ಶಾಲೆ ಬಿಟ್ಟ ಮಕ್ಕಳಿಗೆ ಇವರೇ ಹೆಡ್​ ಮಾಸ್ಟರ್..!

0
187

ಇವರು ಶಾಲೆ ಬಿಟ್ಟ ಮಕ್ಕಳ ಪಾಲಿಗೆ ಹೆಡ್ಮಾಸ್ಟರ್, ಹೆಚ್ಐವಿ ಪೀಡಿತರಿಗೂ ಮೊದಲ ಡಾಕ್ಟರ್ ಹೌದು. ಇವರ ಹೆಸರು ಜಿಂಪು ರಂಗೋಮಿಯಾ ಎಂದು. ಇವರು ಬಾಲ್ಯ ಹಾಗೂ ಹರೆಯದಲ್ಲಿ ಸಂತೋಷ ಕಂಡವರಲ್ಲ; ಮದ್ಯ ವ್ಯಸನಿಯಾಗಿದ್ದ ತಂದೆ, ತಾಯಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರು. ಆದರೆ, ಇಂದು ಹೆತ್ತವರಿಗೆ ಮತ್ತು ಸಮಾಜಕ್ಕೆ ದೊಡ್ಡ ಗೌರವ ತರುವಂತಹ ಕೆಲಸ ಮಾಡುತ್ತಿದ್ದಾರೆ.

ಜಿಂಪು ಹುಟ್ಟಿದ್ದು ಭಾರತದ ಈಶಾನ್ಯ ಪ್ರದೇಶ ನಾಗಾಲ್ಯಾಂಡ್ ನ ದಿಮಾಪುರದಲ್ಲಿ. ಕಮ್ಯೂನಿಟಿ ಅವೆನ್ಯೂ ನೆಟ್ವರ್ಕ್ – ಎನ್ ಜಿಓ ಸ್ಥಾಪಕರಾಗಿದ್ದಾರೆ. ಲಾಭೋದ್ದೇಶವಿಲ್ಲದೇ, ಯುವಕರ ನೇತೃತ್ವದಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಎಚ್ಐವಿ, ಏಡ್ಸ್ ಪೀಡಿತ ಮಕ್ಕಳಿಗೆ ನೈತಿಕ ಬೆಂಬಲ ನೀಡುವುದರ ಜೊತೆಗೆ ಅವಶ್ಯವಿರುವ ವಸ್ತುಗಳನ್ನು ಒದಗಿಸುತ್ತದೆ. ಸದ್ಯ ಜಿಂಪು ನಾಗಾಲೆಂಡ್ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಜಿಂಪು ಅವರಿಗೆ ಕಮ್ಯೂನಿಟಿ ಅವೆನ್ಯೂ ನೆಟ್ವರ್ಕ್ – ಸಂಸ್ಥೆ ಕಟ್ಟಲು ಮಾದಕ ಸೇವನೆ ಮಾಡುತ್ತಿದ್ದ ಸಹೋದರನ ನೋವು ಹಾಗೂ ಸಾವು ಕಾರಣವಾಯಿತಂತೆ. ಆಗ ತಾನೆ ಶಾಲೆ ಮುಗಿಸಿದ ಹುಡುಗರು ಡ್ರಗ್ಸ್ಗೆ ದಾಸರಾಗುತ್ತಿರುವುದನ್ನು ಅವರು ಗಮನಿಸಿಸುತ್ತಿದ್ದರು. ಇದಕ್ಕೆ ಸರ್ಕಾರವನ್ನು ತೆಗಳುವ ಬದಲು ತಾವೇನಾದರೂ ಮಾಡಬೇಕೆಂದು ಚಿಂತಿಸಿದರು. ಆಗ ಹುಟ್ಟಿಕೊಂಡಿದ್ದು ಸಿಎಎನ್ ಸಂಸ್ಥೆ.
ನೋಡಿ, . ಕಮ್ಯೂನಿಟಿ ಅವೆನ್ಯೂ ನೆಟ್ವರ್ಕ್ ಸಂಸ್ಥೆ ಕಟ್ಟುವಾಗ ಇವರ ಬಳಿ ಹಣ ಇರಲಿಲ್ಲ. ಸಮಸ್ಯೆ ಉಲ್ಬಣಿಸುತ್ತಿರುವುದನ್ನು ನೋಡಿ ತಕ್ಷಣ ಕಾರ್ಯಪ್ರವೃತ್ತರಾದರು. ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳು ಹತಾಶರಾಗುತ್ತಾರೆ. ಇದು ಮದ್ಯವ್ಯಸನ ಸೇರಿದಂತೆ ದುಷ್ಚಟಕ್ಕೆ ಅವರು ದಾಸರಾಗುವಂತೆ ಮಾಡುತ್ತದೆ. ಸ್ವಂತ ಜಿಂಪು ಅವರೇ ಈ ಹತಾಶೆಯನ್ನು ಅನುಭವಿಸಿದ್ದರಿಂದ ಅವರು ಪ್ರಾರಂಭದಲ್ಲೇ ಎಳೆಯ ಮಕ್ಕಳು ಅದರಲ್ಲೂ ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶುರುಮಾಡಿದರು.
ಇನ್ನೊಂದು ಘಟನೆ ಅವರ ಕಣ್ಣು ತೆರೆಸಿತಂತೆ. 2011 ರಲ್ಲಿ ವಿಶ್ವ ಏಡ್ಸ್ ದಿನದಂದು ಕಾರ್ಯಕ್ರಮ ನಡೆಯುತ್ತಿತ್ತು. ಅನೇಕ ಜನರು, ಮಂತ್ರಿಗಳು, ವಿವಿಧ ಎನ್ ಜಿಓಗಳು ಅಲ್ಲಿಗೆ ಬಂದಿದ್ದವು. ಅವರಲ್ಲಿ ದಂಪತಿ, ಮಗುವನ್ನು ಕರೆದುಕೊಂಡು ಬಂದಿದ್ದರು. ಅವರು ಅಲ್ಲಿಗೆ ಬರಲು ಕಾರಣ ಏನು..? ಅವರು ಯಾಕೆ ತಳಮಳಗೊಂಡಿದ್ದಾರೆಂದು ಜಿಂಪು ಕೇಳಿದ್ದರಂತೆ. ಆಗ ದಂಪತಿಗೆ ಎಚ್ ಐವಿ ಇರುವುದು ತಿಳಿದುಬಂತು. ಶಿಕ್ಷಣ ನೀಡುವುದಿರಲಿ, ಅವರ ಬಳಿ ಔಷಧಿ ಪಡೆಯಲು ಹಣವಿರಲಿಲ್ಲ.


ಜಿಂಪು ಅವರಿಗೆ ಎಚ್ಐವಿ ಪೀಡಿತ ದಂಪತಿ ಹೇಳಿದ ಆ ಮಾತು ಮನಸ್ಸಿಗೆ ತುಂಬಾ ನಾಟಿದಂತೆ. ಇದರಿಂದ ಮತ್ತಷ್ಟು ಎಚ್ಚೆತ್ತ ಜಿಂಪು ಅವರು ಎಚ್ ಐವಿ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಎಚ್ ಐವಿ ಪೀಡಿತ ಕುಟುಂಬದವರು ಯಾವುದೇ ಕಾರಣಕ್ಕೂ ಮಕ್ಕಳನ್ನು ಬೀದಿಗೆ ಬಿಟ್ಟು ಹೋಗಬಾರದು; ಅವರಿಗೊಂದು ಬದುಕು ಕಟ್ಟಿಕೊಡುತ್ತೇನೆ; ಹಾಗಾಗಿ ಅವರನ್ನು ತಮ್ಮ ಸಂಸ್ಥೆಗೆ ತಂದು ಬಿಟ್ಟುಹೋಗಿ ಎಂದು ಪೋಷಕರಲ್ಲಿ ಮನವಿ ಮಾಡಿಕೊಂಡ್ರು.
ಇನ್ನು ಜಿಂಪು ಅವರು ಮಕ್ಕಳನ್ನು ಅನಾಥಾಶ್ರಮದಲ್ಲಿ ಬಿಡದಂತೆ ಪಾಲಕರಿಗೆ ವಿನಂತಿ ಮಾಡಿಕೊಂಡ್ರು. ಪರಿಣಾಮ ಹಲವರು ತಮ್ಮ ಮಕ್ಕಳನ್ನು ಜಿಂಪು ಸಂಸ್ಥೆಗೆ ಒಪ್ಪಿಸಿದರು. ಆ ಮಕ್ಕಳಿಗೆ ಜಿಂಪು ಅವರು ಶಿಕ್ಷಣ, ಪೌಷ್ಟಿಕ ಆಹಾರ , ಅವಶ್ಯವಿರುವ ಹಣ ನೀಡಿ ಪೋಷಿಸುತ್ತಿದ್ದಾರೆ. ಜಿಂಪು 2012 ರಲ್ಲಿ 9 ಮಕ್ಕಳನ್ನು ನೋಡಿಕೊಳ್ಳಲು ಆರಂಭಿಸಿದ ಅವರು ಈಗ 25 ಕ್ಕೂ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.
ಮತ್ತೊಂದು ವಿಶೇಷ ಎಂದರೆ, ದಿಮಾಪುರದ ಕೆಲವು ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ, ಶಾಲೆಯನ್ನು ಅರ್ಧಕ್ಕೆ ಬಿಟ್ಟವರಿಗೆ ತರಬೇತಿ ನೀಡುವಂತೆ ಜಿಂಪು ಅವರು ವಿನಂತಿಸಿಕೊಂಡರಂತೆ. ಸಂಸ್ಥೆಗಳಿಗೆ ಮಕ್ಕಳ ಸ್ಥಿತಿ ಬಗ್ಗೆಯೂ ವಿವರಿಸಿದರಂತೆ. ಆದರೆ ಮೊದಲು ತರಬೇತಿ ನೀಡಲು ಸಂಸ್ಥೆಗಳು ಒಪ್ಪಲಿಲ್ಲ. ಆಮೇಲೆ, ಸುಮಾರು 40ಕ್ಕೂ ಹೆಚ್ಚು ಜನರನ್ನು ಭೇಟಿ ಮಾಡಿ ಮಕ್ಕಳಿಗೆ ಸಹಾಯ ಮಾಡುವಂತೆ ಅವರು ಮನವಿ ಮಾಡಿಕೊಂಡರು.ಕೊನೆಗೆ ಸತತ ಪ್ರಯತ್ನದ ನಂತರ ಫಲ ಸಿಕ್ಕಿತು.
ಒಟ್ಟಾರೆ, ತಮ್ಮ ಕುಟುಂಬದ ನೋವು ಇತರರ ಬದುಕಿನಲ್ಲಿ ಆಗಬಾರದು; ಡಗ್ಸ್ ಅಥವಾ ಎಚ್ ಐವಿ ಅಪಾಯಕಾರಿ; ದುಶ್ಚಟಗಳಿಂದ ಜನರು ದೂರವಿರಬೇಕು; ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಬೇಕು ಈ ನಿಟ್ಟಿನಲ್ಲಿ ಎಲ್ಲ ತಂದೆ ತಾಯಿಯಂದಿರು ಗಮನಕೊಡಬೇಕು ಎನ್ನುವುದು ಸಾಮಾಜಿಕ ಕಾರ್ಯಕರ್ತರಾದ ಜಿಂಪು ರಂಗೋಮಿಯಾ ಅವರ ದಿಟ್ಟ ಮಾತು..

LEAVE A REPLY

Please enter your comment!
Please enter your name here