ನವರಸ ನಾಯಕ ಜಗ್ಗೇಶ್ ಟ್ವಿಟ್ಟರ್ ಮೂಲಕ ಕೆಲ ದಿನಗಳಿಂದ ತಾವು ಪಡುತ್ತಿದ್ದ ನೋವನ್ನು ಹಂಚಿಕೊಂಡಿದ್ದಾರೆ. ಜಗ್ಗೇಶ್ ಅವರ ತಮ್ಮ ಕೋಮಲ್ ಅವರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ಈ ವಿಷಯವನ್ನು ಹೊರಜಗತ್ತಿಗೆ ಹೇಳದೆ ಜಗ್ಗೇಶ್ ಅವರು ತಮ್ಮಲ್ಲಿಯೇ ಇಟ್ಟುಕೊಂಡು ರಾಯರ ಬಳಿ ಪ್ರತಿದಿನವೂ ಪ್ರಾರ್ಥನೆ ಮಾಡಿ ಕೋಮಲ್ ಅವರಿಗೆ ಬೇಕಾದ ಚಿಕಿತ್ಸೆಗಳನ್ನು ಕೊಡಿಸುತ್ತಾ ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದರು.
ಸುಮಾರು ಹತ್ತು ದಿನಗಳ ಸತತ ಪ್ರಯತ್ನದ ನಂತರ ಜಗ್ಗೇಶ್ ಅವರ ತಮ್ಮ ಕೋಮಲ್ ಕೊರೋನಾವೈರಸ್ ನಿಂದ ಗುಣಮುಖರಾಗಿದ್ದು ಇದೀಗ ಜಗ್ಗೇಶ್ ಅವರು ಇಷ್ಟು ದಿನ ತಾವು ಪಟ್ಟ ಕಷ್ಟವನ್ನು ಹೊರಜಗತ್ತಿಗೆ ತಿಳಿಸಿದ್ದಾರೆ. ಟ್ವಿಟ್ಟರ್ ಮೂಲಕ ರಾಯರನ್ನು ಹೊಗಳಿ ಟ್ವೀಟ್ ಮಾಡಿರುವ ಜಗ್ಗೇಶ್ ತುಂಬಾ ಭಾವುಕರಾಗಿ ತಾವು ಪಟ್ಟ ನೋವನ್ನು ಹಂಚಿಕೊಂಡಿದ್ದಾರೆ.
ಇಷ್ಟು ದಿನ ನನ್ನ ತಮ್ಮನಿಗೆ ಕೊರೋನಾವೈರಸ್ ಇದ್ದದ್ದನ್ನು ಯಾರಿಗೂ ಹೇಳದೆ ಕೇವಲ ರಾಯರ ಬಳಿ ಹೇಳಿಕೊಂಡು ನನ್ನ ಕಷ್ಟವನ್ನು ತಡೆದಿಟ್ಟುಕೊಂಡಿದ್ದೆ. ನಾನು ಯಾರಿಗೂ ಕೇಡು ಬಯಸದೇ ಇದ್ದರೆ, ಹೆತ್ತ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡಿದ್ದರೆ, ಕಲಾಸರಸ್ವತಿಯನ್ನು ಸರಿಯಾಗಿ ಪೂಜೆ ಮಾಡಿದ್ದರೆ, ಹಸಿದವರಿಗೆ ಅನ್ನ ಹಾಕಿದರೆ, ನಾನು ಒಳ್ಳೆಯ ರೀತಿಯಲ್ಲಿ ನಡೆದುಕೊಂಡಿದ್ದರೆ ನನ್ನ ತಮ್ಮನನ್ನು ಉಳಿಸಿ ಎಂದು ರಾಯರ ಬಳಿ ಪ್ರಾರ್ಥನೆ ಮಾಡಿದ್ದೆ ನನ್ನ ನಿಷ್ಟಾವಂತ ಪ್ರಾರ್ಥನೆ ರಾಯರಿಗೆ ಮುಟ್ಟಿತ್ತು ನನ್ನ ತಮ್ಮನನ್ನು ಇಂದು ಬದುಕುಳಿಸಿದ್ದಾರೆ ಎಂದು ಜಗ್ಗೇಶ್ ಭಾವುಕರಾಗಿದ್ದಾರೆ.