ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ನೈಜೀರಿಯಾ ದೇಶದ ವಿದ್ಯಾರ್ಥಿನಿಯನ್ನು ಉಡುಪಿ ನ್ಯಾಯಾಲಯದ ಆದೇಶದಂತೆ ಗಡಿಪಾರು ಮಾಡಲಾಗಿದೆ.
ನೈಜಿರಿಯಾದ ಉಯು ಎನ್ಸಾ ಜೆರಿ ಎಂಬಾಕೆ 2011ರಿಂದ ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಬಿಎ , ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ವೀಸಾ ಅವಧಿಯು 2012 ರ ಜೂ 14ಕ್ಕೆ ಮುಕ್ತಾಯವಾಗಿತ್ತು. ಆನಂತರ ಆಕೆ ತನ್ನ ವೀಸಾವನ್ನು ನೋಂದಣಾಧಿಕಾರಿ ಕಚೇರಿಯಲ್ಲಿ 2015 ಡಿ 27 ರವರೆಗೆ ವಿಸ್ತರಣೆ ಮಾಡಿಸಿಕೊಂಡಿದ್ದಳು. ಬಳಿಕ ವಾಸ ವಿಸ್ತರಣೆ ಕುರಿತು ಅರ್ಜಿ ಸಲ್ಲಿಸದೆ ಭಾರತದಲ್ಲಿ ಅನಧಿಕೃತ ವಾಸವಾಗಿದ್ದಳು.

ಈ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿ 2018ರ ಏ.30ರಂದು ಆಕೆಯನ್ನು ಬಂಧಿಸಿ , ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ ಈಕೆಗೆ ಏಪ್ರಿಲ್ 30 ರಿಂದ ಮೇ 11ರವರೆಗೆ ಸಾದಾ ಶಿಕ್ಷೆ ಹಾಗೂ 10ಸಾವಿರ ರೂ ದಂಡ ವಿಧಿಸಿ ಭಾರತದಿಂದ ಗಡಿಪಾರು ಮಾಡುವಂತೆ ಆದೇಶಿಸಿತ್ತು.
ಈ ಪ್ರಕರಣದ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ನಿರ್ದೇಶನದಂತೆ ಮಣಿಪಾಲ ಪೊಲೀಸ್ ನಿರೀಕ್ಷಕರು ತನಿಖೆ ನಡೆಸಿ ಉಯು ಎನ್ಸಾ ಜೆರಿ ಡೇವಿಸ್ ಳನ್ನು ಮೇ 18 ರಂದು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದರು.ಮೇ 19ರಂದು ಭಾರತದಿಂದ ನೈಜೀರಿಯಾಕ್ಕೆ ಗಡಿಪಾರು ಮಾಡಲಾಗಿದೆ.






