No menu items!
9.2 C
Munich
Friday, May 1, 2026

ಲಕ್ಷಗಟ್ಟಲೆ ಸಂಬಳದ ಕೆಲಸಕ್ಕೆ ಬಿಟ್ಟು, ಪಿಎಫ್​ ದುಡ್ಡು ತಂದು ಜಮೀನಿಗೆ ಸುರಿದರು..! ಈಗ ಏನಾಗಿದ್ದಾರೆ?

Must read

ಇವರ ಹೆಸರು ಸಚಿನ್ ಕಾಳೆ. ಚತ್ತೀಸ್ ಗಡದ ಗುರುಗ್ರಾಮದಲ್ಲಿ ಲಕ್ಷಗಟ್ಟಲೆ ಸಂಬಳ ಪಡೆಯುವ ಕೆಲಸದಲ್ಲಿದ್ದರು. ಆದ್ರೆ ಆ ಕೆಲಸವನ್ನು ಬಿಟ್ಟು ಚತ್ತೀಸ್ ಗಢ ರಾಜ್ಯದ ಬಿಸ್ಲಾಪುರ ಜಿಲ್ಲೆಯ ಮೇಧ್ಪುರ್ ಗ್ರಾಮಕ್ಕೆ ಬಂದು ಕೃಷಿ ಆರಂಭಿಸಿದ್ರು. ಇವತ್ತು ಸಚಿನ್ ಕಾಳೆ ಕೋಟ್ಯಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಲಕ್ಷಗಟ್ಟಲೆ ಸಂಬಳ ಪಡೆದ್ರೂ ಒತ್ತಡದಲ್ಲೇ ಜೀವನ ನಡೆಸುತ್ತಿದ್ದ ಸಚಿನ್, ಇವತ್ತು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಸಚಿನ್ ಅವರ ಗುತ್ತಿಗೆ ಆಧಾರಿತ ಕೃಷಿಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದರು. 2014ರಲ್ಲಿ “ಇನ್ನೋವೇಟಿವ್ ಅಗ್ರಿಲೈಫ್ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್” ಅನ್ನುವ ಕಂಪನಿಯನ್ನು ಆರಂಭಿಸಿದ್ರು. ಈ ಕಂಪನಿಯ ಮೂಲಕ ಗುತ್ತಿಗೆ ಆಧಾರಿತ ಕೃಷಿಗೆ ಪ್ರೋತ್ಸಾಹ ನೀಡಲಾಯಿತು. ಸಚಿನ್ ಸ್ಥಾಪಿಸಿದ ಕಂಪನಿ ತನ್ನ ಜೊತೆ ಒಪ್ಪಂದ ಮಾಡಿಕೊಂಡ ಕೃಷಿಕರಿಗೆ ತರಬೇತಿ ಹಾಗೂ ಸಲಹೆಗಳನ್ನು ನೀಡಿ ತನ್ನ ವ್ಯಾಪ್ತಿ ಮತ್ತು ಉದ್ಯಮವನ್ನು ವಿಸ್ತರಿಸಿತು.
ಎಲ್ಲಾ ಮಧ್ಯಮ ವರ್ಗ ಕುಟುಂಬದ ತಂದೆತಾಯಿಯಂತೆ ಸಚಿನ್ ಅವರ ಹೆತ್ತವರು ಕೂಡ ಮಗ ಎಂಜಿನಿಯರ್ ಆಗಬೇಕು ಎಂದು ಬಯಸಿದ್ದರು. ಪೋಷಕರ ಬಯಕೆಯನ್ನು ಈಡೇರಿಸುವ ಸಲುವಾಗಿ ಸಚಿನ್ ಅವರು ನಾಗಪುರದ ಕಾಲೇಜಿನಿಂದ ಮೆಕಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದುಕೊಂಡ್ರು. ಫೈನಾನ್ಸ್ನಲ್ಲಿ ಎಂ.ಬಿ.ಎ. ಪದವಿ ಕೂಡ ಪಡೆದುಕೊಂಡ್ರು. ಪದವಿ ಬಳಿಕ ಪವರ್ ಪ್ಲಾಂಟ್ ಒಂದರಲ್ಲಿ ಕೆಲಸವನ್ನು ಕೂಡ ಗಿಟ್ಟಿಸಿಕೊಂಡ್ರು.

ಸಚಿನ್ ಅವರು, ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನು ಹತ್ತಿದ್ರು. ಕೆಲಸದ ಜೊತೆ ಓದು ಮುಂದುವರೆಸಿಕೊಂಡು ಲಾ ಪದವಿಯನ್ನು ಕೂಡ ಪಡೆದುಕೊಂಡ್ರು. 2007ರಲ್ಲಿ ಡೆವಲಪ್ಮೆಂಟಲ್ ಎಕಾನಮಿಕ್ಸ್ನಲ್ಲಿ ಪಿಎಚ್ಡಿ ಪಡೆಯಲು ಅಡ್ಮಿಷನ್ ಪಡೆದುಕೊಂಡ್ರು. ಪಿಎಚ್ಡಿ ಓದುವ ದಿನಗಳಲ್ಲಿ ಬೇರೆಯವರಿಗೆ ಲಾಭ ತಂದುಕೊಡುವ ಕೆಲಸದ ಬದಲು ತನಗೇ ಲಾಭ ಬರುವ ಕೆಲಸ ಮಾಡಬೇಕು ಅನ್ನುವ ನಿರ್ಧಾರ ಮಾಡಿದ್ರು.
ಕೊನೆಗೆ ತನ್ನದೇ ಉದ್ಯಮ ಸ್ಥಾಪಿಸುವ ಮೊದಲು ಹಲವು ಕೆಲಸಗಳನ್ನು ಮಾಡು ಬಗ್ಗೆ ಸಚಿನ್ಗೆ ಯೋಚನೆಗಳು ಬಂದಿದ್ದವು. ಇದೇ ವೇಳೆ ಸಚಿನ್ ಕಾಳೆಗೆ ತನ್ನ ಅಜ್ಜ ಸರಕಾರಿ ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಮಾಡುತ್ತಿದ್ದ ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ಹುಟ್ಟಿತ್ತು. ಸಚಿನ್ಗೆ ಕೆಲವು ಎಕರೆಗಳಷ್ಟು ಜಮೀನು ಇತ್ತು. ಆದ್ರೆ ಅದರಲ್ಲಿ ಬೆಳೆಯುವ ಬೆಳೆ ಹಾಗೂ ಅದರಿಂದ ಲಾಭ ಪಡೆಯುವ ಬಗ್ಗೆ ಜ್ಞಾನವಿರಲಿಲ್ಲ. ಕೆಲವು ದಿನಗಳ ಅನುಭವದ ಬಳಿಕ ಸಚಿನ್, ಕೃಷಿಗೆ ಕೆಲಸಗಾರರ ಕೊರತೆ ಉಂಟಾಗುತ್ತದೆ ಅನ್ನುವುದನ್ನು ಅರಿತುಕೊಂಡ್ರು.

ಅಚ್ಚರಿ ಅಂದ್ರೆ ಕೃಷಿಕರಿಂದ ಜಮೀನುಗಳನ್ನು ಬಾಡಿಗೆಗೆ ಪಡೆದು ಅಲ್ಲಿ ಕೃಷಿ ಮಾಡಲು ಆರಂಭಿಸಿದ್ರು. ಇದಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ರು. 15 ವರ್ಷಗಳಿಂದ ಕೂಡಿಟ್ಟ ಪಿ.ಎಫ್. ಹಣವನ್ನು ತನ್ನ ಉದ್ಯಮದ ಬಂಡವಾಳವನ್ನಾಗಿ ಮಾಡಿಕೊಂಡ್ರು. ಮುಂದೆ ಕೃಷಿಯಲ್ಲಿ ಯಶಸ್ಸಿಯಾದರು. ಇಂದು ಸಚಿನ್ ಅವರ ಕಂಪನಿಯಲ್ಲಿ 137 ಕೃಷಿಕರಿದ್ದಾರೆ. 200 ಎಕರೆಗೂ ಅಧಿಕ ಜಮೀನುಗಳಲ್ಲಿ ಕೆಲಸಗಳು ನಡೆಯುತ್ತಿದೆ. ಸಚಿನ್ ಮಾಲೀಕತ್ವದ ಕಂಪನಿ ಇವತ್ತು ವಾಷಿರ್ಕವಾಗಿ 2 ಕೋಟಿ ರೂಪಾಯಿಗಳಿಗೂ ಅಧಿಕ ವಹಿವಾಟು ನಡೆಸುತ್ತಿದೆ.
ಲಕ್ಷಗಟ್ಟಲೇ ಸಂಬಳದ ಕೆಲಸಕ್ಕೆ ತಿಲಾಂಜಲಿ ನೀಡಿದ ಸಚಿನ್ ಕಾಳೆ ಇಂದು ಪ್ರಗತಿಪರ ಕೃಷಿಕರಾಗಿದ್ದಾರೆ. ಕೃಷಿಯಿಂದಲೇ ಕೋಟಿಗಟ್ಟಲೇ ವ್ಯವಹಾರ ನಡೆಸುವ ಮೂಲಕ ಯಶೋಗಾಥೆ ಕಂಡು ಇತರರಿಗೂ ಆದರ್ಶರಾಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article