ಉಗ್ರಂ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ನಿರ್ದೇಶಕ ಪ್ರಶಾಂತ್ ನೀಲ್ ಮೊದಲ ಚಿತ್ರದಲ್ಲಿಯೇ ತನ್ನಲ್ಲಿ ದೊಡ್ಡಮಟ್ಟದ ಪ್ರತಿಭೆ ಇದೆ ಎಂಬುದನ್ನು ಸಾಬೀತುಪಡಿಸಿಕೊಂಡರು. ಉಗ್ರಂ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕೆಲ ವರ್ಷಗಳ ನಂತರ ಪ್ರಶಾಂತ್ ನೀಲ್ ಕೆಜಿಎಫ್ ಪ್ರಾಜೆಕ್ಟನ್ನು ಕೈಗೆತ್ತಿಕೊಂಡರು. ಕನ್ನಡದಲ್ಲಿ ಇಂಥದ್ದೊಂದು ಚಿತ್ರ ಬರುತ್ತದೆ ಎಂದು ಯಾರೂ ಊಹಿಸದ ರೀತಿಯಲ್ಲಿ ಕೆಜಿಎಫ್ ಚಿತ್ರವನ್ನು ಪ್ರಶಾಂತ್ ನೀಲ್ ಕಟ್ಟಿಕೊಟ್ಟರು.
ಸದ್ಯ ಕೆಜಿಎಫ್ ಎರಡನೇ ಭಾಗದ ಚಿತ್ರೀಕರಣ ಮುಗಿಸಿರುವ ಪ್ರಶಾಂತ್ ನೀಲ್ ತೆಲುಗಿನ ಪ್ರಭಾಸ್ ಗೆ ಸಲಾರ್ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಉಗ್ರಂ ಮತ್ತು ಕೆಜಿಎಫ್ ಚಿತ್ರಗಳು ಮುಗಿದ ನಂತರ ಕನ್ನಡದ ಯಾವುದೇ ಚಿತ್ರವನ್ನು ಪ್ರಶಾಂತ್ ನೀಲ್ ಘೋಷಿಸಿಲ್ಲ. ಬದಲಾಗಿ ತೆಲುಗಿನ ಸಲಾರ್ ಸಿನಿಮಾ ನಂತರ ಇದೀಗ ಜ್ಯೂನಿಯರ್ ಎನ್ ಟಿಆರ್ ಜತೆ ಸಿನಿಮಾ ಮಾಡುವುದಾಗಿ ಪ್ರಶಾಂತ್ ನೀಲ್ ಎನ್ಟಿಆರ್ ಹುಟ್ಟುಹಬ್ಬದ ದಿನ ಹೇಳಿಕೊಂಡಿದ್ದಾರೆ.
ಈ ಸುದ್ದಿ ಇದೀಗ ಕನ್ನಡಿಗರ ಕೋಪಕ್ಕೆ ಕಾರಣವಾಗಿದ್ದು ಕನ್ನಡದ ಕೆಜಿಎಫ್ ಮೂಲಕ ಹೆಸರು ಮಾಡಿಕೊಂಡು ಇದೀಗ ಕನ್ನಡ ನಟರಿಗೆ ಸಿನಿಮಾ ಮಾಡದೆ ತೆಲುಗು ನಟನ ಹಿಂದೆ ಪ್ರಶಾಂತ್ ನೀಲ್ ಬಿದ್ದಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಸಲಾರ್ ಚಿತ್ರ ಇನ್ನೂ ಚಿತ್ರೀಕರಣ ನಡೆಯುತ್ತಿದೆ ಆಗಲೇ ಮತ್ತೊಂದು ತೆಲುಗು ಚಿತ್ರವನ್ನು ನಿರ್ದೇಶನ ಮಾಡಲಿದ್ದೇನೆ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ ಅದರ ಜೊತೆಗೆ ಅಲ್ಲು ಅರ್ಜುನ್ ಜೊತೆ ಕೂಡ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಇದನ್ನೆಲ್ಲಾ ನೋಡಿದರೆ ಮತ್ತೆ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗದತ್ತ ಮುಖ ಮಾಡುವುದು ಅನುಮಾನ, ಹೀಗಾಗಿ ಕನ್ನಡದ ಹೆಸರಿನಲ್ಲಿ ಬೆಳೆದು ಇದೀಗ ಕನ್ನಡಿಗರನ್ನೇ ಕಡೆಗಣಿಸುತ್ತಿರುವ ಕನ್ನಡದ್ರೋಹಿ ಪ್ರಶಾಂತ್ ನೀಲ್ ಅವರಿಗೆ ಗುಡ್ ಬೈ ಎಂದು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.