ಮೈಸೂರಿನಲ್ಲಿ ಕೇಂದ್ರ ಇಂಟಲಿಜೆನ್ಸ್ ಬ್ಯೂರೊದ ನಿವೃತ್ತ ಅಧಿಕಾರಿ ಅಪಘಾತದ ರೀತಿಯಲ್ಲಿ ಬಿಂಬಿಸಿ ಕೊಲೆ ಮಾಡಲಾಗಿದೆ. 83 ವರ್ಷದ ಆರ್ ಎಸ್ ಕುಲಕರ್ಣಿ ಎಂಬುವರೇ ಕೊಲೆಯಾದ ನಿವೃತ್ತ ಅಧಿಕಾರಿಯಾಗಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ಕುಲಕರ್ಣಿಯವರು ವಾಕಿಂಗ್ ಮಾಡುತ್ತಿದ್ದಾಗ ಅಪಘಾತವೆಸಗಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಕುಲಕರ್ಣಿ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದೊಂದು ಅಪಘಾತವಿರಬಹುದು ಎಂಬಂತೆ ಕಂಡು ಬಂದರೂ ಸಹ ಕೊಲೆಯೂ ಆಗಿರಬಹುದೇ? ಎಂಬ ಸಂಶಯ ಪೊಲೀಸರಿಗೆ ವ್ಯಕ್ತವಾಗಿತ್ತು. ಮೇಲ್ನೋಟಕ್ಕೆ ಇದೊಂದು ಹಿಟ್ ಅಂಡ್ ರನ್ ಪ್ರಕರಣವೆಂದು ಭಾವಿಸಿದ್ದ ಪೊಲೀಸರಿಗೆ ಕೂಡ ಇದೀಗ ಶಾಕ್ ಆಗಿದೆ. ಇಂದು ಘಟನಾ ಸ್ಥಳದ ಆಸುಪಾಸಿನಲ್ಲಿ ಅಳವಡಿಸಿರುವ ಸಿ ಸಿ ಕ್ಯಾಮರಾಗಳಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬೆಚ್ಚಿ ಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಈ ರೀತಿಯ ದುಷ್ಕೃತ್ಯವೆಸಗಿದ್ದಾರೆ. ಕುಲಕರ್ಣಿಯವರು ರಸ್ತೆ ಬದಿಯಲ್ಲಿ ನಿಂತಿದ್ದರೂ ಸಹ ಅಪಘಾತವೆಸಗಿ ಪರಾರಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ಕೃತ್ಯವೆಸಗಿದ ಕಾರಿನ ಮಿರರ್ ಪತ್ತೆಯಾಗಿದೆ. ಪ್ರಕಣರದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದೇವೆ. ಎಸಿಪಿ ನೇತೃತ್ವದಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಶೀಘ್ರವೇ ಪ್ರಕರಣವನ್ನು ಭೇದಿಸಲಿದ್ದೇವೆ. ಕುಲಕರ್ಣಿಯವರು ಸೇವೆಯಿಂದ ನಿವೃತ್ತಿಯಾಗಿ 23 ವರ್ಷಗಳಾಗಿವೆ. ಇವರ ಕೊಲೆಗೆ ವೃತ್ತಿ ವೈಷಮ್ಯ ಕಾರಣವೇ ಅಥವಾ ವೈಯುಕ್ತಿಕ ದ್ವೇಷ ಕಾರಣವೇ ಎಂದು ಈಗಲೇ ಹೇಳಲಾಗದಿಲ್ಲ ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ. ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.