2028ರ ನಂತರವೂ ಎಂಟು-ಹತ್ತು ವರ್ಷ ಡಿಕೆಶಿಯೇ ಸಿಎಂ! ನೊಣವಿನಕೆರೆ ಶ್ರೀಗಳಿಂದ ಸ್ಫೋಟಕ ಭವಿಷ್ಯ
ಗದಗ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 2028ರಿಂದ ಮುಂದಿನ ಎಂಟರಿಂದ ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ನೊಣವಿನಕೆರೆ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಂದಿರದಲ್ಲಿ ಡಿಕೆಶಿ ಪೂಜೆ ಸಲ್ಲಿಸಿದ ಬಳಿಕ, ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀಗಳು ಈ ಹೇಳಿಕೆ ನೀಡಿದ್ದಾರೆ.
ಡಿಕೆಶಿ ಅವರ ಆರೋಗ್ಯ, ಆಯುಷ್ಯ ಹಾಗೂ ಮುಂದಿನ ಅಭಿವೃದ್ಧಿಗಾಗಿ ಅಷ್ಟೋತ್ತರ ಪೂಜೆ ಹಾಗೂ ಆರೋಗ್ಯ ಭಾಗ್ಯದ ಸಂಕಲ್ಪ ಮಾಡಲಾಗಿದ್ದು, “ರಾಜಾ ಪ್ರತ್ಯಕ್ಷ ದೇವತಾ” ಎಂಬ ನಂಬಿಕೆಯಡಿ ಮುಂದಿನ 2028ರ ಆಳ್ವಿಕೆಯಲ್ಲೂ ಡಿಕೆಶಿ ಮುಂದುವರೆಯುವಂತೆ ಪೂಜೆ ಸಲ್ಲಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಪ್ರಸ್ತುತ ಪ್ರಕೃತಿ ಧರ್ಮದಲ್ಲಿ ಮಳೆ-ಬೆಳೆ ಬರುವುದು ನಿಧಾನವಾಗಿದ್ದರೂ, ಸಕಾಲದಲ್ಲಿ ಮಳೆಯಾಗುವುದಾಗಿ ಶ್ರೀಗಳು ಹೇಳಿದರು. ಡಿಕೆಶಿ ಅವರಿಗೆ ಹಲವು ಅಡೆತಡೆಗಳಿದ್ದರೂ, ಉತ್ತಮ ಆಳ್ವಿಕೆ ನಡೆಸುವಾಗ ಜನರ ನ್ಯೂನ್ಯತೆಗಳು ಸಹಜ ಎಂದು ಅಭಿಪ್ರಾಯಪಟ್ಟ ಅವರು, “ರಾಜಾ ಪ್ರತ್ಯಕ್ಷ ದೇವತಾ” ಎಂಬ ತತ್ವದಂತೆ ಡಿಕೆಶಿ ಎಂದಿಗೂ ಜಯಶೀಲರಾಗುತ್ತಾರೆ ಎಂದು ಹೇಳಿದರು.
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಗುರುಗಳ ಮಾತನ್ನು ಉಲ್ಲೇಖಿಸಿದ ಶ್ರೀಗಳು, ಆ ಧರ್ಮದಂಡವನ್ನು ಡಿಕೆಶಿ ಅವರಿಗೆ ನೀಡಿ ಆಶೀರ್ವದಿಸಲಾಗಿದೆ ಎಂದರು. ಎಂಥಹ ಸಮಸ್ಯೆ ಎದುರಾದರೂ ತಾವು ಡಿಕೆಶಿ ಅವರ ಬೆನ್ನಿಗೆ ರಕ್ಷಾಕವಚವಾಗಿ ನಿಲ್ಲುವುದಾಗಿ ಹಾಗೂ 2028ರ ನಂತರವೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ನೊಣವಿನಕೆರೆ ಶ್ರೀಗಳು ಭವಿಷ್ಯ ನುಡಿದಿದ್ದಾರೆ.



