ಟೀಮ್ ಇಂಡಿಯಾದ ನಾಯಕ, ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯೂ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಕಳೆದ ವರ್ಷವೂ ಈ ಸಲ ಕಪ್ ನಮ್ದೇ ಅಂತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದ ಆರ್ ಸಿಬಿ ಈ ಬಾರಿಯೂ ಅದನ್ನೇ ಮಾಡಿದೆ.
ವಿರಾಟ್ ಕೊಹ್ಲಿ, ಎಬಿ ಡಿವಿಲಯರ್ಸ್ ಅಂತಹ ಆಟಗಾರರನ್ನು ಹೊಂದಿರುವ ಆರ್ ಸಿಬಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದೇ ಎಲ್ಲಾ ಕಡೆ ಸದ್ದು ಮಾಡಿರುವ ಟೀಮ್. ಆರ್ ಸಿಬಿ ಪ್ರತಿವರ್ಷ ನೆಚ್ಚಿನ ತಂಡವೇ. ಆದರೆ ಅದರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಐಪಿಎಲ್ ಸರಣಿಯಿಂದ ಹೊರಬಿದ್ದರೂ ಅಂತಿಮ ಪಂದ್ಯದಲ್ಲಿ ಗೆಲುವಿನ ನಗೆ ಬೀರಿತು. ನಂತರ ವಿರಾಟ್ ಕೊಹ್ಲಿ ಟ್ವೀಟ್ ಮಾಡಿ, ನೀವಿಲ್ಲದಿದ್ದರೆ ನಾವಿಲ್ಲ ಎಂದು ಅಭಿಮಾನಿಗಳಿಗೆ ಹೇಳಿದ್ದರು, ಮುಂದಿನ ವರ್ಷ ಗೆಲ್ಲುವ ಭರವಸೆ ನೀಡಿದ್ದರು.
ಅದರ ಬೆನ್ನಲ್ಲೇ ವಿಜಯ್ ಮಲ್ಯ ಟ್ವೀಟ್ ಮೂಲಕ ಆರ್ ಸಿಬಿ ಮತ್ತು ನಾಯಕ ವಿರಾಟ್ ಕೊಹ್ಲಿಯನ್ನ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರು ತಂಡವು ಯಾವಾಗಲೂ ಟಾಪ್. ಆದರೆ ಅದು ಪೇಪರ್ ಮೇಲೆ ಮಾತ್ರ. ಪಾಯಿಂಟ್ಸ್ ಟೇಬಲ್ನಲ್ಲಿ ಯಾವಾಗಲೂ ಕೆಳಗಿರುತ್ತದೆ ಎಂದು ವಿಷಾದ ವ್ಯಕ್ತಪಡಿಸುತ್ತಲೇ ತರಾಟೆ ತೆಗೆದುಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಮಲ್ಯ ಕಿಡಿಕಾರಿದ್ದಾರೆ.
ಆರ್ ಸಿಬಿ ಪ್ರತಿವರ್ಷವೂ ಎಲ್ಲಾ ತಂಡಕ್ಕಿಂತ ಸ್ಟ್ರಾಂಗ್ ಎಂದು ಕರೆಸಿಕೊಳ್ಳುತ್ತಲೇ ಬರುತ್ತಿದೆ. ಅದು ನಿಜವೂ ಸಹ ಹೌದು. ಆರ್ ಸಿಬಿ ಟೀಮ್ ಪ್ರಬಲವಾಗಿಯೇ ಇದೆ. ಆದರೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕುವಲ್ಲಿ ಆರಂಭದಲ್ಲೇ ಎಡವುತ್ತಾ ಬರುತ್ತಿದೆ. ಎರಡನೇ ಸೀಸನ್ ನಲ್ಲಿ ರನ್ನರ್ ಅಪ್ ಆಗಿತ್ತು.