ಬೆಂಗಳೂರಿನ ರಾಜಕಾರಣದಲ್ಲಿ ಈಗ ಹೊಸದೊಂದು ಕೌತುಕ ಶುರುವಾಗಿದೆ. ಡಿಕೆ ಶಿವಕುಮಾರ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಂಪುಟ ರಚನೆಯೂ ಆಗಿದ್ದು, ಸಚಿವರಾಗಿ 19 ಮಂದಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಕೈತಪ್ಪಿ ಹೋದ ಆ ಒಂದೇ ಒಂದು ಮಂತ್ರಿ ಸ್ಥಾನಕ್ಕಾಗಿ ಈಗ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಮಟ್ಟದ ಲಾಬಿ ಹಾಗೂ ತೀವ್ರ ಪೈಪೋಟಿ ಜೋರಾಗಿದೆ.
ಹೈಕಮಾಂಡ್ ಸಿದ್ಧಪಡಿಸಿದ್ದ ಅಂತಿಮ ಪಟ್ಟಿಯಲ್ಲಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಅವರ ಹೆಸರೂ ಇತ್ತು. ಆದರೆ, ಕೊನೇ ಕ್ಷಣದಲ್ಲಿ ಅವರ ಪ್ರಮಾಣ ವಚನಕ್ಕೆ ಬ್ರೇಕ್ ಬಿತ್ತು. ಇದರಿಂದ ಸಹಜವಾಗಿಯೇ ನಿರಾಶರಾಗಿರುವ ಗಾಯತ್ರಿ ಶಾಂತೇಗೌಡ, ಈಗ ಅವಕಾಶ ಕೈತಪ್ಪದಂತೆ ತಡೆಯಲು ನೇರವಾಗಿ ವಿಧಾನಸೌಧದ ಸಿಎಂ ಕೊಠಡಿಗೆ ದೌಡಾಯಿಸಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಗಂಭೀರ ಚರ್ಚೆ ನಡೆಸಿದ್ದಾರೆ.
ಖಾಲಿ ಉಳಿದಿರುವ ಆ ಏಕೈಕ ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ನ ಪ್ರಭಾವಿ ಮಹಿಳಾ ನಾಯಕಿಯರ ನಡುವೆ ಈಗ ತೀವ್ತ ಪೈಪೋಟಿ ಏರ್ಪಟ್ಟಿದೆ. ಗಾಯತ್ರಿ ಶಾಂತೇಗೌಡ ಮಾತ್ರವಲ್ಲದೆ, ರೇಸ್ನಲ್ಲಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಎಂಎಲ್ಸಿ ಉಮಾಶ್ರೀ, ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಕೂಡ ಸಖತ್ ಇದ್ದಾರೆ.
ಈ ಬಗ್ಗೆ ಬಹಿರಂಗವಾಗಿ ಧ್ವನಿ ಎತ್ತಿರುವ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಚಿಕ್ಕಮಗಳೂರು ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ನಾವು ಮಹಿಳಾ ಮೀಸಲಾತಿ ಪರ ಸತತವಾಗಿ ಧ್ವನಿ ಎತ್ತುತ್ತ ಬಂದಿದ್ದೇವೆ. ಹೀಗಾಗಿ ಪಕ್ಷದ ಸಂಪುಟದಲ್ಲಿ ನಮಗೆ ಸೂಕ್ತ ಅವಕಾಶ ಸಿಗಬೇಕು, ಜವಾಬ್ದಾರಿ ಸಿಕ್ಕರೆ ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನೇರವಾಗಿಯೇ ತಮ್ಮ ಇಂಗಿತವನ್ನು ಹೊರಹಾಕಿದ್ದಾರೆ.
ಇನ್ನು ಅನುಭವಿ ನಾಯಕಿ, ಎಂಎಲ್ಸಿ ಉಮಾಶ್ರೀ ಕೂಡ ರೇಸ್ನಿಂದ ಹಿಂದೆ ಸರಿದಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದು ನಿಸ್ಸಂಶಯ. ನನಗೆ ಸಂಪುಟದಲ್ಲಿ ಸ್ಥಾನ ಸಿಗುವ ಗಟ್ಟಿ ಭರವಸೆಯಿದೆ, ಪಕ್ಷದ ಹೈಕಮಾಂಡ್ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಪಕ್ಷಕ್ಕಾಗಿ ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ, ಹಾಗಾಗಿ ನಮ್ಮ ಸೇವೆ ಪರಿಗಣನೆಗೆ ಬರುತ್ತದೆ ಎಂಬ ವಿಶ್ವಾಸವಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪೈಪೋಟಿಯ ಕಾವು ಸಂಡೂರು ಶಾಸಕಿ ಅನ್ನಪೂರ್ಣಾ ತುಕಾರಾಂ ಅವರು ತಮ್ಮ ಪತಿ ಸಮೇತ ನೇರವಾಗಿ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದರಿಂದ ಇನ್ನೂ ಹೆಚ್ಚಾಗಿದೆ. ಹಿರಿಯರ ಜೊತೆಗಿನ ಈ ಸರಣಿ ಭೇಟಿಗಳು ಮತ್ತು ರೇಸ್ನಲ್ಲಿರುವ ನಾಯಕಿಯರ ಚುರುಕಿನ ನಡೆಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಹೈಕಮಾಂಡ್ ಅಂತಿಮವಾಗಿ ಯಾರಿಗೆ ಮಣೆ ಹಾಕಲಿದೆ ಎಂಬುದು ಈಗ ಎಲ್ಲರ ಪ್ರಶ್ನೆ.



