ಖ್ಯಾತ ಗಾಯಕಿ ಹರಿಣಿ ಅವರ ತಂದೆ ಎ.ಕೆ. ರಾವ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ರೈಲ್ವೇ ಹಳಿ ಮೇಲೆ ಮೃತದೇಹ ಪತ್ತೆ ಆಗಿದೆ. ಈ ಸಂಬಂಧ ಹರಿಣಿ ಕುಟುಂಬದವರು ದೂರು ನೀಡಿದ್ದಾರೆ. ಈ ಸಾವಿನ ಸುತ್ತ ಹತ್ತಾರು ಅನುಮಾನಗಳು ಹುಟ್ಟಿಕೊಂಡಿವೆ.
ಯಲಹಂಕ ರೈಲ್ವೆ ನಿಲ್ದಾಣದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಎ.ಕೆ. ರಾವ್ ಅವರ ಮೃತದೇಹ ಸಿಕ್ಕಿದೆ. ನ.22ರ ರಾತ್ರಿಯೇ ಈ ಘಟನೆ ನಡೆದಿದೆ.
ಹರಿಣಿ ಮತ್ತು ಅವರ ಕುಟುಂಬದವರು ಹೈದರಾಬಾದ್ನಲ್ಲಿ ವಾಸವಾಗಿದ್ದರು. ಆದರೆ ಕೆಲವು ದಿನಗಳಿಂದ ಇಡೀ ಕುಟುಂಬ ನಾಪತ್ತೆ ಆಗಿದ್ದರು ಎಂಬ ಮಾಹಿತಿ ಇದೆ. ಈ ಎಲ್ಲ ಕಾರಣಗಳಿಂದಾಗಿ ಎ.ಕೆ. ರಾವ್ ಸಾವಿನ ಕೇಸ್ ಅನುಮಾನ ಮೂಡಿಸಿದೆ. ಮೃತದೇಹದ ಜೊತೆ ಆಧಾರ್ ಕಾರ್ಡ್ ಸಿಕ್ಕಿದೆ. ಅಲ್ಲದೇ, ದೂರು ನೀಡಲು ಸಿದ್ಧಪಡಿಸಿರುವ ಪತ್ರ ಹಾಗೂ ಕೆಲವು ಡಾಕ್ಯುಮೆಂಟ್ಗಳು ಸಹ ಪತ್ತೆ ಆಗಿವೆ. ತಂದೆಯ ಸಾವು ಅನುಮಾನಾಸ್ಪದ ಆಗಿದೆ ಎಂದು ಎ.ಕೆ. ರಾವ್ ಪುತ್ರಿ ಶಾಲಿನಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
‘ನಮ್ಮ ತಂದೆ ಕೊಲೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ’ ಎಂದು ದೂರಿನಲ್ಲಿ ಹೇಳಲಾಗಿದೆ. ಅದರ ಅನ್ವಯ 174 C, 302 ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿದೆ. ಮೃತದೇಹದಲ್ಲಿ ಎಡಗೈ ನರ ಕಟ್ ಆಗಿದೆ. ಕುತ್ತಿಗೆಗೆ ಚಾಕುವಿನಿಂದ ಇರಿದಿರುವುದು ತಿಳಿದುಬಂದಿದೆ. ಮೃತದೇಹದ ಬಳಿಯಲ್ಲಿ ಚಾಕು ಸಹ ಸಿಕ್ಕಿದೆ. ಪ್ರಾಥಮಿಕ ತನಿಖೆ ವೇಳೆ ಇದು ಆತ್ಮಹತ್ಯೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಕೇಸ್ ದಾಖಲು ಮಾಡಿಕೊಂಡಿರುವ ಬೆಂಗಳೂರು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.