No menu items!
11.1 C
Munich
Wednesday, April 29, 2026

ಸೆಪ್ಟೆಂಬರ್ 27ಕ್ಕೆ ಭಾರತ್ ಬಂದ್

Must read

ದೆಹಲಿಯಲ್ಲಿ ರೈತ ಚಳವಳಿ ಬುಧವಾರಕ್ಕೆ 300 ದಿನ ಪೂರೈಸಿದೆ. ಕಳೆದ ವರ್ಷ ನವೆಂಬರ್ ಮಾಸದಲ್ಲಿ ರೈತರು ದಿಲ್ಲಿ ಚಲೋ ಜಾಥಾ ಹಮ್ಮಿಕೊಂಡಿದ್ದರು. ದಿಲ್ಲಿ ಗಡಿಗಳಲ್ಲಿ ರೈತರನ್ನು ತಡೆಹಿಡಿಯಲಾಯಿತು. ಪ್ರಭುತ್ವ ರಸ್ತೆಗಳಲ್ಲಿ ಕಂದಕ ತೋಡಿತು. ಅಶ್ರುವಾಯು ಸಿಡಿಸಿತು. ವಾಟರ್ ಜೆಟ್‌ಗಳನ್ನು ಹಾರಿಸಿತು. ರೈತರು ಧೃತಿಗೆಡಲಿಲ್ಲ. ದಿಲ್ಲಿ ಗಡಿಗಳಲ್ಲೇ ಮೊಕ್ಕಾಂ ಹೂಡಿದರು. ಅಂದಿನಿಂದ ಇಂದಿನವರೆಗೆ ಶಾಂತಿಯುತ ಚಳವಳಿಯಲ್ಲಿ ತೊಡಗಿದ್ದಾರೆ.

ದಿಲ್ಲಿ ರೈತ ಚಳವಳಿಯ ಉದ್ದೇಶ ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ತಂದಿರುವ ಮೂರು ಕರಾಳ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು. ರೈತ ಬೆಳೆದ ಬೆಳೆಗೆ ಖಾತ್ರಿಯಾದ ಎಂಎಸ್‌ಪಿ ನೀಡಬೇಕು. ಅಲ್ಲಿಯವರೆಗೆ ಚಳವಳಿ ಮುಂದುವರೆಸಲು ರೈತರು ಸಕಲ ಸನ್ನದ್ಧರಾಗಿ ಕುಳಿತಿದ್ದಾರೆ. ದಿನೇ ದಿನೇ ಚಳವಳಿ ಗಟ್ಟಿಗೊಳ್ಳುತ್ತಿದೆ. ದೇಶಾದ್ಯಂತ ವ್ಯಾಪಿಸುತ್ತಿದೆ. ಇಷ್ಟೆಲ್ಲಾ ಆದರೂ ರೈತರ ಬೇಡಿಕೆಗಳೇನು ಎಂಬುದು ಪ್ರಭುತ್ವಕ್ಕೆ ಸ್ಪಷ್ಟವಾಗಿ ತಿಳಿದಿದ್ದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಇದೀಗ ದಿಲ್ಲಿ ರೈತ ಚಳವಳಿಯ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ 27 ರಂದು ಭಾರತ್ ಬಂದ್‌ಗೆ ರೈತರು ಕರೆ ಕೊಟ್ಟಿದ್ದಾರೆ. ರೈತರ ಪರವಾಗಿ ವಿವಿಧ ಸಾಮಾಜಿಕ ಸಂಘಟನೆಗಳು ಸೇರಲಿವೆ ಎಂಬ ಆಶಾಭಾವನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ವ್ಯಕ್ತಪಡಿಸಿದೆ. ಮಹಿಳಾ ಸಂಘಟನೆಗಳು, ಕಾರ್ಮಿಕ ಒಕ್ಕೂಟಗಳು ಸೇರಿದಂತೆ ಅನೇಕ ಯುವ ಸಂಘಟನೆಗಳು ಚಳವಳಿಗೆ ಸಾಥ್ ನೀಡುತ್ತಿವೆ. 27ರಂದು ಕಿಸಾನ್ ಮಹಾಪಂಚಾಯತ್‌ಗಳು, ಬೈಕ್ ಹಾಗೂ ಸೈಕಲ್ ಜಾಥಾಗಳನ್ನು ಆಯೋಜಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.

 

ಮೊನ್ನೆ ತಾನೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಕ್ಷೇತ್ರ ಗೋರಕ್‌ಪುರದಲ್ಲಿ ರೈತರ ಜಾಥಾ ಏರ್ಪಡಿಸಲಾಗಿತ್ತು. ಲಕ್ಷಾಂತರ ರೈತರು ಭಾಗವಹಿಸಿ ಚಳವಳಿ ಯಶಸ್ವಿಗೊಳಿಸಿದ್ದಾರೆ. ಅತ್ತ ದಿಲ್ಲಿಯ ನಾಯಕರು ಈ ಮುಂಗಾರು ಹಂಗಾಮಿನಲ್ಲಿ ಅತ್ಯಧಿಕ ಉತ್ಪಾದನೆ ಆಗಿದೆ ಎಂದು ಬೀಗುತ್ತಿದ್ದಾರೆ. ಹೌದು ಸ್ವಾಮಿ, ಉತ್ಪಾದನೆಯೇನೋ ರೈತರು ಮಾಡಿದ್ದಾರೆ ಅದಕ್ಕೆ ತಕ್ಕುದಾದ ಬೆಲೆ, ಖಾತ್ರಿಯಾದ ಬೆಂಬಲ ಬೆಲೆ ಕೊಡಿ ಎಂದು ನಾವೂ ಕೇಳುತ್ತಿದ್ದೇವೆ ಎಂದು ರೈತ ನಾಯಕರು ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಆ ಬಗ್ಗೆ ಸರ್ಕಾರ ಜಾಣ ಕಿವುಡು ಪ್ರದರ್ಶಿಸುತ್ತಿದೆ.

 

ಅಂದಹಾಗೆ ಸೆಪ್ಟೆಂಬರ್ 27ರಂದು ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಕರ್ನಾಟಕದಲ್ಲಿ ಯಾವ್ಯಾವ ಪಕ್ಷಗಳು, ವಿಶೇಷವಾಗಿ ರೈತ ಪರ-ಜನಪರ ಎಂದು ಹೇಳಿಕೊಳ್ಳುವ ಯಾವ್ಯಾವ ನಾಯಕರು ಬೆಂಬಲ ಸೂಚಿಸುತ್ತಾರೆ ಕಾದು ನೋಡಬೇಕಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article