ಪುನೀತ್ ರಾಜ್ ಕುಮಾರ್ ಮತ್ತು ತೆಲುಗು ನಟ ಅಲ್ಲು ಅರ್ಜುನ್ ನಡುವೆ ಉತ್ತಮ ಸ್ನೇಹ ಬಾಂಧವ್ಯ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಬೆಂಗಳೂರಿಗೆ ಆಗಮಿಸಿದ ಹಲವಾರು ಬಾರಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿಯಾಗಿ ಕೆಲ ಹೊತ್ತು ಸಮಯ ಕಳೆಯುತ್ತಿದ್ದ ಅಲ್ಲು ಅರ್ಜುನ್ ಈ ಹಿಂದೆ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರದ ತೆಲುಗು ಡಬ್ಬಿಂಗ್ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಕೂಡ ಮುಖ್ಯ ಅತಿಥಿಯಾಗಿ ಬಂದು ಪುನೀತ್ ರಾಜ್ ಕುಮಾರ್ ಅವರನ್ನು ಹಾಡಿ ಹೊಗಳಿದ್ದರು.
ಹಾಗೂ ಅಲ್ಲು ಅರ್ಜುನ್ ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಸಹ ಆ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಅವರನ್ನು ಆಹ್ವಾನಿಸುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ಇಷ್ಟೆಲ್ಲಾ ಅನ್ಯೂನ್ಯವಾಗಿದ್ದ ಅಪ್ಪು ನಿಧನ ಹೊಂದಿದಾಗ ಪುಷ್ಪಾ ಚಿತ್ರದಲ್ಲಿ ನಿರತರಾಗಿದ್ದ ಅಲ್ಲು ಅರ್ಜುನ್ ಅಂತಿಮ ದರ್ಶನಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಆದರೆ ಇದೀಗ ಪುಷ್ಪಾ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಅಲ್ಲು ಅರ್ಜುನ್ ಈ ಕಾರ್ಯಕ್ರಮದಲ್ಲಿ ಮಾತನಾಡಿ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ನೋವನ್ನು ಹಂಚಿಕೊಂಡ ಅಲ್ಲು ಅರ್ಜುನ್ ಬೆಂಗಳೂರಿಗೆ ಬಂದಿದ್ದೇನೆ ಆದರೂ ಸಹ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ನಾನು ಈಗ ಹೋಗುವುದಿಲ್ಲ ಎಂದು ಹೇಳಿಕೆಯನ್ನು ನೀಡಿದರು.
“ನಾನೀಗ ಪುಷ್ಪಾ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದೇನೆ. ಹೀಗಾಗಿ ಈ ಸಮಯದಲ್ಲಿ ನಾನೇನಾದರೂ ಪುನೀತ್ ರಾಜ್ ಕುಮಾರ್ ಅವರ ಮನೆಗೆ ಹೋದರೆ ಅದು ಪುಷ್ಪಾ ಚಿತ್ರದ ಪ್ರಚಾರಕ್ಕಾಗಿ ಎಂದು ಜನರು ಭಾವಿಸುತ್ತಾರೆ. ಹೀಗಾಗಿ ನಾನು ಇಂದು ಪುನೀತ್ ಅವರ ಮನೆಗೆ ಭೇಟಿ ನೀಡುವುದಿಲ್ಲ ಪುಷ್ಪಾ ಚಿತ್ರ ಬಿಡುಗಡೆಯಾಗಿ ಎಲ್ಲಾ ಕೆಲಸಗಳು ಮುಗಿದ ನಂತರ ಪುನೀತ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲೆಂದು ಒಂದು ದಿನ ಬೆಂಗಳೂರಿಗೆ ಬರುತ್ತೇನೆ” ಇಂದು ಅಲ್ಲು ಅರ್ಜುನ್ ಹೇಳಿದರು. ಈ ಮೂಲಕ ಪುನೀತ್ ರಾಜ್ ಕುಮಾರ್ ಮತ್ತು ಅವರ ಕುಟುಂಬದ ಮೇಲೆ ತಾವು ಇಟ್ಟಿರುವ ಪ್ರೀತಿ ಎಂಥದ್ದು ಎಂಬುದನ್ನು ಅಲ್ಲು ಅರ್ಜುನ್ ಮತ್ತೊಮ್ಮೆ ಸಾಬೀತುಪಡಿಸಿದರು.