No menu items!
24.1 C
Munich
Thursday, June 4, 2026

Monsoon 2026: ಭಾರತಕ್ಕೆ ಮುಂಗಾರು ಎಂಟ್ರಿ: ಕೇರಳದಲ್ಲಿ ಆರೆಂಜ್ ಅಲರ್ಟ್ ಘೋಷಣೆ

Must read

Monsoon 2026: ಭಾರತಕ್ಕೆ ಮುಂಗಾರು ಎಂಟ್ರಿ: ಕೇರಳದಲ್ಲಿ ಆರೆಂಜ್ ಅಲರ್ಟ್ ಘೋಷಣೆ

ನವದೆಹಲಿ: ಮೂರು ದಿನಗಳ ವಿಳಂಬದ ಬಳಿಕ ನೈಋತ್ಯ ಮುಂಗಾರು ಮಾರುತಗಳು ಅಧಿಕೃತವಾಗಿ ಕೇರಳವನ್ನು ಪ್ರವೇಶಿಸಿದ್ದು, ದೇಶದಲ್ಲಿ ಮಳೆಗಾಲದ ಅಧಿಕೃತ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಜೂನ್ ಮೊದಲ ವಾರದಲ್ಲೇ ಮುಂಗಾರು ಕೇರಳ ಕರಾವಳಿಯನ್ನು ತಲುಪಿರುವುದರಿಂದ ದೇಶಾದ್ಯಂತ ಕೃಷಿ ಚಟುವಟಿಕೆಗಳಿಗೆ ವೇಗ ಸಿಗುವ ನಿರೀಕ್ಷೆ ಮೂಡಿದೆ.
ಮುಂಗಾರು ಆಗಮನದ ಪರಿಣಾಮ ಕೇರಳದ ವಿವಿಧ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಭಾರತದ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಶೇ.70ಕ್ಕೂ ಹೆಚ್ಚು ಪಾಲು ನೈಋತ್ಯ ಮುಂಗಾರಿನಿಂದಲೇ ದೊರೆಯುತ್ತದೆ. ದೇಶದ ಬಹುತೇಕ ಕೃಷಿ ಚಟುವಟಿಕೆಗಳು ಮಳೆಯ ಮೇಲೆ ಅವಲಂಬಿತವಾಗಿರುವ ಹಿನ್ನೆಲೆಯಲ್ಲಿ ಮುಂಗಾರು ಸಮಯಕ್ಕೆ ಸರಿಯಾಗಿ ಆರಂಭವಾಗಿರುವುದು ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಮುಂಗಾರು ಉತ್ತಮವಾಗಿದ್ದರೆ ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗುವುದರ ಜೊತೆಗೆ ಕೃಷಿ ಉತ್ಪಾದನೆ ವೃದ್ಧಿಯಾಗಿ ಹಣದುಬ್ಬರ ನಿಯಂತ್ರಣ ಹಾಗೂ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ.
ಇದೀಗ ಕೇರಳ ಪ್ರವೇಶಿಸಿರುವ ಮುಂಗಾರು ಮಾರುತಗಳು ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಇತರೆ ರಾಜ್ಯಗಳತ್ತ ಸಾಗಲಿವೆ. ಸಾಮಾನ್ಯವಾಗಿ ಕೇರಳ ಪ್ರವೇಶಿಸಿದ ಎರಡು ಅಥವಾ ಮೂರು ದಿನಗಳೊಳಗೆ ಮುಂಗಾರು ಕರ್ನಾಟಕದ ಕರಾವಳಿ ಭಾಗವನ್ನು ತಲುಪುತ್ತದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಜೊತೆಗೆ ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ತಜ್ಞರ ಅಂದಾಜಿನ ಪ್ರಕಾರ, ಜೂನ್ ಎರಡನೇ ವಾರದ ಆರಂಭದ ವೇಳೆಗೆ ನೈಋತ್ಯ ಮುಂಗಾರು ಇಡೀ ಕರ್ನಾಟಕವನ್ನು ಆವರಿಸಿಕೊಳ್ಳುವ ಸಾಧ್ಯತೆ ಇದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ.

- Advertisement -spot_img

More articles

- Advertisement -spot_img

Latest article