No menu items!
11.1 C
Munich
Wednesday, April 29, 2026

ಲಿಂಗಾಯತರೇ ಸಿಎಂಗಳಾಗಬೇಕು: ಜಯಮೃತ್ಯುಂಜಯ ಸ್ವಾಮೀಜಿ

Must read

“ಒಂದು ವೇಳೆ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಮಾಡಿದರೆ ಉತ್ತರ ಕರ್ನಾಟಕ ಮೂಲದ ಲಿಂಗಾಯತ ಸಮುದಾಯದವರಿಗೆ ಅವಕಾಶ ನೀಡಿ,” ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
“ಬಿಜೆಪಿ ಹೈಕಮಾಂಡ್‌ಗೆ ಎಲ್ಲವೂ ಗೊತ್ತಿದೆ. ರೇಸ್‌ನಲ್ಲಿಯೂ ನಮ್ಮವರು ಓಡಾಡುತ್ತಿದ್ದಾರೆ. ರೇಸ್‌ನಲ್ಲಿ ಓಡುವವರಿಗೆ ನಾನು ಬೆಂಬಲಿಸುತ್ತೇನೆ.‌ ಯಾರೋ ಒಬ್ಬರ ಪರ ಸ್ವಾಮೀಜಿಯಾಗಿ ಮಾತನಾಡಲ್ಲ,” ಎಂದರು.

ದಾವಣಗೆರೆ ನಗರದ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, “ಲಿಂಗಾಯತ ಸಮುದಾಯದಲ್ಲಿ ನಾಯಕರು ತುಂಬಿ ತುಳುಕುತ್ತಿದ್ದಾರೆ. ಈ ಸಮುದಾಯದ ಏಕ ವ್ಯಕ್ತಿ ಮೇಲೆ ಅವಲಂಬಿತ ಸಮಾಜ ಅಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ನಾನು ಮಾತನಾಡಲ್ಲ. ಉತ್ತರ ಕರ್ನಾಟಕ ಮೂಲದ ಲಿಂಗಾಯತ ಸಮುದಾಯದವರನ್ನು ಸಿಎಂ ಮಾಡಿ ಎಂಬುದನ್ನು ಒತ್ತಿ ಹೇಳುವುದಾಗಿ,” ತಿಳಿಸಿದರು.

“ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಉತ್ತರ ಕರ್ನಾಟಕ ಮೂಲದ ಲಿಂಗಾಯತ ಸಮುದಾಯದವರನ್ನು ಸಿಎಂ ಮಾಡಬೇಕೆಂದು ಅರುಣ್ ಸಿಂಗ್ ಅವರ ಬಳಿ ಮಾತುಕತೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಜೊತೆ ಮಾತನಾಡಿದ್ದೇನೆ. ಅವಶ್ಯಕತೆ ಬಿದ್ದರೆ ದೆಹಲಿಗೆ ಕರೆಯಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.‌ ಸಿಎಂ ಬದಲಾವಣೆ ಮಾಡಿದರೆ ಲಿಂಗಾಯತ ಸಮುದಾಯದವರಿಗೆ ನೀಡುವಂತೆ ಸಲಹೆ ನೀಡಿದ್ದೇನೆ. ಅರುಣ್ ಸಿಂಗ್ ಜೊತೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬಗ್ಗೆ ಚರ್ಚೆ ಮಾಡಿದ್ದೇನೆ.‌ ಒಂದು ವೇಳೆ ಬದಲಾವಣೆ ಸಂದರ್ಭ ಬಂದರೆ ಲಿಂಗಾಯತರಿಗೆ ಸಿಎಂ ಸ್ಥಾನ ನೀಡಿ ಎಂಬ ಮನವಿ ನಮ್ಮದು,” ಎಂದು ಅಭಿಪ್ರಾಯಪಟ್ಟರು.

“ಕೃಷ್ಣ ಕಣಿವೆ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಬೇಕು. ಹಾಗಾಗಿ ಅಲ್ಲಿನ ಅಭಿವೃದ್ಧಿಗೆ ಆ ಭಾಗದವರೇ ಸಿಎಂ ಆಗಬೇಕು. ಅಧಿಕಾರ ಚಲಾಯಿಸುವ ರೀತಿಯಲ್ಲಿ ಮಠಾಧೀಶರು ವರ್ತನೆ ಮಾಡಬಾರದು. ರಾಜಕಾರಣದಲ್ಲಿ ಮೂಗು ತೋರಿಸಲು ಹೋಗಲ್ಲ. ಎಚ್. ವಿಶ್ವನಾಥ್ ಪೂರಕವಾದ ಸಲಹೆ ನೀಡಿದ್ದಾರೆ. ಪ್ರಧಾನಿ ಮನಸ್ಸು ಗೆದ್ದಿರುವ ವ್ಯಕ್ತಿ ಯಾರು ಬರುತ್ತಾರೆ ಬರಲಿ. ಕೋಟ್ಯಂತರ ಜನರ ಮನಸ್ಸು ಗೆದ್ದವರು, ಕಳಂಕರಹಿತರು, ಪ್ರಾಮಾಣಿಕ, ಕುಟುಂಬ ಹಸ್ತಕ್ಷೇಪ ಇಲ್ಲದವರು ಬರಲಿ. ನಮ್ಮ ಪಾದಯಾತ್ರೆ ಮುಗಿದ ಮೇಲೆ ನಮ್ಮಲ್ಲೂ ನಾಯಕರಿದ್ದಾರೆ. ನಾವೆಲ್ಲ ಯಡಿಯೂರಪ್ಪ ಒಬ್ಬರೇ ನಾಯಕ ಎಂದುಕೊಂಡಿದ್ದೆವು. ಆದರೆ ನಮ್ಮಲ್ಲೂ ಹುಲಿಗಳಿವೆ” ಎಂದು ಹೇಳುವ ಮೂಲಕ ಸಿಎಂ ಬದಲಾವಣೆಗೆ ಜಯಮೃತ್ಯುಂಜಯ ಸ್ವಾಮೀಜಿ ಬೆಂಬಲಿಸಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article