ಕಳೆದ ಗುರುವಾರ ತೆರೆಕಂಡ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ನಿರೀಕ್ಷೆಗೂ ಮೀರಿದ ಪ್ರಶಂಸೆ ಮತ್ತು ಸಕ್ಸಸ್ ಕಂಡಿದೆ. ಚಿತ್ರ ಯಾವ ಮಟ್ಟಕ್ಕೆ ಯಶಸ್ಸು ಕಂಡಿದೆ ಎಂದರೆ ಚಿತ್ರತಂಡವು ಸಹ ಇಷ್ಟು ದೊಡ್ಡ ಮಟ್ಟದ ಯಶಸ್ಸು ಬರುತ್ತದೆ ಎಂದು ಊಹಿಸಿರಲಿಲ್ಲ ಅನ್ನಿಸುತ್ತದೆ.
ಬಹುತೇಕ ಪ್ರಮುಖ ನಗರಗಳಲ್ಲಿನ ಎಲ್ಲಾ ಮಲ್ಟಿಫ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿರುವ ಯುವರತ್ನ ಚಿತ್ರ ಎಷ್ಟೋ ದಿನಗಳ ನಂತರ ಕುಟುಂಬ ಪ್ರೇಕ್ಷಕರು ಮತ್ತೆ ಚಿತ್ರಮಂದಿರದತ್ತ ಬರುವಂತೆ ಮಾಡಿದೆ.
ಇದೀಗ ಯುವರತ್ನ ಚಿತ್ರ ಭರ್ಜರಿ ಯಶಸ್ಸು ಸಾಧಿಸಿರುವ ಹಿನ್ನೆಲೆಯಲ್ಲಿ ಪುನೀತ್ ರಾಜ್ ಕುಮಾರ್ , ನಿರ್ದೇಶಕ ಸಂತೋಷ್ ಆನಂದ್ ರಾಮ್ , ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಯುವರತ್ನ ಚಿತ್ರದ ಯಶಸ್ಸನ್ನು ಆಚರಿಸಲು ನವರಸ ನಾಯಕ ಜಗ್ಗೇಶ್ ಅವರ ಜೊತೆ ಮಂತ್ರಾಲಯಕ್ಕೆ ಪಯಣ ಬೆಳೆಸಿದ್ದಾರೆ.
ಯುವರತ್ನ ಗೆದ್ದ ಖುಷಿಯನ್ನು ಆಚರಿಸಲು ಜಗ್ಗೇಶ್ ಅವರೊಡನೆ ಪುನೀತ್, ಸಂತೋಷ್ ಆನಂದ್ ರಾಮ್, ಕಾರ್ತಿಕ್ ಗೌಡ ಅವರು ತೆರಳಿರುವ ವಿಷಯವನ್ನು ಸ್ವತಃ ಜಗ್ಗೇಶ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.