No menu items!
9.3 C
Munich
Wednesday, April 29, 2026

ವಿಜಯ್ ಹೆಸರಲ್ಲಿ ಚಂದ್ರಚೂಡ್ ಮಹತ್ಕಾರ್ಯ

Must read

‘ರಾಷ್ಟ್ರ ಪ್ರಶಸ್ತಿ’ ವಿಜೇತ ನಟ ‘ಸಂಚಾರಿ’ ವಿಜಯ್‌ ಅಗಲಿ ಮೂರು ದಿನಗಳಾಗಿವೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ ಈ ಪ್ರತಿಭಾನ್ವಿತ ನಟನ ಅಗಲಿಕೆ ಎಲ್ಲರಿಗೂ ನೋವನ್ನುಂಟು ಮಾಡಿದೆ. ಅಪಾರ ಸಂಖ್ಯೆಯ ಆತ್ಮೀಯರು, ಸ್ನೇಹಿತರು, ಅಭಿಮಾನಿಗಳು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಸಾವಲ್ಲೂ ವಿಜಯ್‌ ಸಾರ್ಥಕತೆ ಮೆರೆದಿದ್ದರು. ಅವರ ಅಂಗಾಂಗಗಳನ್ನು ದಾನ ಮಾಡಿ, ಆರು ಜೀವಗಳಿಗೆ ಹೊಸ ಬದುಕು ನೀಡಲಾಗಿತ್ತು. ಇದೀಗ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರು ಒಂದು ಮಹತ್ಕಾರ್ಯ ಮಾಡುತ್ತಿದ್ದಾರೆ.


‘ವಿಜಯ್‌ಗೆ ಗಿಳಿ ಅಂದರೆ ತುಂಬ ಇಷ್ಟ. ಇಂದಿರಾ ಪ್ರಿಯದರ್ಶಿನಿ ಪಾರ್ಕ್‌ನಲ್ಲಿ ಅದನ್ನು ದತ್ತು ಪಡೆದುಕೊಂಡಿದ್ದೇನೆ. ಅದರ ಜೊತೆಗೆ ಇನ್ನೂ ಹಲವು ಗಿಳಿಗಳನ್ನು ದತ್ತು ಪಡೆಯುವ ಆಲೋಚನೆ ಇದೆ. ಒಟ್ಟು 100 ಗಿಣಿಗಳನ್ನು ಸಂಚಾರಿ ವಿಜಯ್ ಹೆಸರಿನಲ್ಲಿ ದತ್ತು ಪಡೆಯಲು ಯೋಜನೆ ರೂಪಿಸಿದ್ದೇನೆ. ಬೇರೆ ಬೇರೆ ಮೃಗಾಲಯಗಳಲ್ಲಿ ಎಷ್ಟು ಗಿಳಿಗಳಿವೆ ಎಂದು ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ವಿಜಯ್‌ ಹಲವು ಗಿಣಿಗಳ ಚಿತ್ರಗಳನ್ನು ನನಗೆ ಬರೆದುಕೊಟ್ಟಿದ್ದರು. ಪಕ್ಷಿಗಳಲ್ಲೇ ಗಿಳಿ ಅಂದರೆ ಅದೇನೋ ವಿಶೇಷ ಪ್ರೀತಿ ಅವನಿಗಿತ್ತು’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ವಿಜಯ್‌.
‘ನನ್ನ ಮತ್ತು ವಿಜಯ್ ನಡುವೆ 10 ವರ್ಷಗಳ ಒಡನಾಟ ಇತ್ತು. ಆರಂಭದಲ್ಲಿ ಅವನಿಗೆ ಹಾಡುವ ಆಸೆ ಇತ್ತು. ನಂತರ ನಟನಾಗಬೇಕು ಎಂದು ನಿರ್ಧಾರ ಮಾಡಿದ. ಸಂಚಾರಿ ತಂಡಕ್ಕೆ ಸೇರಿಕೊಂಡ ದಿನದಿಂದಲೂ ವಿಜಯ್ ಜೊತೆಗೆ ನನಗೆ ಒಡನಾಟ ಇದೆ. ಕೊರೊನಾ ಮೊದಲ ಅಲೆ ಬಂದಾಗ 72 ದಿನ ನನ್ನ ಮನೆಯಲ್ಲೇ ಇದ್ದು, ಒಟ್ಟಿಗೆ ಸಾವಿರಾರು ಫುಡ್ ಕಿಟ್ ಹಂಚಿದ್ದೆವು. ಅವನ ಎಟಿಎಂ ಪಾಸ್‌ವರ್ಡ್ ನನ್ನ ಬಳಿ ಇತ್ತು. ನನ್ನ ಎಟಿಎಂ ಪಾಸ್‌ವರ್ಡ್‌ ಅವನ ಬಳಿ ಇತ್ತು. ಬಟ್ಟೆ, ವಾಚ್ ಎಲ್ಲವನ್ನೂ ಶೇರ್ ಮಾಡಿಕೊಳ್ಳುತ್ತಿದ್ದೆವು. ಅಷ್ಟೊಂದು ಆತ್ಮೀಯತೆ ನಮ್ಮಿಬ್ಬರಲ್ಲಿ ಇತ್ತು. ನನ್ನ ಮನೆ ಆತನಿಗೆ 2ನೇ ಮನೆ ಆಗಿತ್ತು’ ಎಂದು ಹೇಳುತ್ತಾರೆ ಚಂದ್ರಚೂಡ್
‘ನನ್ನ ಜೊತೆ ವಿಜಯ್ ‘ಮೇಲೊಬ್ಬ ಮಾಯಾವಿ’ ಸಿನಿಮಾ ಮಾಡಿದ್ದ. ಅದರಲ್ಲಿ ಅವನನ್ನು ಗುಂಡಿಗೆ ಇಳಿಸುವ ದೃಶ್ಯವೊಂದಿದೆ. ಅದನ್ನು ಅಂದು ಖುಷಿ ಖುಷಿಯಿಂದಲೇ ಶೂಟಿಂಗ್ ಮಾಡಿದ್ದೆವು. ಆದರೆ, ಈಗ ನಾನೇ ಅವನನ್ನು ಗುಂಡಿಗೆ ಇಳಿಸುವಂತೆ ಆಯಿತು. ನನಗಿಂತ ಚಿಕ್ಕವನು ಅವನು. ಸಮಾಜಮುಖಿ ಕೆಲಸಗಳಿಗೆ ನಾನೇ ಅವನನ್ನು ಕರೆತಂದಿದ್ದು. ನನ್ನ ಪುಸ್ತಕ ಬಿಡುಗಡೆ ಇದ್ದರೆ, ಆತ ಉತ್ಸಾಹದಿಂದ ಒಡಾಡುತ್ತಿದ್ದ. ಸಮಾಜದಲ್ಲಿ ಆತನ ಹೆಸರು ಶಾಶ್ವತವಾಗಿರಬೇಕು’ ಎಂದು ಚಂದ್ರಚೂಡ್ ಹೇಳಿಕೊಳ್ಳುತ್ತಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article