ಸಿದ್ದರಾಮಯ್ಯರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ; ರಾಜಕೀಯದಲ್ಲಿ ನಿರಂತರ ಓಡಬೇಕು: ಸತೀಶ್ ಜಾರಕಿಹೊಳಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ನಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಚರ್ಚೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ರಾಜಕೀಯದಲ್ಲಿ ಮುನ್ನಡೆಯಲು ನಿರಂತರವಾಗಿ ಸಕ್ರಿಯವಾಗಿರಬೇಕು ಎಂದು ಹೇಳಿದ್ದಾರೆ.
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಬಳಸದ ಬಗ್ಗೆ ಕೇಳಿದ ಪ್ರಶ್ನೆಗೆ, “ಸರ್ಕಾರಿ ಕಾರ್ಯಕ್ರಮದಲ್ಲಿ ಯಾರ ಫೋಟೋ ಹಾಕಬೇಕು ಎಂಬುದಕ್ಕೆ ಅಧಿಕೃತ ನಿಯಮಗಳಿರುತ್ತವೆ. ಡಿಸಿ ಅಥವಾ ಬಿಡಿಎ ವತಿಯಿಂದ ಕಾರ್ಯಕ್ರಮ ನಡೆದಿದ್ದರೆ, ಅದಕ್ಕೆ ಸಂಬಂಧಿಸಿದವರು ಸ್ಪಷ್ಟನೆ ನೀಡಬೇಕು. ನಾವು ಅದರ ಬಗ್ಗೆ ಹೇಳಲು ಸಾಧ್ಯವಿಲ್ಲ,” ಎಂದರು.
ಸಿದ್ದರಾಮಯ್ಯ ಅವರನ್ನು ಪಕ್ಷದಲ್ಲಿ ಸೈಡ್ಲೈನ್ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಸೈಡ್ಲೈನ್ ಎಂಬುದು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಸಾಮಾನ್ಯ. ಒಬ್ಬರು ಹಿಂದೆ ಸರಿದಾಗ ಮತ್ತೊಬ್ಬರು ಮುಂದೆ ಬರುತ್ತಾರೆ. ಇದು ರಾಜಕೀಯದ ಸಹಜ ಪ್ರಕ್ರಿಯೆ,” ಎಂದು ಹೇಳಿದರು.
ರಾಜಕೀಯವನ್ನು ರೈಲಿಗೆ ಹೋಲಿಸಿದ ಸಚಿವರು
ರಾಜಕೀಯದಲ್ಲಿ ಯಶಸ್ವಿಯಾಗಲು ನಿರಂತರ ಪ್ರಯತ್ನ ಅಗತ್ಯ ಎಂದು ಹೇಳಿದ ಜಾರಕಿಹೊಳಿ, “ರೈಲು ಹತ್ತಬೇಕಾದರೆ ಓಡಬೇಕು. ಮನೆಯಲ್ಲಿ ಕುಳಿತರೆ ರೈಲು ಹೋಗಿಬಿಡುತ್ತದೆ. ರೈಲು ಮಿಸ್ ಆದರೆ ಮುಂದಿನ ನಿಲ್ದಾಣಕ್ಕೆ ಹೋಗಿ ಹತ್ತಬೇಕು. ರಾಜಕೀಯವೂ ಹಾಗೆಯೇ. ಯಾರು ಹೋರಾಟ ಮಾಡುತ್ತಾರೋ ಅವರು ಉಳಿಯುತ್ತಾರೆ. ಹೋರಾಟ ಮಾಡದಿದ್ದರೆ ಜನ ಹೊಸ ನಾಯಕರನ್ನು ಆಯ್ಕೆ ಮಾಡುತ್ತಾರೆ,” ಎಂದು ಅಭಿಪ್ರಾಯಪಟ್ಟರು.



