ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: 12 ಮಂದಿ ಭಕ್ತರ ದುರ್ಮರಣ, 23 ಜನರಿಗೆ ಗಾಯ

0
2462

ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸಮೃದ್ಧಿ ಎಕ್ಸ್ಪ್ರೆಸ್ ವೇಯಲ್ಲಿ ಟೆಂಪೋ ಟ್ರಾವೆಲರ್ವೊಂದು ಕಂಟೈನರ್ಗೆ ಡಿಕ್ಕಿ ಹೊಡೆದ ಪರಿಣಾಮ 12 ಜನ ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತಡರಾತ್ರಿ ಘಟನೆ ನಡೆದಿದ್ದು, ವೇಗವಾಗಿ ಬಂದ ಟಿಟಿ ಕಂಟೈನರ್ಗೆ ಡಿಕ್ಕಿ ಹೊಡೆದಿದೆ. ಟಿಟಿಯಲ್ಲಿ ಒಟ್ಟು 35 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮುಂಬೈನಿಂದ ಸುಮಾರು 350 ಕಿಲೋ ಮೀಟರ್ ದೂರದಲ್ಲಿರುವ ಜಿಲ್ಲೆಯ ವೈಜಾಪುರ ಪ್ರದೇಶದಲ್ಲಿ ಮಧ್ಯರಾತ್ರಿ 12:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಟಿಟಿ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಂಟೈನರ್ ಹಿಂಬದಿಗೆ ಡಿಕ್ಕಿಯಾಗಿದೆ ಎಂದು ವರದಿಗಳು ತಿಳಿಸಿವೆ. ಘಟನೆಯಲ್ಲಿ 12 ಪ್ರಯಾಣಿಕರು ಸಾವನ್ನಪ್ಪಿದ್ದು, ಅದರಲ್ಲಿ ಐವರು ಪುರುಷರು, ಆರು ಮಹಿಳೆಯರು ಮತ್ತು ಒಬ್ಬಳು ಅಪ್ರಾಪ್ತ ಬಾಲಕಿ ಎಂದು ಗುರುತಿಸಲಾಗಿದೆ. ಉಳಿದ 23 ಮಂದಿ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.