ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿರೋ ನೀಟ್ ಪರೀಕ್ಷಾ ಅಕ್ರಮ ಮತ್ತು ಪೇಪರ್ ಲೀಕ್ ಕಿಚ್ಚು ಸದ್ಯಕ್ಕಂತೂ ತಣಿಯುವ ಲಕ್ಷಣ ಕಾಣಿಸ್ತಿಲ್ಲ. ಈ ಸಾಲು ಸಾಲು ಅಕ್ರಮಗಳ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧವೇ ಸಮರ ಸಾರಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭೀಜಿತ್ ದೀಪ್ಕೆ ಅವರಿಗೆ ಈಗ ಸಡನ್ ಆಗಿ ಟೈಫಾಯ್ಡ್ ದೃಢಪಟ್ಟಿದೆ. ಪ್ರತಿದಿನ ಆಸ್ಪತ್ರೆಯ ಬೆಡ್ ಮೇಲೆ ಐವಿ ಡ್ರಿಪ್ಸ್ ಪಡೆಯುತ್ತಾ, ದೇಹದಲ್ಲಿ ಶಕ್ತಿಯೇ ಇಲ್ಲದ ಪರಿಸ್ಥಿತಿಯಲ್ಲಿದ್ದರೂ ದೀಪ್ಕೆ ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ. ದೇವ್ರಾಣೆ ನಮ್ ಹೋರಾಟ ನಿಲ್ಲಲ್ಲ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡುವವರೆಗೂ ನಾವಿಲ್ಲಿಂದ ಕದಲುವುದಿಲ್ಲ ಅಂತ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಬಿಟ್ಟು ಸರ್ಕಾರಕ್ಕೆ ಮತ್ತೆ ನೇರ ವಾರ್ನಿಂಗ್ ಕೊಟ್ಟಿದ್ದಾರೆ.
ಜ್ವರ, ಡ್ರಿಪ್ಸ್: ಆದ್ರೂ ಕಮ್ಮಿಯಾಗಿಲ್ಲ ದೀಪ್ಕೆ ಕಿಚ್ಚು
ಕಳೆದ ಕೆಲವು ದಿನಗಳಿಂದ ಅಭೀಜಿತ್ ದೀಪ್ಕೆ ತೀವ್ರ ಜ್ವರ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರು. ರಕ್ತ ಪರೀಕ್ಷೆ ವರದಿ ಕೈಗೆ ಸಿಗುತ್ತಿದ್ದಂತೆಯೇ ಅವರಿಗೆ ಟೈಫಾಯ್ಡ್ ಇರೋದು ಕನ್ಫರ್ಮ್ ಆಗಿದೆ. ಸಾಮಾನ್ಯವಾಗಿ ಇಂಥಾ ಪರಿಸ್ಥಿತಿಯಲ್ಲಿ ಯಾರೇ ಆದ್ರೂ ಹೋರಾಟ ಪಕ್ಕಕ್ಕಿಟ್ಟು ಸುಮ್ಮನೆ ಮನೆ ಸೇರ್ಕೋತಾರೆ. ಆದ್ರೆ ದೀಪ್ಕೆ ‘ಎಕ್ಸ್’ (X) ಖಾತೆಯಲ್ಲಿ ಹಂಚಿಕೊಂಡಿರೋ ಒಂದು ವಿಡಿಯೋ ಮೆಸೇಜ್ ಇಡೀ ದೆಹಲಿ ಸುಲ್ತಾನರ ನಿದ್ದೆಗೆಡಿಸಿದೆ. ನನಗೆ ಹುಷಾರಿಲ್ಲದೇ ಇರಬಹುದು, ಡ್ರಿಪ್ಸ್ ಹಾಕಿರಬಹುದು. ಆದ್ರೆ ದೇಶಾದ್ಯಂತ ಶಾಂತಿಯುತವಾಗಿ ಬೀದಿಗಿಳಿದು ಹೋರಾಡುತ್ತಿರೋ ನನ್ ‘ಕಾಕ್ರೋಚ್’ ಪಡೆಯ ಕಿಚ್ಚು ಕಮ್ಮಿಯಾಗಿಲ್ಲ ಅಂತ ಪಂಚ್ ಡೈಲಾಗ್ ಹೊಡೆದಿದ್ದಾರೆ.
26 ದಿನಗಳ ಬಳಿಕ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯ
ಈ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ಜೂನ್ 28ರಿಂದ ಬರೋಬ್ಬರಿ 26 ದಿನಗಳ ಕಾಲ ಸತತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಕೊನೆಗೂ ತಮ್ಮ ಮುಷ್ಕರ ಹಿಂಪಡೆದಿದ್ದಾರೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರೋದು, ಅಕ್ರಮಗಳ ವಿರುದ್ಧ ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆಸುವುದು, ಮತ್ತು ಪೇಪರ್ ಲೀಕ್ನಿಂದ ಕಂಗಾಲಾಗಿ ಪ್ರಾಣ ಕಳೆದುಕೊಂಡ ಅಮಾಯಕ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡುವ ಭರವಸೆಯನ್ನು ಕೇಂದ್ರ ಸರ್ಕಾರ ಲಿಖಿತ ರೂಪದಲ್ಲಿ ಕೊಟ್ಟ ಮೇಲೆಯೇ ವಾಂಗ್ಚುಕ್ ಸಾಬ್ ತಮ್ಮ 26 ದಿನಗಳ ಉಪವಾಸ ಅಂತ್ಯಗೊಳಿಸಿದ್ದು.
ವಾಂಗ್ಚುಕ್ ಉಪವಾಸ ಮುಗಿದರೂ ಆರದ ಸಿಜೆಪಿ ಪ್ರತಿಭಟನೆಯ ಬೆಂಕಿ
ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದಿದ್ದಕ್ಕೆ ಅಭೀಜಿತ್ ದೀಪ್ಕೆ ಮತ್ತು ಅವರ ಟೀಮ್ ತೀವ್ರ ಸಂತಸ ವ್ಯಕ್ತಪಡಿಸಿದೆ. ವಾಂಗ್ಚುಕ್ ಸರ್ ಜೀವ ನಮಗೆ ಅತ್ಯಂತ ಅಮೂಲ್ಯವಾದದ್ದು. ಅವರು 26 ದಿನಗಳ ಕಾಲ ದೇಶದ ಭವಿಷ್ಯಕ್ಕಾಗಿ ತಮ್ಮ ದೇಹವನ್ನು ದಂಡಿಸಿದ್ದಾರೆ. ಅವರು ಜ್ಯೂಸ್ ಕುಡಿದು ನಿಟ್ಟುಸಿರು ಬಿಟ್ಟಿದ್ದು ನಮಗೆ ಅಬ್ಬಬ್ಬಾ ಅನ್ಸೋವಷ್ಟು ನಿರಾಳ ತಂದಿದೆ ಅಂತ ದೀಪ್ಕೆ ಹೇಳಿದ್ದಾರೆ. ಆದ್ರೆ ಕಥೆ ಇಲ್ಲೇ ಮುಗಿದಿಲ್ಲ! ವಾಂಗ್ಚುಕ್ ಹಸಿವು ಇಂಗಿಸಿಕೊಂಡಿರಬಹುದು, ಆದ್ರೆ ಸಿಜೆಪಿ ಹೊತ್ತಿಸಿರೋ ಕಿಚ್ಚು ಮಾತ್ರ ಇಷ್ಟಕ್ಕೇ ಆರುವಂತದ್ದಲ್ಲ.
ಶಿಕ್ಷಣ ಸಚಿವರ ರಾಜೀನಾಮೆ ಸಿಗೋವರೆಗೂ ಜಂತರ್ ಮಂತರ್ ಬಿಡಲ್ಲ
ಕೇಂದ್ರ ಸರ್ಕಾರ ನಮಗೆ ಬರಿ ಕಾಗದದ ಮೇಲೆ ಭರವಸೆ ಕೊಟ್ಟರೆ ಸಾಲದು, ಅಕ್ರಮದ ನೇರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ಕುರ್ಚಿಯಿಂದ ಕೆಳಗಿಳಿಯಬೇಕು! ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಜಂತರ್ ಮಂತರ್ ಬಿಟ್ಟು ಕದಲುವುದಿಲ್ಲ ಎಂದು CJP ಸ್ಪಷ್ಟಪಡಿಸಿದೆ. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಜೊತೆ ಸಿಜೆಪಿ ಮುಖಂಡರು ಸುದೀರ್ಘ ಮಾತುಕತೆ ನಡೆಸಿದ್ದರೂ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರದಲ್ಲಿ ಸರ್ಕಾರ ಇನ್ನು ಯಾವುದೇ ಗಟ್ಟಿ ತೀರ್ಮಾನ ತಗೊಂಡಿಲ್ಲ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ತಿಳಿಸದಿದ್ದರೆ ತಮ್ಮ ಹೋರಾಟದ ಹಾದಿ ಮತ್ತಷ್ಟು ಉಗ್ರವಾಗಲಿದೆ ಎಂದು ಸಿಜೆಪಿ ನಾಯಕರು ನೇರವಾಗಿಯೇ ಎಚ್ಚರಿಸಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಾಂತಿಯುತ ಹೋರಾಟದ ಕಟ್ಟುನಿಟ್ಟಿನ ಹಾದಿ
ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ತೂಗುಯ್ಯಾಲೆಯಲ್ಲಿ ತಳ್ಳಿರೋ ಈ ನೀಟ್ ಮತ್ತು ಎನ್ಟಿಎ ಪರೀಕ್ಷಾ ಸಾಲು ಸಾಲು ಅಕ್ರಮಗಳು ಕೇವಲ ಸಾಧಾರಣ ಹಗರಣವಲ್ಲ. ವಿದ್ಯಾರ್ಥಿಗಳ ಕಣ್ಣೀರು ಮತ್ತು ಪೋಷಕರ ಆಕ್ರೋಶ ಈಗ ಬೀದಿಗೆ ಬಂದಿದೆ. ಇಂತಹ ಗಂಭೀರ ಸನ್ನಿವೇಶದಲ್ಲೂ ಸಿಜೆಪಿ ಪ್ರತಿಭಟನಾಕಾರರು ಎಲ್ಲೂ ಕಾನೂನು ಕೈಗೆತ್ತಿಕೊಳ್ಳದೆ ಅತ್ಯಂತ ಶಾಂತಿಯುತವಾಗಿ, ಪ್ರಜಾಸತ್ತಾತ್ಮಕವಾಗಿ ಧರಣಿ ನಡೆಸುತ್ತಿರುವುದನ್ನು ಅಭೀಜಿತ್ ದೀಪ್ಕೆ ಮನಸಾರೆ ಮೆಚ್ಚಿಕೊಂಡಿದ್ದಾರೆ. ದೇಶದ ಮೂಲೆ ಮೂಲೆಯಿಂದ ಬಂದು ಸಾಥ್ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿರೋ ಅವರು, ಪ್ರಧಾನ್ ರಾಜೀನಾಮೆಯೇ ನಮ್ಮ ಅಂತಿಮ ಗುರಿ ಎಂದಿದ್ದಾರೆ.
ಮುಂದೇನು? ಕೇಂದ್ರದ ಮೌನಕ್ಕೆ ಸವಾಲೆಸೆದ ‘ಕಾಕ್ರೋಚ್’ ಪಡೆ
ಒಟ್ಟಿನಲ್ಲಿ, ದೇಹಕ್ಕೆ ಟೈಫಾಯ್ಡ್ ಬಂದಿದ್ದರೂ ನಾಯಕನಿಗೆ ಧೈರ್ಯ ಕುಗ್ಗಿಲ್ಲ, ಅತ್ತ 26 ದಿನಗಳ ಉಪವಾಸ ಮುಗಿದಿದ್ದರೂ ಸಿಜೆಪಿ ಕಾರ್ಯಕರ್ತರ ಕಾವು ತಗ್ಗಿಲ್ಲ! ಪ್ರತಿಯೊಬ್ಬ ಪ್ರಜೆಯೂ ಈ ಪರೀಕ್ಷಾ ಅಕ್ರಮದ ವಿರುದ್ಧ ಜವಾಬ್ದಾರಿ ಮತ್ತು ಪಾರದರ್ಶಕತೆಯನ್ನು ಪ್ರಶ್ನಿಸುತ್ತಿರುವ ಈ ವೇಳೆಯಲ್ಲಿ, ಕೇಂದ್ರ ಸರ್ಕಾರ ಇನ್ನು ಎಷ್ಟು ದಿನ ಮೌನವಾಗಿರಲಿದೆ? ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯದೇ ಈ ‘ಕಾಕ್ರೋಚ್ ಪಡೆ’ ಮನೆಗೆ ಮರಳೋದಿಲ್ಲ ಅನ್ನೋದು ಮಾತ್ರ ಈಗ ವಾಸ್ತವ.



