ದುನಿಯಾ ವಿಜಿ ಬರದಿದ್ದರೆ ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಎಂದ ವಧು!

admin
1 Min Read

ಸ್ಯಾಂಡಲ್​ವುಡ್​ ನಟ ದುನಿಯಾ ವಿಜಯ್​ ಬಂದು ಅಕ್ಷತೆ ಹಾಕಿ ಆಶೀರ್ವಾದ ಮಾಡಿದರಷ್ಟೇ ನಾನು ಮದುವೆ ಆಗುವೆ. ನನ್ನ ಮದುವೆಗೆ ದುನಿಯಾ ವಿಜಯ್​ ಬಾರದಿದ್ದಲ್ಲಿ ನಾನು ಮಾಂಗಲ್ಯ ಕಟ್ಟಿಸಿಕೊಳ್ಳಲ್ಲ ಎಂದು ದಾವಣೆಗೆರೆಯ ಯುವತಿಯೊಬ್ಬಳು ಹಠ ಹಿಡಿದಿದ್ದಾಳೆ.

ದಾವಣೆಗೆರೆ ನಗರದ ರಾಮನಗರದ ಯುವತಿ ಎಸ್​.ಅನುಷಾಳ ಮದುವೆ ಪ್ರಕಾಶ್​ ಎಂಬಾತನ ಜತೆ ನಿಶ್ಚಯವಾಗಿದೆ. ಇವರ ಮದುವೆ ನ.29ರಂದು ದಾವಣೆಗೆರೆಯಲ್ಲಿ ನಡೆಯಲಿದ್ದು, ಈಗಾಗಲೇ ಬಂಧು-ಬಳಗಕ್ಕೆ ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿದೆ. ಈ ಆಹ್ವಾನ ಪತ್ರಿಕೆಯಲ್ಲಿ ವಿಶೇಷ ಆಹ್ವಾನಿತರು ಎಂದು ದುನಿಯಾ ವಿಜಯ್​ ಭಾವಚಿತ್ರದ ಜತೆಗೆ ಸಲಗ ಟೀಂ ಎಂದೂ ಮುದ್ರಿಸಲಾಗಿದೆ. ಜತೆಗೆ ಮಧುಮಗಳ ಫೋಟೋ ಕೂಡ ಇದೆ.

ನನ್ನ ಮದುವೆಗೆ ದುನಿಯಾ ವಿಜಯ್ ಬಂದು ಆಶೀರ್ವಾದ ಮಾಡಬೇಕು. ಅವರು ಬಾರದಿದ್ದಲ್ಲಿ ಮದುವೆಯನ್ನೇ ಆಗಲ್ಲ ಎಂದು ಅನುಷಾ ಪಟ್ಟು ಹಿಡಿದಿದ್ದಾಳೆ. ಇದಕ್ಕೆ ಇವಳ ಪಾಲಕರೂ ಧ್ವನಿಗೂಡಿಸಿದ್ದಾರೆ. ಅನುಷಾ ಮಾತ್ರವಲ್ಲ, ಈಕೆಯ ಕುಟುಂಬಸ್ಥರೆಲ್ಲರೂ ದುನಿಯಾ ವಿಜಯ್​ರ ಅಪ್ಪಟ ಅಭಿಮಾನಿಗಳು. 5 ವರ್ಷದ ಹಿಂದೆ ಅನುಷಾ ತಂದೆ ಶಿವಾನಂದ್ ಅವರು ಮನೆ ಕಟ್ಟಿಸಿ ಅದಕ್ಕೆ ದುನಿಯಾ ಋಣ ಎಂದು ಹೆಸರಿಟ್ಟಿದ್ದರು. ದುನಿಯಾ ವಿಜಯ್ ಅವರೇ ಬಂದು ಉದ್ಘಾಟಿಸಬೇಕು. ಅಲ್ಲಿಯವರೆಗೂ ಆ ಮನೆಯಲ್ಲಿ ವಾಸ ಮಾಡಲ್ಲ ಎಂದು ಸಂಕಲ್ಪ ಮಾಡಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ದುನಿಯಾ ವಿಜಯ್ ಅವರು ದಾವಣಗೆರೆಗೆ ಆಗಮಿಸಿ ಅಭಿಮಾನಿಯ ಗೃಹ ಪ್ರವೇಶ ಮಾಡಿದ್ದರು.

 

ಅನುಷಾ ತನ್ನ ಕೈಯ ಮೇಲೆ ಒಂಟಿ ಸಲಗ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಲಗ್ನ ಪತ್ರಿಕೆಯಲ್ಲೂ ದುನಿಯಾ ವಿಜಯ್ ಫೋಟೋ ಹಾಕಿಸಿ ಅಭಿಮಾನ ಮೆರೆದಿದ್ದಾಳೆ.

TAGGED:
Share This Article
Leave a Comment