No menu items!
12.3 C
Munich
Thursday, April 30, 2026

ಪ್ಲಾಸ್ಟಿಕ್ , ರಬ್ಬರ್ ತ್ಯಾಜ್ಯದಿಂದ ಅಂದದ ಮನೆ!

Must read

ಇವರು ಆಸ್ಕರ್ ಆಂಡ್ರೆಸ್ ಮೆಂಡೆಜ್. ಬೆಳೆದಿದ್ದೆಲ್ಲ ಬಗೋಟಾ ಹಾಗೂ ಕೊಲಂಬಿಯಾದಲ್ಲಿ. ಇವರಿಗೆ ವಾಸ್ತುಶಿಲ್ಪಿ ಹಾಗೂ ಸಾಮಾಜಿಕ ಉದ್ಯಮದಲ್ಲಿ ಬಹಳ ಆಸಕ್ತಿ. ಹೀಗಾಗಿ ಇವೆರಡೂ ಸಮಸ್ಯೆಗಳನ್ನು ಬಗೆಹರಿಸಲು ಪಣತೊಟ್ಟ ಆಸ್ಕರ್, ಕಾನ್ಸೆಪ್ಟಸ್ ಪ್ಲಾಸ್ಟಿಕೊಸ್’ ಎಂಬ ಕಂಪನಿಯೊಂದನ್ನು ಹುಟ್ಟುಹಾಕಿದ್ರು.
ಆಸ್ಕರ್ ಅವರಿಗೆ ಲ್ಯಾಟಿನ್ ಅಮೆರಿಕದಲ್ಲಿ ಪ್ಲಾಸ್ಟಿಕ್ ತ್ಯಾಜಗಳಿಂದ ಉಂಟಾಗುತ್ತಿದ್ದ ಗಂಭೀರ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿತ್ತು. ಅಷ್ಟೇ ಅಲ್ಲ ಲ್ಯಾಟಿನ್ ಅಮೆರಿಕದ ಪ್ರತಿ ರಾಷ್ಟ್ರದಲ್ಲೂ ಶೇ.45ರಷ್ಟು ವಸತಿ ಕೊರತೆ ಕೂಡ ಇದೆ ಎನ್ನುವುದು ಗೊತ್ತು. ಅದಕ್ಕಾಗಿ ಕಾನ್ಸೆಪ್ಟಸ್ ಪ್ಲಾಸ್ಟಿಕೊಸ್’ ಅನ್ನೋ ಸುಸ್ಥಿರ ನಿರ್ಮಾಣ ಸಂಸ್ಥೆ ಸ್ಥಾಪಿಸಿದರು. ಈ ಕಂಪನಿ ರಬ್ಬರ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದಿಂದ ಮನೆ ನಿರ್ಮಾಣಕ್ಕೆ ಬೇಕಾದ ವಸ್ತುಗಳನ್ನು ತಯಾರಿಸುತ್ತಿದೆ.
ಆಸ್ಕರ್ ಅವರ ಸಂಸ್ಥೆ ನಿರ್ಮಾಣ ಮಾಡುವ ಮನೆಗಳು ಅತ್ಯಂತ ಅಗ್ಗ. ಬೆಂಕಿ ಅನಾಹುತ, ಭೂಕಂಪದಂತಹ ಪ್ರಕೃತಿ ವಿಕೋಪಗಳಿಂದಲೂ ಈ ಮನೆಗಳಿಗೆ ಹಾನಿಯಾಗುವುದಿಲ್ಲ. ಈ ಮನೆಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಆರಾಮಾಗಿ ಸಾಗಿಸಬಹುದು. ಇವುಗಳನ್ನು ಕಳಚಿ ಮತ್ತೆ ಜೋಡಿಸುವುದು ಕೂಡ ಸುಲಭ.


ವಿಶೇಷ ಅಂದ್ರೆ ನಿಮ್ಮ ಮನೆಗಳನ್ನು ಖುದ್ದು ನೀವೇ ನಿರ್ಮಿಸಿಕೊಳ್ಳಬಹುದು, ಅದಕ್ಕೆ ಗಾರೆ ಕೆಲಸದವರಾಗಲಿ ಅಥವಾ ಕೂಲಿ ಕಾರ್ಮಿಕರ ಅಗತ್ಯವಿಲ್ಲ. ಮನೆಗಳ ನಿರ್ಮಾಣ ಹೇಗೆ ಎಂಬ ಬಗ್ಗೆ ತರಬೇತಿ ಕೂಡ ನೀಡಲಾಗುತ್ತದೆ. ಅತ್ಯಂತ ಕಡಿಮೆ ನೀರು ಹಾಗೂ ವಿದ್ಯುತ್ ಬಳಸಿಕೊಂಡು ಬೇಡದ ಪ್ಲಾಸ್ಟಿಕ್ಗಳಿಂದ ಮನೆ ನಿರ್ಮಾಣಕ್ಕೆ ಬೇಕಾದ ವಸ್ತುಗಳನ್ನು ತಯಾರಿಸಲಾಗುತ್ತದೆ. ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ಕೂಡ ಅತ್ಯಂತ ಕಡಿಮೆಯಾಗಿರುತ್ತದೆ.
ತಮ್ಮ ಉದ್ಯಮ ಬಡತನ ನಿರ್ಮೂಲನೆಗೆ ಸಹಕಾರಿ ಎನ್ನುತ್ತಾರೆ ಆಸ್ಕರ್. ಅಷ್ಟೇ ಅಲ್ಲ ಅನೌಪಚಾರಿಕ ವಸಾಹತುಗಳಲ್ಲಿ ಪರಿಸರೀಯ ಅಪಾಯಗಳನ್ನು ತಪ್ಪಿಸುತ್ತೆ, ಸುಸ್ಥಿರ ನಿರ್ಮಾಣವನ್ನು ಪ್ರೋತ್ಸಾಹಿಸುತ್ತೆ. ವಿಸ್ತಾರವಾಗಿ ಹೇಳಬೇಕೆಂದರೆ ಆಸ್ಕರ್ ಅವರು ಆರಂಭಿಸಿರುವ ಈ ಉದ್ಯಮ ಹವಾಮಾನ ಬದಲಾವಣೆ ಮೇಲೆ ದೀರ್ಘಕಾಲ ಧನಾತ್ಮಕ ಪರಿಣಾಮ ಬೀರಲಿದೆ. ಆರ್ಥಿಕ ಬೆಳವಣಿಗೆ ಹಾಗೂ ದೇಶದ ಅಭಿವೃದ್ಧಿಗೂ ಸಹಕಾರಿ. ಈ ಉದ್ಯಮದಲ್ಲಿ ಸ್ಪಷ್ಟವಾದ ಸಾಮಾಜಿಕ, ಆರ್ಥಿಕ ಮತ್ತು ನೈಸರ್ಗಿಕ ಪರಿಣಾಮಗಳಿವೆ.


ಇನ್ನು ನಾವು ಯೋಗ್ಯ ವಸತಿ ಪರಿಹಾರಗಳನ್ನು ಒದಗಿಸುವ ಮೂಲಕ ದುರ್ಬಲ ಸಮುದಾಯಗಳ ಸಾಮಾಜಿಕ ಪ್ರಗತಿಯನ್ನು ಪ್ರೋತ್ಸಾಹಿಸುತ್ತೇವೆ. ಈ ಮನೆಗಳನ್ನು ಜೋಡಿಸುವುದು ಸುಲಭ ಮತ್ತು ಎಲ್ಲ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ. ಅದರರ್ಥ ತಮ್ಮ ಸಮುದಾಯಗಳ ಪುನರ್ ನಿರ್ಮಾಣದಲ್ಲಿ ಜನರು ಅಕ್ಷರಶಃ ಪಾಲ್ಗೊಳ್ಳುವಂತೆ ಮಾಡುತ್ತಿದ್ದೇವೆ” ಅನ್ನೋದು ಆಸ್ಕರ್ ಅವರ ಹೆಮ್ಮೆಯ ನುಡಿ.
ಅಷ್ಟೇ ಅಲ್ಲ ಆಸ್ಕರ್ ಅವರ ಈ ಉದ್ಯಮದಿಂದ ಆರ್ಥಿಕ ಪರಿಣಾಮಗಳೂ ಇವೆ. ಸಮುದಾಯಗಳೊಳಗೆ ಜನರು ಸ್ವಾವಲಂಬಿಗಳಾಗುತ್ತಿದ್ದಾರೆ. ಅವರಿಗೆ ಉದ್ಯೋಗ ಕೂಡ ದೊರೆಯುತ್ತಿದೆ. ಪ್ಲಾಸ್ಟಿಕ್, ರಬ್ಬರ್ ತ್ಯಾಜ್ಯದಿಂದ ಮನೆಗಳ ನಿರ್ಮಾಣ ಮಾಡುತ್ತಿರುವುದರಿಂದ ಪರಿಸರ ಮಾಲಿನ್ಯವೂ ತಗ್ಗಲಿದೆ. ನೀರು ಮತ್ತು ವಿದ್ಯುತ್ ಉಳಿತಾಯವಾಗುತ್ತಿದೆ.

ಇನ್ನು ಆಸ್ಕರ್ ಬೆಳೆದಿದ್ದೆಲ್ಲ ಬಗೋಟಾದಲ್ಲಿ. ಮೊದಲಿನಿಂದ್ಲೂ ಅವರಿಗೆ ನಗರದ ವಾಸ್ತುಶಿಲ್ಪಗಳ ಮೇಲೆ ಅಪಾರ ಒಲವಿತ್ತು. ಶಾಲೆಯಲ್ಲಿ ಕಲಿಸುತ್ತಿದ್ದ ಮೌಲ್ಯಗಳನ್ನೂ ಅವರು ಪಾಲಿಸುತ್ತಿದ್ದರು. ಭವಿಷ್ಯದಲ್ಲಿ ಅವರ ಉದ್ಯಮವನ್ನು ಕಟ್ಟಿ ಬೆಳೆಸುವಲ್ಲಿ ಪೋಷಕರ ಕೊಡುಗೆ ಕೂಡ ಅಪಾರ.
ಸಮಾನತೆ ಹಾಗೂ ಅವಕಾಶಗಳು ಎಲ್ಲರಿಗೂ ದಕ್ಕಬೇಕೆಂಬ ನೀತಿ ಪಾಠ ಹೇಳಿಕೊಟ್ಟಿದ್ದರು. ಅದೇ ಹಾದಿಯಲ್ಲಿ ಸಾಗಿರುವ ಆಸ್ಕರ್ ಇವತ್ತಿಗೂ ಬಗೋಟಾದಲ್ಲೇ ನೆಲೆಸಿದ್ದಾರೆ. ಉದ್ಯಮದ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article