BBMP ಉಪಮೇಯರ್ ರಮಿಳಾ ಉಮಾಶಂಕರ್ ನಿಧನ

admin
2 Min Read

ಏಳು ದಿನಗಳ ಹಿಂದಷ್ಟೇ (ಸೆ.28ರಂದು) ಬೆಂಗಳೂರಿನ ಉಪಮೇಯರ್​ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ರಮಿಳಾ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಗುರುವಾರ ರಾತ್ರಿ 12.50ರಲ್ಲಿ ರಮಿಳಾ ಅವರಿಗೆ ತೀವ್ರ ಎದೆನೋವು ಕಾಣಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ನಗರದ ಪಶ್ಚಿಮ ಕಾರ್ಡ್​ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ.
2015ರಲ್ಲಿ ನಡೆದಿದ್ದ ಬಿಬಿಎಂಪಿ ಚುನಾವಣೆಯಲ್ಲಿ ಕಾವೇರಿಪುರಂ ವಾರ್ಡ್​ನಿಂದ (103) ಜೆಡಿಎಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಮಿಳಾ ಅವರು ಜಯ ಸಾಧಿಸಿದ್ದರು. ವಾರದ ಹಿಂದಷ್ಟೇ ಬಿಬಿಎಂಪಿಯ ಉಪ ಮೇಯರ್​ ಆಗಿ ಅವರು ಆಯ್ಕೆಯಾಗಿದ್ದರು.
ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ ನಮ್ಮ ಮೆಟ್ರೋಗೆ ಭೇಟಿ ನೀಡಿದಾಗ, ಉಪ ಮುಖ್ಯಮಂತ್ರಿ ಪರಮೇಶ್ವರ್​ ಅವರು ಬೆಳ್ಳಂಬೆಳಗ್ಗೆ ನಗರದ ಮಾರುಕಟ್ಟೆಗಳ ಪರಿಶೀಲನೆಯಲ್ಲಿ ತೊಡಗಿದ್ದಾಗ ರಮಿಳಾ ಅವರೂ ಭಾಗವಹಿಸಿದ್ದರು. ಹೀಗೆ ದಿನವಿಡೀ ಲವಲವಿಕೆಯಿಂದಲೇ ಇದ್ದ ರಮಿಳಾ ಅವರು ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ರಮಿಳಾ ಅವರ ನಿಧನದಿಂದ ಕುಟುಂಬ ದುಃಖತಪ್ತವಾಗಿದೆ.
ರಮಿಳಾ ಅವರು ಗುರುವಾರ ಇಡೀ ದಿನ ಮೇಯರ್ ಗಂಗಾಂಬಿಕೆ ಜೊತೆ ಸಾಥ್ ನೀಡಿದ್ದರು. ಬೆಳಗ್ಗೆ 6.30ರಂದು ಡಿಸಿಎಂ ಪರಮೇಶ್ವರ್ ಮತ್ತು ಮೇಯರ್ ಜೊತೆ ಕೆ.ಆರ್. ಮಾರುಕಟ್ಟೆ ವೀಕ್ಷಣೆ ಮಾಡಿದ್ದರು. ನಂತರ ಮೇಯರ್ ಜೊತೆ ಉಪಾಹಾರ ಸೇವಿಸಿ, ಮೆಟ್ರೋ ರೈಲಿನಲ್ಲಿ ಜಯನಗರದಿಂದ ಮೆಜೆಸ್ಟಿಕ್​ಗೆ ತೆರಳಿ, ಆರು ಮೆಟ್ರೋ ಬೋಗಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆನಂತರ ಮೆಜೆಸ್ಟಿಕ್​ನಿಂದ ನಾಗಸಂದ್ರವರೆಗೂ ಸಿಎಂ ಹಾಗೂ ಡಿಸಿಎಂ, ಮೇಯರ್ ಜೊತೆ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಿದ್ದರು.
ನಾಗಸಂದ್ರದಿಂದ ಮೇಯರ್ ಹಾಗೂ ಶಾಸಕ ದಿನೇಶ್ ಗುಂಡೂರಾವ್, ಮಹಾಪೌರರು, ಜೊತೆ ಇತ್ತೀಚೆಗೆ ಮಳೆಯಿಂದ ಆದ ಅನಾಹುತದಲ್ಲಿ ತಲೆಗೆ ಪೆಟ್ಟಾಗಿದ್ದ ಮಹಿಳೆಗೆ ಮಂತ್ರಿ ಮಾಲ್ ಬಳಿ ಇರುವ ಶಾಸಕರ ಕಚೇರಿಯಲ್ಲಿ 2 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ, ನಗರದಲ್ಲಿ ಮಳೆಯಿಂದ ಉಂಟಾದ ಅನಾಹುತಗಳ ಸ್ಥಳಕ್ಕೆ ಮೇಯರ್ ಜೊತೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ನಂತರ ಮೇಯರ್ ಜೊತೆ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿದ್ದರು. ಹೀಗೆ ಗುರುವಾರ ದಿನವಿಡೀ ಚಟುವಟಿಕೆಯಿಂದ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದರು.
ಶುಕ್ರವಾರ ಬೆಳಗ್ಗೆಕೂಡ ಅವರು 8.45ಕ್ಕೆ ಮೇಯರ್ ಜೊತೆ ಬಿಬಿಎಂಪಿಯ ನರಸಿಂಹರಾಜ ಕಾಲೋನಿಯ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ಸ್ಥಾಪಿಸಿರುವ ಬಂಜೆತನ ನಿವಾರಣಾ ಕೇಂದ್ರ ಮತ್ತು ಫಿಸಿಯೋಥೆರಸಿ ಆಸ್ಪತ್ರೆ ಘಟಕ ಉದ್ಘಾಟನೆಯಲ್ಲಿ ಭಾಗಿಯಾಗಬೇಕಿತ್ತು. ಆದರೆ, ತಡರಾತ್ರಿ ಅವರಿಗೆ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದರು.

Share This Article
Leave a Comment