MLA ಆಗುವ ಆಸೆಗಾಗಿ ಕೆಪಿಎಸ್ಸಿ ಪ್ರಶ್ನೆಪತ್ರಿಕೆ ಡೀಲ್! ಬಸವರಾಜ್ ಕನ್ನಾಳೆ-ಗ್ಯಾನೇಂದ್ರ ಕುಮಾರ್ ಸ್ನೇಹದ ಒಳಗುಟ್ಟು ಬಯಲು
ಕೆಪಿಎಸ್ಸಿ ಪ್ರಶ್ನೆಪತ್ರಿಕೆ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಸಿಐಡಿ ತನಿಖೆಯ ಬಲೆಗೆ ಸಿಲುಕಿದ್ದಾರೆ. ಹಗರಣದ ಸೂತ್ರಧಾರಿ ಎನ್ನಲಾದ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನೂ ಸಿಐಡಿ ಬಂಧಿಸಿದ್ದು, ತನಿಖೆ ವೇಳೆ ಇಬ್ಬರ ನಡುವಿನ ಆಪ್ತ ಸ್ನೇಹ ಸಂಬಂಧ ಬಯಲಾಗಿದೆ.
ಈ ಹಿಂದೆ ಗ್ಯಾನೇಂದ್ರ ಕುಮಾರ್ ಬೀದರ್ನ ಬಾಲ್ಕಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬಸವರಾಜ್ ಕನ್ನಾಳೆ ಅವರ ಪರಿಚಯವಾಗಿತ್ತು. ಈ ಪರಿಚಯ ಕ್ರಮೇಣ ಗಾಢ ಸ್ನೇಹವಾಗಿ ಬೆಳೆದಿತ್ತು ಎಂದು ಮೂಲಗಳು ತಿಳಿಸಿವೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಬಸವರಾಜ್, ಮುಂದೊಂದು ದಿನ ತಾನು ಶಾಸಕನಾಗುವುದಾಗಿ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಇದನ್ನು ನಂಬಿದ್ದ ಗ್ಯಾನೇಂದ್ರ ಕುಮಾರ್ ಅವರ ಮಾತಿಗೆ ಮನ್ನಣೆ ನೀಡುತ್ತಾ ಬಂದಿದ್ದರು ಎಂಬ ಆರೋಪವಿದೆ.
ಬಳಿಕ ಗ್ಯಾನೇಂದ್ರ ಕುಮಾರ್ ಅವರು ಕೆಪಿಎಸ್ಸಿಗೆ ವರ್ಗಾವಣೆಗೊಂಡಿದ್ದು, ಈ ವರ್ಗಾವಣೆಯ ನಂತರವೇ ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟು ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬಸವರಾಜ್ ಕನ್ನಾಳೆ ಅವರನ್ನು ನಂಬಿ ಗ್ಯಾನೇಂದ್ರ ಕುಮಾರ್ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದಾರೆ ಎಂಬುದು ಪ್ರಮುಖ ಆರೋಪವಾಗಿದೆ.
ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಬಸವರಾಜ್ ಕನ್ನಾಳೆ ವಿವಿಧ ಅಭ್ಯರ್ಥಿಗಳಿಗೆ 40 ಲಕ್ಷ, 60 ಲಕ್ಷ ಹಾಗೂ 80 ಲಕ್ಷ ರೂಪಾಯಿಗಳವರೆಗೆ ಮಾರಾಟ ಮಾಡಿರುವ ಮಾಹಿತಿ ಸಿಐಡಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಈ ಡೀಲ್ ಮೂಲಕ ಯಾರ್ಯಾರು ಪ್ರಶ್ನೆಪತ್ರಿಕೆ ಪಡೆದಿದ್ದಾರೆ, ಪ್ರಶ್ನೆಪತ್ರಿಕೆ ಪಡೆದು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉದ್ಯೋಗ ಪಡೆದವರು ಯಾರು ಎಂಬ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.



