ವಿಜಯ್ ಜಾಧವ್ . ಸಾಮಾಜಿಕ ಕಾರ್ಯಕರ್ತ, ಮುಖ್ಯವಾಗಿ ಮನೆ ಬಿಟ್ಟು ಮಕ್ಕಳ ರಕ್ಷಕ. ಮನೆ ತೊರೆದು ಬೀದಿಬದಿಯಲ್ಲೇ, ರೈಲ್ವೆ ಸ್ಟೇಷನ್ ನಲ್ಲೋ ಅಥವಾ ಭೀಕ್ಷಾಟನೆಯಲ್ಲೊ ತೊಡಗುವ ಮಕ್ಕಳನ್ನು ಹುಡುಕಿ ತಮ್ಮ ‘ಸಮತೋಲ್ ’ನಲ್ಲಿ ನೆಲೆವಿರಿಸಿ ಆ ಮಕ್ಕಳಿಗೆ ಹೊಸ ಬದುಕು ಕಟ್ಟಿಕೊಡುತ್ತಿದ್ದಾರೆ.
ನೋಡಿ, ನಮ್ಮ ದೇಶದಲ್ಲಿ ಮಕ್ಕಳು ಅದರಲ್ಲೂ 7ರಿಂದ 14 ವರ್ಷದ ಪುಟಾಣಿಗಳು ಸಣ್ಣಪುಟ್ಟ ಕಾರಣಕ್ಕೆ ಮನೆ ತೊರೆದು ಜೀವನದ ದಿಕ್ಕು ತಪ್ಪುತ್ತಾರೆ. ತಂದೆ-ತಾಯಿ ಬೈದಿದ್ದಕ್ಕೋ, ಬಡತನದ ಬೇಗೆಗೋ ಇಲ್ಲವೆ ಸ್ನೇಹಿತರ ಸಂಗದಿಂದಲೋ ಮನೆ ತೊರೆಯುವ ಮಕ್ಕಳನ್ನು ಹುಡುಕಿ ಮತ್ತೆ ಮನೆಗೆ ಸೇರಿಸುವ ಕೆಲಸವನ್ನು ವಿಜಯ್ ಜಾಧವ್ ಮಾಡುತ್ತಿದ್ದಾರೆ.
ವಿಜಯ್ ಜಾಧವ್ ಅವರು 2004ರಲ್ಲಿ ಈ ಮಕ್ಕಳ ರಕ್ಷಣೆಗೆ ಮುಂದಾದರು. ಈ ಕೆಲಸಕ್ಕೆ ದೊಡ್ಡ ಸ್ವರೂಪ ನೀಡಬೇಕೆಂಬ ಕನಸು ‘ಸಮತೋಲ್’ ಎಂಬ ಸಂಸ್ಥೆಯನ್ನು ಕಟ್ಟುವ ಮೂಲಕ 2006ರಲ್ಲಿ ನನಸಾಗಿಸಿಕೊಂಡರು.
‘ಸಮತೋಲ್’ ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡಿದ್ದು ಮುಂಬೈ ಹಾಗೂ ಸುತ್ತಮುತ್ತಲ್ಲಿರುವ ವಿವಿಧ ರೈಲು ನಿಲ್ದಾಣಗಳನ್ನು. ಮುಂಬೈ ರೈಲು ನಿಲ್ದಾಣವೊಂದಕ್ಕೇ ಪ್ರತಿನಿತ್ಯ 150ರಿಂದ 200ಮಕ್ಕಳು ಮನೆ ತೊರೆದು ಬರುತ್ತಾರೆ. ಇವರಿಗೆ ಮುಂದೇನು ಎಂಬುದು ಗೊತ್ತಿರುವುದಿಲ್ಲ.
ವಿಜಯ್ ನೇತೃತ್ವದ ‘ಸಮತೋಲ್’ ತಂಡ ಈವರೆಗೆ ಇಂಥ 12 ಸಾವಿರಕ್ಕೂ ಅಧಿಕ ಮಕ್ಕಳನ್ನು ಮನವೊಲಿಸಿ ಅವರ ಮನೆಗೆ ತಲುಪಿಸಿದೆ. ಕೌನ್ಸೆಲಿಂಗ್ ಮಾಡುವ ಮೂಲಕ ಬದುಕಿನ ಮುಂದಿನ ದಾರಿಯನ್ನೂ ತಿಳಿಸಿಕೊಟ್ಟಿದೆ. ಮಕ್ಕಳನ್ನು ನೋಡಿಕೊಳ್ಳುವ ಪರಿಯ ಬಗ್ಗೆ ಪಾಲಕರಿಗೂ ತಿಳಿವಳಿಕೆ ನೀಡಿದೆ.
ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಸಂಸ್ಥೆಯ ಇಬ್ಬರು ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಒಬ್ಬರು ರೈಲ್ವೆ ಪೊಲೀಸರ ನೆರವು ಪಡೆದುಕೊಂಡರೆ, ಇನ್ನೊಬ್ಬರು ಮಗುವಿನೊಂದಿಗೆ ಸ್ನೇಹ ಸಂಪಾದಿಸಿ ಸಮಸ್ಯೆ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಈಗಲೂ ಪ್ರತಿನಿತ್ಯ 150ರಿಂದ 200 ಮಕ್ಕಳು ಇವರ ಸಂಪರ್ಕಕ್ಕೆ ಬರುತ್ತಾರೆ.
ಮನೆಗೆ ತೆರಳಲು ತೀವ್ರ ಅಡ್ಡಿಗಳಿರುವ ಮಕ್ಕಳಿಗೆ ‘ಸಮತೋಲ್’ ಶಾಶ್ವತವಾಗಿ ಆಶ್ರಯ ನೀಡಿದೆ. ಇಂಥ 400ಕ್ಕೂ ಅಧಿಕ ಮಕ್ಕಳು ಉತ್ತಮ ಭವಿಷ್ಯವನ್ನು ಅರಸುತ್ತ ಶಿಕ್ಷಣ ಪಡೆಯುತ್ತಿದ್ದಾರೆ. ನೂರಾರು ಮಕ್ಕಳು ದುಶ್ಚಟ ಗಳಿಂದ ಮುಕ್ತರಾಗಿದ್ದಾರೆ.
‘ಸಮತೋಲ್’ ಮೂಲಕ ಯಾವುದೋ ಕಾರಣಕ್ಕೂ ಮನೆಬಿಟ್ಟ ಮಕ್ಕಳಿಗೆ ಆಶ್ವಯ ನೀಡಿ ಹೊಸ ಬದುಕು ಕಟ್ಟಿಕೊಡುತ್ತಿರುವ ವಿಜಯ್ ಯಾದವ್ ಅವರ ಕಾರ್ಯ ಇತರರಿಗೂ ಸ್ಫೂರ್ತಿದಾಯಕ.