ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಪುತ್ರ ನಿಶಾಂತ್ ಅವರ ಅಶ್ಲೀಲ ವಿಡಿಯೋಗೆ ಸಂಬಂಧಿಸಿದ ಸುದ್ದಿ ಇದೀಗ ಭಾರಿ ಸದ್ದು ಮಾಡುತ್ತಿದೆ. ಯುವತಿಯೊಬ್ಬರ ಜತೆ ನಿಶಾಂತ್ ಇರುವಂಥ ವಿಡಿಯೋ ಮಾಡಲಾಗಿದ್ದು, ಅದನ್ನು ತೋರಿಸಿ ಸಚಿವರಿಂದ ಒಂದು ಕೋಟಿ ರೂಪಾಯಿ ಹಣ ನೀಡುವಂತೆ ಬ್ಲ್ಯಾಕ್ಮೇಲ್ ಮಾಡಿರುವ ಘಟನೆ ಇದಾಗಿದೆ.
ಸೋಮಶೇಖರ್ ಅವರ ಪುತ್ರ ನಿಶಾಂತ್ ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ಭಾನುವಾರ (ಜ.9) ದೂರು ನೀಡಿದ್ದರು. ಸೋಮಶೇಖರ್ ಅವರ ಆಪ್ತ ಸಹಾಯಕರ ಮೊಬೈಲ್ ಸಂಖ್ಯೆಗೆ ಒಂದು ವಾಟ್ಸ್ಆಯಪ್ ಸಂದೇಶ ಬಂದಿತ್ತು. ಅದು ವಿದೇಶಿ ಸಂಖ್ಯೆಯಾಗಿದ್ದು ಅದರಲ್ಲಿ ‘ಸೋಮಶೇಖರ್ ಅವರ ಪುತ್ರ ನಿಶಾಂತ್ನ ಅಶ್ಲೀಲ ವಿಡಿಯೋ ನಮ್ಮ ಬಳಿ ಇದೆ. ಒಂದು ಕೋಟಿ ರೂಪಾಯಿ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಬಿಡುಗಡೆ ಮಾಡುತ್ತೇವೆ’ ಎಂದು ಹೇಳಲಾಗಿತ್ತು. ಇದನ್ನು ನೋಡಿದ ನಿಶಾಂತ್ ಅವರು ಇದು ಫೇಕ್ ವಿಡಿಯೋ ಆಗಿರುವುದಾಗಿ ಹೇಳಿ ಸೈಬರ್ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು.
ನನ್ನ ಪುತ್ರ ಊಟ ಮಾಡುವ ಚಿತ್ರಗಳನ್ನು ಪಡೆದು ವಿಡಿಯೋ ಮಾಡಿದ್ದು, ಇದನ್ನು ಮಾರ್ಫ್ ಮಾಡಿರುವ ಸಾಧ್ಯತೆಯಿದೆ. ಹೀಗಾಗಿ ವಿಡಿಯೋ ಸಮೇತ ದೂರು ನೀಡಿದ್ದೇವೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಳಿಕ ಅಸಲಿ ಸತ್ಯ ಗೊತ್ತಾಗಲಿದೆ ಎಂದು ಸೋಮಶೇಖರ್ ಅವರು ಹೇಳಿಕೆ ನೀಡಿದ್ದರು. ನಾನು ರಾಜಕೀಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಪಕ್ಷ ಸಂಘಟನೆಯಲ್ಲಿ ಕೆಲಸವನ್ನು ಮಾಡುತ್ತಾ ಬಂದಿರುತ್ತೇನೆ. ನನ್ನ ಮತ್ತು ನನ್ನ ತಂದೆ ರಾಜಕೀಯ ಬೆಳವಣಿಗೆ ಸಹಿಸದೆ ಕೃತ್ಯ ಮಾಡಲಾಗಿದೆ. ನನ್ನನ್ನು ನೇರವಾಗಿ ಟಾರ್ಗೆಟ್ ಮಾಡಿ ನಕಲಿ ವಿಡಿಯೋ ಮಾಡಲಾಗಿದೆ. ಯಾರೋ ಮಹಿಳೆಯ ಜತೆಯಲ್ಲಿರುವಂತೆ ಅಶ್ಲೀಲವಾದ ನಕಲಿ ದೃಶ್ಯಾವಳಿ ಮತ್ತು ಫೋಟೋ ಸೃಷ್ಟಿಸಿ ನನಗೆ ಕಳುಹಿಸಲಾಗಿದೆ ಎಂದು ನಿಶಾಂತ್ ಹೇಳಿದ್ದರು.
ಇದೀಗ ಈ ಕೇಸ್ಗೆ ಭಾರಿ ಟ್ವಿಸ್ಟ್ ಸಿಕ್ಕಿದೆ. ಇದಾಗಲೇ ಈ ಕೇಸ್ಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ವಿಜಯಪುರದ ಶಾಸಕರೊಬ್ಬರ ಪುತ್ರಿಯ ವಿರುದ್ಧವೂ ಭಾರಿ ಆರೋಪ ಕೇಳಿಬಂದಿದೆ. ಇದಾಗಲೇ ಬಂಧಿತರಾಗಿರುವವರ ಪೈಕಿ ಸೋಮಶೇಖರ್ ಅವರ ಮಾಜಿ ಗನ್ ಮ್ಯಾನ್ ಒಬ್ಬರಾಗಿದ್ದರೆ, ಖ್ಯಾತ ಜ್ಯೋತಿಷಿಯೊಬ್ಬರ ಪುತ್ರ ರಾಹುಲ್ ಭಟ್ ಇನ್ನೊಬ್ಬ.
ಈ ಬಗ್ಗೆ ಇನ್ನಷ್ಟು ಆಳಕ್ಕೆ ಹೋಗಿರುವ ಪೊಲೀಸರಿಗೆ ಶಾಸಕನ ಪುತ್ರಿ ಹೀಗೇಕೆ ಮಾಡಿರಬಹುದು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಿದ್ದು, ಇದು ಈ ಪ್ರಕರಣದ ಇನ್ನಷ್ಟು ಮಹತ್ವವನ್ನು ನೀಡುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳಾದ ರಾಹುಲ್ ಭಟ್, ಕಾಂಗ್ರೆಸ್ ಶಾಸಕರ ಪುತ್ರಿ ಹಾಗೂ ನಿಶಾಂತ್ಗೂ ಈ ಹಿಂದೆಯೇ ಪರಿಚಯವಿದೆ. ಇವರು ಲಂಡನ್ನಲ್ಲಿ ವಿದ್ಯಾಭ್ಯಾಸಕ್ಕೆಂದು ಹೋಗಿದ್ದು, ಮೂವರೂ ಆಪ್ತ ಸ್ನೇಹಿತರಾಗಿದ್ದರು. ಒಟ್ಟಿಗೇ ನೆಲೆಸಿದ್ದರು. ನಿಶಾಂತ್ ಮತ್ತು ಶಾಸಕರ ಪುತ್ರಿಯ ಜತೆ ಒಡನಾಟ ಹೆಚ್ಚಿಗೆ ಇತ್ತು. ಆದರೆ ಈ ನಡುವೆ ನಿಶಾಂತ್ ಬೇರೊಬ್ಬರ ಜತೆ ಓಡಾಟ ಶುರು ಮಾಡಿದ್ದರು. ಇದನ್ನು ಸಹಿಸಲಾಗದೇ ಶಾಸಕನ ಪುತ್ರಿ, ರಾಹುಲ್ ಹಾಗೂ ಎಸ್.ಟಿ ಸೋಮಶೇಖರ್ ಅವರ ಮಾಜಿ ಗನ್ ಮ್ಯಾನ್ ಬಳಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ತನಿಖೆಯ ಬಳಿಕ ಸಂಪೂರ್ಣ ಸತ್ಯಾಂಶ ಬೆಳಕಿಗೆ ಬರಬೇಕಿದೆ.