ನಗರದ ರಾಜೀವ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಹೇಮಂತ್ ಗೌಡ (20) ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಿ.ಇ ಮೂರನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ಅರಸೀಕೆರೆ ತಾಲ್ಲೂಕಿನ ಹಿರಿಯಾಳು ಗ್ರಾಮದ ಹೇಮಂತ್ ಗೌಡ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿರುವ ಹೇಮಂತ್, ಅದರಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾನೆ. ‘ನನ್ನಪ್ಪ ಶಿಕ್ಷಕ. ಅವರ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಿದ್ದಾರೆ. ಏಕೆಂದರೆ ಹಿಂದಿನ ಶಿಕ್ಷಣ ವ್ಯವಸ್ಥೆ ಹಾಗಿತ್ತು. ಆದರೆ, ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಸಾಧ್ಯವೇ ಇಲ್ಲ. ಎಂಜಿನಿಯರಿಂಗ್ ವಿದ್ಯಾರ್ಥಿ ಸೈಬರ್ ಸೆಂಟರ್ನಲ್ಲಿ ಕೆಲಸ ಮಾಡಬಹುದು ಅಷ್ಟೇ. ಶಿಕ್ಷಣ ವ್ಯವಸ್ಥೆ ಬದಲಾವಣೆ ಆಗದಿದ್ದರೆ ಸಾಧನೆ ಸಾಧ್ಯವಿಲ್ಲ’ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.
‘ನನ್ನ ಅಂಗಾಂಗ ದಾನ ಮಾಡಿ, ಅಂತ್ಯಕ್ರಿಯೆ ವೇಳೆ ಸಿ.ಎಂ, ಶಿಕ್ಷಣ ಸಚಿವ, ಆದಿಚುಂಚನಗಿರಿ ಶ್ರೀಗಳು ಇರಬೇಕು. ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆಯುವುದು ಜೀವದ ಆಸೆಯಾಗಿತ್ತು. ನನ್ನ ಸಾವಿನ ಬಳಿಕ ತಂದೆ- ತಾಯಿ, ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದು ಸಾಕಬೇಕು. ಆ ಇಬ್ಬರಲ್ಲಿ ನಾನು ಇರುತ್ತೇನೆ’ ಎಂದು 13 ನಿಮಿಷ 21 ಸೆಕೆಂಡ್ ವಿಡಿಯೋದಲ್ಲಿ ತನ್ನ ಬಾಲ್ಯ, ವಿದ್ಯಾಭ್ಯಾಸ, ಸ್ನೇಹಿತರು, ಉಪನ್ಯಾಸಕರ ಬಗ್ಗೆ ಮಾತನಾಡಿದ್ದಾನೆ.