ನಾಯಕನಾಗಲಿದ್ದು ಇದೆ ಯುವ ರಾಜ್ ಕುಮಾರ್ ಪಾಲಿಗೆ ಚೊಚ್ಚಲ ಚಿತ್ರವಾಗಲಿದೆ. ಹೀಗಾಗಿ ಈ ಹಿಂದೆ ಘೋಷಣೆಯಾಗಿದ್ದ ಯುವ ರಾಜ್ ಕುಮಾರ್ ಅವರ ಯುವ ರಣಧೀರ ಕಂಠೀರವ ಚಿತ್ರ ಮುಂದೂಡಲ್ಪಡಲಿದೆ. ಒಟ್ಟಿನಲ್ಲಿ ಡಾನ್ಸ್ ಸ್ಟಂಟ್ ಗಳನ್ನು ಚಿಕ್ಕಪ್ಪನ ರೀತಿಯೇ ಮಾಡುವ ಯುವ ರಾಜ್ ಕುಮಾರ್ ಅವರಿಗೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುವುದು ನೆಮ್ಮದಿಯ ವಿಚಾರ ಎಂದು ಅಪ್ಪು ಅಭಿಮಾನಿಗಳು ಈ ನಿರ್ಧಾರವನ್ನ ಮನಸಾರೆ ಒಪ್ಪಿಕೊಂಡಿದ್ದಾರೆ. ಈ ಚಿತ್ರ ಜನವರಿ ಮೊದಲನೇ ಅಥವಾ ಎರಡನೇ ವಾರದಂದು ಘೋಷಣೆಯಾಗಲಿದೆ ಎಂಬ ಸುದ್ದಿ ಕೂಡ ಹೊರಬಿದ್ದಿದ್ದು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡಿಬರಲಿದೆ ಎಂಬ ಸುದ್ದಿ ಇದೆ.