No menu items!
12.4 C
Munich
Wednesday, April 29, 2026

ಹೇಗಿದೆ ಬಹುನಿರೀಕ್ಷಿತ ಯುವರತ್ನ? ವಿಮರ್ಶೆ

Must read

ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ರಾಮ್ ಕಾಂಬಿನೇಷನ್ ನ ಎರಡನೇ ಸಿನಿಮಾ ಯುವರತ್ನ ಇಂದು ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದೆ. ರಾಮಾಚಾರಿ ಮತ್ತು ರಾಜಕುಮಾರ ದಂತಹ ಅತ್ಯುತ್ತಮ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಸಂತೋಷ್ ಆನಂದ್ ರಾಮ್ ತಮ್ಮ ಬತ್ತಳಿಕೆಯಲ್ಲಿ ಇನ್ನೂ ದೊಡ್ಡ ದೊಡ್ಡ ಅಸ್ತ್ರಗಳಿವೆ ಎಂಬುದನ್ನು ಯುವರತ್ನ ಮೂಲಕ ಸಾಬೀತುಪಡಿಸಿದ್ದಾರೆ. ಪುನೀತ್ ಸಿನಿಮಾ ಎಂದರೆ ಮಸ್ತ್ ಡ್ಯಾನ್ಸ್ , ಒಳ್ಳೆ ಆ್ಯಕ್ಷನ್ ಸೀಕ್ವೆನ್ಸ್ ಇದ್ದೇ ಇರುತ್ತವೆ ಈ ಚಿತ್ರದಲ್ಲಿಯೂ ಸಹ ಅಂತಹ ಅಂಶಗಳಿಗೇನೂ ಕೊರತೆ ಇಲ್ಲವೇ ಇಲ್ಲ. ಆದರೆ ಡಾನ್ಸ್ ಮತ್ತು ಆ್ಯಕ್ಷನ್ ಸೀಕ್ವೆನ್ಸ್ ಪಕ್ಕಕ್ಕಿಟ್ಟು ಈ ಚಿತ್ರದಲ್ಲಿ ನಾವು ಚಿತ್ರಕತೆ ಮತ್ತು ಕಂಟೆಂಟ್ ಬಗ್ಗೆ ಮಾತನಾಡಬೇಕು. ಏಕೆಂದರೆ ಚಿತ್ರಕತೆ ಮತ್ತು ಕಂಟೆಂಟ್ ಬಗ್ಗೆ ಎಷ್ಟೇ ಮಾತನಾಡಿದರೂ ಕಡಿಮೆಯೇ..

 

ಸಿನಿಮಾ ಎಂದರೆ ಕೇವಲ ನಗಿಸುವುದಿಲ್ಲ, ಕೇವಲ ಫೈಟ್ ಮಾಡುವುದಲ್ಲ, ಕೇವಲ ಸೇಡು ತೀರಿಸಿಕೊಳ್ಳುವ ಕಥೆಯಲ್ಲ.. ಮೌಲ್ಯವನ್ನು ಸಾರುವಂಥ ಕಥೆಯನ್ನು ಜನರ ಮನಸ್ಸಿಗೆ ಇಳಿಸಿ ಬದಲಾವಣೆ ತರುವುದೇ ಉತ್ತಮ ಸಿನಿಮಾ. ರಾಜಕುಮಾರ ನೋಡಿ ವೃದ್ಧಾಶ್ರಮ ಗಳಿಂದ ತಂದೆ ತಾಯಿಯನ್ನು ಮಕ್ಕಳು ಕರೆದುಕೊಂಡು ಬಂದಿದ್ದರು ಇದೀಗ ಯುವರತ್ನ ಚಿತ್ರದ ಮೂಲಕ ಶಿಕ್ಷಣ ವಿಚಾರದಲ್ಲಿ ಮಕ್ಕಳು ಮತ್ತು ಪೋಷಕರ ನಡುವೆ ಇರುವ ಗೊಂದಲಕ್ಕೆ ತೆರೆ ಬೀಳಲಿದ್ದು ಈ ಚಿತ್ರವನ್ನು ತಪ್ಪದೆ ಪೋಷಕರ ಜತೆ ಮಕ್ಕಳು ನೋಡಲೇಬೇಕು.

 

 

ಆರ್ ಕೆ ಯೂನಿವರ್ಸಿಟಿ , ಐವತ್ತು ವರ್ಷಗಳ ಒಳ್ಳೆಯ ಹಿನ್ನೆಲೆ ಇರುವ ಕಾಲೇಜು ಸಂಕಷ್ಟಕ್ಕೆ ಸಿಲುಕುತ್ತದೆ, ಕಾಲೇಜಿಗೆ ಕೆಟ್ಟ ಹೆಸರು ಬರುತ್ತದೆ , ಹಲವಾರು ವರ್ಷಗಳ ಕಾಲ ಅತ್ಯುತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿರುವಂತಹ ಕಾಲೇಜಿಗೆ ಕೆಟ್ಟ ಹೆಸರು ತಂದದ್ದನ್ನು ಹೇಗೆ ನಿವಾರಣೆ ಮಾಡುತ್ತಾರೆ ಎಂಬುದೇ ಯುವರತ್ನ ಚಿತ್ರದ ಒನ್ ಲೈನ್ ಸ್ಟೋರಿ..

 

ಶಿಕ್ಷಣ ಎಂದರೆ ಫೀಸ್ ಕಟ್ಟುವುದು, ಪರೀಕ್ಷೆ ಬರೆಯುವುದು & ತೇರ್ಗಡೆಯಾಗುವುದು ಅಷ್ಟೇ ಅಲ್ಲ.. ಶಿಕ್ಷಣ ಒಂದು ಶಕ್ತಿ, ಪುಸ್ತಕ ಹಿಡಿದ ಕೈ ಸರಿದಾರಿಯ ನಕ್ಷೆ ಎಂಬ ಸಂದೇಶವನ್ನು ಚಿತ್ರದಲ್ಲಿ ಸಾರಲಾಗಿದೆ. ಚಿತ್ರದಲ್ಲಿ ಬರುವ ಕೆಲವೊಂದಿಷ್ಟು ದೃಶ್ಯ ಯುವಕರ ಕಣ್ಣಿನಲ್ಲಿಯೂ ಸಹ ನೀರನ್ನು ತರಿಸುವುದರಲ್ಲಿ ಡೌಟೇ ಇಲ್ಲ.

 

 

ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಬಗ್ಗೆ ಎರಡು ಮಾತಿಲ್ಲ ಪ್ರಕಾಶ್ ರೈ ಅವರು ಕಾಲೇಜಿನ ಪ್ರಾಂಶುಪಾಲರಾಗಿ ಅಭಿನಯಿಸಿರುವ ರೀತಿಗೆ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಫ್ಯಾನ್ ಆಗಲೇಬೇಕು. ಚಿತ್ರದಲ್ಲಿ ಬಂದು ಹೋಗುವ ಸಣ್ಣ ಪುಟ್ಟ ಪಾತ್ರಗಳು ಸಹ ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸಿನಲ್ಲಿ ಚಿತ್ರ ಮುಗಿದ ನಂತರವೂ ಉಳಿದಿರುತ್ತವೆ. ಅಷ್ಟರ ಮಟ್ಟಿಗಿದೆ ಪ್ರತಿ ಪಾತ್ರ ಸಾರುವ ಸಂದೇಶ.

 

ಮೊದಲೇ ಹೇಳಿದಂತೆ ಸಂತೋಷ್ ಆನಂದ್ ರಾಮ್ ಬತ್ತಳಿಕೆಯಲ್ಲಿರುವ ದೊಡ್ಡ ದೊಡ್ಡ ಅಸ್ತ್ರಗಳಲ್ಲಿ ಯುವರತ್ನ ಚಿತ್ರವೂ ಒಂದು. ಪುನೀತ್ ಸಂತೋಷ್ ಆನಂದ್ ರಾಮ್ ಜೋಡಿ ಎರಡನೇ ಇಂಡಸ್ಟ್ರಿ ಹಿಟ್ ಬಾರಿಸಿದರೂ ಯಾವುದೇ ಆಶ್ಚರ್ಯವಿಲ್ಲ. ಚಿತ್ರದ ಮತ್ತೊಂದು +ಪಾಯಿಂಟ್ ಎಂದರೆ ಸಂಗೀತ ನಿರ್ದೇಶನ, ಎಸ್ ಎಸ್ ತಮನ್ ಯುವರತ್ನ ಚಿತ್ರಕ್ಕೆ ನೀಡಿರುವ ಸಂಗೀತ ನಿರ್ದೇಶನಕ್ಕೆ ಸ್ಪೆಷಲ್ ಥ್ಯಾಂಕ್ಸ್ ಹೇಳಲೇಬೇಕು.

 

 

 

ಚಿತ್ರದ -ಪಾಯಿಂಟ್ ಗಳೆಂದರೆ ಚಿತ್ರಕತೆ ನಿಧಾನಗತಿಯಲ್ಲಿ ಸಾಗುವುದು. ಇದನ್ನು-ಪಾಯಿಂಟ್ ಅಂತಾ ಪರಿಗಣಿಸಬೇಕೇ ಅಥವಾ ಹೇಳಬೇಕಾಗಿರುವ ಸಂದೇಶವನ್ನು ಇದೇ ರೀತಿ ಹೇಳಬೇಕು ಎಂದು ತಿಳಿದುಕೊಳ್ಳಬೇಕಾ ಎಂಬುದು ಗೊಂದಲದ ವಿಷಯ.  ಒಟ್ಟಾರೆಯಾಗಿ ಹೇಳಬೇಕೆಂದರೆ ಅಪ್ಪು ಅಭಿಮಾನಿಗಳಿಗೆ ಮತ್ತು ಒಂದೊಳ್ಳೆ ಚಿತ್ರವನ್ನು ಕಣ್ತುಂಬಿಕೊಳ್ಳಬೇಕೆನ್ನುವ ಕುಟುಂಬ ಪ್ರೇಕ್ಷಕರಿಗೆ ಯುವರತ್ನ ಫುಲ್ ಮೀಲ್ಸ್.

 

 

 

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article