ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಡುವೆ ಮಾತಿನ ಸಮರಕ್ಕೆ ಬ್ರೇಕ್ ಬಿದ್ದಿಲ್ಲ. ಇದಕ್ಕೆ, ಇನ್ನಷ್ಟು ರೆಕ್ಕೆಪುಕ್ಕಗಳು ಸೇರುತ್ತಿವೆ.
ಪ್ರಜ್ವಲ್ ರೇವಣ್ಣ ಅವರಿಂದ ಕುಮಾರಸ್ವಾಮಿ ಕಲಿಯಲಿ ಎನ್ನುವ ಸುಮಲತಾ ಹೇಳಿಕೆಗೆ ಎಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದು, “ದೇವೇಗೌಡ್ರು ಬದುಕಿರುವವರೆಗೆ ನಮ್ಮ ಕುಟುಂಬವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ”ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರೇವಣ್ಣ, “ಸುಮಲತಾ ಹೇಳಿಕೆಯಿಂದ ನಮ್ಮ ಕುಟುಂಬದಲ್ಲಿ ಏನೂ ಒಡಕು ಮೂಡುವುದಿಲ್ಲ. ಸುಮಲತಾ ಏನೇನೋ ಹೇಳಿಕೆ ನೀಡುತ್ತಿದ್ದಾರೆ, ನಮ್ಮನಮ್ಮಲ್ಲಿ ಹೊಡೆದಾಡಿ ಕೊಳ್ಳಲು ಈ ರೀತಿ ಅವರು ಹೇಳಿಕೆ ನೀಡುತ್ತಿದ್ದಾರಾ ಎಂದು ಪ್ರಜ್ವಲ್ ರೇವಣ್ಣ ನನಗೆ ಬೇಸರದಿಂದ ಫೋನ್ ಮಾಡಿದ್ದ”ಎಂದು ಈ ಸಂದರ್ಭದಲ್ಲಿ ಹೇಳಿದರು.
“ಕುಮಾರಸ್ವಾಮಿಗೆ ಡಬಲ್ ಗೇಂ ಆಡೋ ಬುದ್ದಿಯಿಲ್ಲ. ಗಣಿಗಾರಿಕೆ ಬಗ್ಗೆ ತನಿಖೆ ನಡೆಯಲಿ ಎಂದು ಅವರು ಈಗಾಗಲೇ ಹೇಳಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿ ಏನೇನು ಒಳ್ಳೆಯ ಕೆಲಸವನ್ನು ಅವರು ಮಾಡಿದ್ದಾರೆ ಎನ್ನುವುದನ್ನು ಪಟ್ಟಿ ಮಾಡಿ ಹೇಳಬೇಕಾಗುತ್ತದೆ”ಎಂದು ರೇವಣ್ಣ ಹೇಳಿದರು.
“ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವಾಗ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ನಿಧನರಾದಾಗ ಯಾವರೀತಿ ನಡೆದುಕೊಂಡರು ಎನ್ನುವುದು ರಾಜ್ಯದ ಜನತೆಗೆ ಇದೆ. ಅವರು ಬಡವರ ಪರ ಕೆಲಸ ಮಾಡುತ್ತಾರೆ”ಎಂದು ರೇವಣ್ಣ ಸಹೋದರನ ಬಗ್ಗೆ ಗೌರವದ ಮಾತನಾಡಿದರು.
“ಕುಮಾರಸ್ವಾಮಿ ಎಂದೂ ದ್ವೇಷದ ರಾಜಕಾರಣ ಮಾಡಿದವರಲ್ಲ. ಬಡವರ ಬಗ್ಗೆ ಕರುಣೆ ಇರುವ ರಾಜಕಾರಣಿಯವರು. ಸುಮಲತಾ ಹೇಳಿಕೆಯಿಂದ ನಮ್ಮ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ”ಎಂದು ರೇವಣ್ಣ ಹೇಳಿದರು.