ಕುರ್ ಕುರೆ ಪ್ಯಾಕೆಟ್ʼನಲ್ಲಿದ್ದ ಪ್ಲಾಸ್ಟಿಕ್ ಬಾಲ್ ಗಂಟಲಲ್ಲಿ ಸಿಲುಕಿ 3 ವರ್ಷದ ಬಾಲಕ ಸಾವು!
ಮೈಸೂರು: ಕುರ್ಕುರೆ ಪ್ಯಾಕೆಟ್ನೊಳಗೆ ಉಡುಗೊರೆಯಾಗಿ ನೀಡಲಾಗಿದ್ದ ಪ್ಲಾಸ್ಟಿಕ್ ಬಾಲ್ ಗಂಟಲಲ್ಲಿ ಸಿಲುಕಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮೃತ ಬಾಲಕನನ್ನು ಮುಕುಂದ್ ಮಯೂರ್ (3) ಎಂದು ಗುರುತಿಸಲಾಗಿದೆ. ಆತ ಗೌರಿಪುರ ಗ್ರಾಮದ ಸಂತೋಷ್–ಐಶ್ವರ್ಯ ದಂಪತಿಯ ಏಕೈಕ ಪುತ್ರನಾಗಿದ್ದ.
ಲಭ್ಯ ಮಾಹಿತಿಯ ಪ್ರಕಾರ, ಶನಿವಾರ ಮಗು ಅಳುತ್ತಿದ್ದುದನ್ನು ಕಂಡ ಸಂಬಂಧಿಕರ ಮಕ್ಕಳು ಸಮೀಪದ ಅಂಗಡಿಯಿಂದ ಕುರ್ಕುರೆ ಪ್ಯಾಕೆಟ್ ಖರೀದಿಸಿ ಕೊಟ್ಟಿದ್ದರು. ಪ್ಯಾಕೆಟ್ನೊಳಗೆ ಮಕ್ಕಳ ಆಕರ್ಷಣೆಗೆ ಉಡುಗೊರೆಯಾಗಿ ಇರಿಸಲಾಗಿದ್ದ ಸಣ್ಣ ಪ್ಲಾಸ್ಟಿಕ್ ಬಾಲ್ ಅನ್ನು ಮಗು ಕುರ್ಕುರೆಯೊಂದಿಗೆ ಬಾಯಿಗೆ ಹಾಕಿದೆ. ಈ ವೇಳೆ ಬಾಲ್ ಗಂಟಲಲ್ಲಿ ಸಿಲುಕಿ ಮಗು ಉಸಿರಾಟಕ್ಕೆ ತೊಂದರೆ ಅನುಭವಿಸಿದೆ.
ತಕ್ಷಣ ಪೋಷಕರು ಮಗುವನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮಗು ಉಸಿರುಗಟ್ಟಿ ಮೃತಪಟ್ಟಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕನ ತಾತ ಶಂಕರ್ ನಾಯಕ, “ಮೊಮ್ಮಗನಿಗೆ ಕುರ್ಕುರೆ ಪ್ಯಾಕೆಟ್ ತೆಗೆದುಕೊಟ್ಟಿದ್ದರು. ಅದರೊಳಗೆ ಉಡುಗೊರೆಯಾಗಿ ಪ್ಲಾಸ್ಟಿಕ್ ಬಾಲ್ ಇತ್ತು. ಕುರ್ಕುರೆ ತಿನ್ನುವಾಗ ಆ ಬಾಲ್ ಅನ್ನು ಬಾಯಿಗೆ ಹಾಕಿದ್ದು, ಅದು ಗಂಟಲಲ್ಲಿ ಸಿಲುಕಿದ ಪರಿಣಾಮ ಮಗುವಿನ ಜೀವ ಉಳಿಸಲು ಸಾಧ್ಯವಾಗಲಿಲ್ಲ” ಎಂದು ದುಃಖ ವ್ಯಕ್ತಪಡಿಸಿದರು.
ಈ ಘಟನೆ ಸಂಬಂಧ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಪ್ರಕರಣದ ಕುರಿತು ಪೊಲೀಸ್ ಇಲಾಖೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.



