ಭೀಕರ ರಸ್ತೆ ಅಪಘಾತ; ಕಂದಕಕ್ಕೆ ಉರುಳಿದ ಪ್ರವಾಸಿ ವಾಹನ, ಬೆಂಗಳೂರು ದಂಪತಿ ಸೇರಿ 8 ಮಂದಿ ಸಾವು
ಧರ್ಮಶಾಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ವಾಹನವೊಂದು ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ ಬೆಂಗಳೂರು ದಂಪತಿ ಸೇರಿದಂತೆ ಎಂಟು ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಅಪಘಾತವು ಚಂಬಾ ಜಿಲ್ಲೆಯ ಚುರಾ ಉಪವಿಭಾಗದ ಬೈರಾಗಢ–ಸಚ್ ಪಾಸ್–ಕಿಲ್ಲರ್ ಮಾರ್ಗದ ಕಲಾಬನ್ ಪ್ರದೇಶದ ಬಳಿ ಸಂಭವಿಸಿದೆ.
ಮಾಹಿತಿಯ ಪ್ರಕಾರ, ರಜೆ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ದಂಪತಿ ಡಾಲ್ಹೌಸಿಗೆ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ಛತ್ತೀಸ್ಗಢ ಮೂಲದ ಮತ್ತೊಂದು ಕುಟುಂಬವೂ ಪ್ರವಾಸದಲ್ಲಿತ್ತು. ಎರಡೂ ಕುಟುಂಬಗಳು ಹಿಮದಿಂದ ಆವೃತವಾದ ಪರ್ವತ ಪ್ರದೇಶಗಳನ್ನು ವೀಕ್ಷಿಸಲು ಬಾಡಿಗೆ ಟ್ಯಾಕ್ಸಿಯಲ್ಲಿ ಪ್ರಯಾಣ ಬೆಳೆಸಿದ್ದವು.
ಬೆಂಗಳೂರು ಮೂಲದ ದಂಪತಿ ಬಾಡಿಗೆಗೆ ಪಡೆದಿದ್ದ ಟ್ಯಾಕ್ಸಿಯನ್ನು ನಂತರ ಮತ್ತೊಂದು ಪ್ರವಾಸಿ ಕುಟುಂಬದೊಂದಿಗೆ ಹಂಚಿಕೊಂಡಿದ್ದರು. ಶುಕ್ರವಾರ ಸಚ್ ಪಾಸ್ ಮಾರ್ಗವಾಗಿ ಬೈರಾಗಢ–ಕಿಲ್ಲರ್ ರಸ್ತೆಯಲ್ಲಿ ಪ್ರವಾಸ ಕೈಗೊಂಡಿದ್ದ ಈ ತಂಡ ನಿಗದಿತ ಸಮಯಕ್ಕೆ ಡಾಲ್ಹೌಸಿಗೆ ಹಿಂದಿರುಗಿರಲಿಲ್ಲ.
ವಾಹನ ಸಮಯಕ್ಕೆ ಮರಳದ ಹಿನ್ನೆಲೆಯಲ್ಲಿ ಅನುಮಾನಗೊಂಡ ವಾಹನ ಮಾಲೀಕರು ಜಿಪಿಎಸ್ ಮೂಲಕ ಟ್ಯಾಕ್ಸಿಯ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸಿದರು. ಈ ವೇಳೆ ಕಲಾಬನ್ ಪ್ರದೇಶದ ಬಳಿ ವಾಹನ ದೀರ್ಘಕಾಲ ನಿಂತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿವೆ. ಪರಿಶೀಲನೆ ವೇಳೆ ವಾಹನವು ಆಳವಾದ ಕಂದಕಕ್ಕೆ ಉರುಳಿರುವುದು ಪತ್ತೆಯಾಗಿದೆ. ಅಪಘಾತದಲ್ಲಿ ಬೆಂಗಳೂರು ದಂಪತಿ, ಛತ್ತೀಸ್ಗಢದ ದಂಪತಿ, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.



