ನನ್ನ ವಿರುದ್ಧದ ಟೀಕೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ: ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ವಾಗ್ದಾಳಿ
ಬೆಂಗಳೂರು: ತಮ್ಮ ವಿರುದ್ಧ ಮಾಡಲಾದ ಟೀಕೆಗಳಿಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಕೆಂಪೇಗೌಡರ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿರುವವರೇ ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
“ನನ್ನ ವಿರುದ್ಧ ಮಾತನಾಡಿರುವ ವ್ಯಕ್ತಿ ಕೆಂಪೇಗೌಡರ ಹೆಸರಿನಲ್ಲಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅಂತಹ ವ್ಯಕ್ತಿಗೆ ನಾನು ಉತ್ತರ ನೀಡಬೇಕಾದ ಅಗತ್ಯವಿಲ್ಲ,” ಎಂದು ಸದಾನಂದ ಗೌಡ ಹೇಳಿದರು.
ಟೀಕಾಕಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ಸಣ್ಣ ಕೈಗಾರಿಕೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ, ಬಳಿಕ ಭೂಗತ ಜಗತ್ತಿನ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡು ಭೂಮಿ ಲೂಟಿ ಮಾಡಿದ್ದಾರೆ. ನಂತರ ರಾಜಕೀಯ ಪ್ರವೇಶಿಸಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬಿಡಿಎಯನ್ನು ಮುಳುಗಿಸಿದ ವ್ಯಕ್ತಿ ತಾನು ಸಾಚಾ ಎಂದು ಹೇಳಿಕೊಳ್ಳುತ್ತಿದ್ದಾರೆ,” ಎಂದು ಆರೋಪಿಸಿದರು.
ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, “ನನಗೆ ಕಾರ್ಯಕ್ರಮಕ್ಕೆ ಬರಬಾರದು ಎಂದು ಫೋನ್ ಮಾಡಿ ಹೇಳಿದ್ದರು. ಕೆಂಪೇಗೌಡರು ಯಾವುದೇ ಒಂದು ಪಕ್ಷಕ್ಕೆ ಸೀಮಿತರಲ್ಲ. ಅವರ ಹೆಸರಿನಲ್ಲಿ ಮತ ಪಡೆದು, ಅವರ ಭೂಮಿಯನ್ನೇ ಲೂಟಿ ಮಾಡುವುದು ಅವರಿಗೆ ಮಾಡುವ ಅವಮಾನ,” ಎಂದು ಕಿಡಿಕಾರಿದರು.
“ಹಳೆ ಮೈಸೂರು ಭಾಗದವರೇ ಒಕ್ಕಲಿಗರು, ದಕ್ಷಿಣ ಕನ್ನಡದವರು ಒಕ್ಕಲಿಗರಲ್ಲ ಎಂಬ ಹೇಳಿಕೆ ಸರಿಯಲ್ಲ. ಈ ಹೇಳಿಕೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಶೀಘ್ರದಲ್ಲೇ ಈ ಕುರಿತು ಸುದ್ದಿಗೋಷ್ಠಿಯೂ ನಡೆಯಲಿದೆ,” ಎಂದು ಹೇಳಿದರು.



