ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆ
ಬೆಂಗಳೂರು, ಮಾರ್ಚ್ 21:
ಬೆಂಗಳೂರು ನಗರ ನಾಗರೀಕರಿಗೆ ಯುಗಾದಿ ಉಡುಗೊರೆಯಾಗಿ, ನೀರಿನ ಬಿಲ್ ಬಾಕಿ ಸಮಸ್ಯೆ ಪರಿಹಾರಕ್ಕಾಗಿ ಒನ್ ಟೈಮ್ ಸೆಟಲ್ಮೆಂಟ್ (OTS) ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ D. K. Shivakumar ತಿಳಿಸಿದ್ದಾರೆ.
ಮಾಧ್ಯಮ ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, 2026ರ ಏಪ್ರಿಲ್ನಿಂದ ಜೂನ್ವರೆಗೆ ಮೂರು ತಿಂಗಳ ಅವಧಿಗೆ ಈ ಯೋಜನೆ ಜಾರಿಯಲ್ಲಿರಲಿದೆ ಎಂದರು. ಈ ಅವಧಿಯಲ್ಲಿ ಗ್ರಾಹಕರು ತಮ್ಮ ಬಾಕಿ ಇರುವ ಅಸಲು ಮೊತ್ತವನ್ನು ಪಾವತಿಸಿದರೆ, ಅದರ ಮೇಲಿನ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಯಲ್ಲಿ ಸುಮಾರು 11 ಲಕ್ಷ ನೀರಿನ ಸಂಪರ್ಕಗಳಿದ್ದು, ಅದರಲ್ಲಿ 5.11 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. 2026ರ ಫೆಬ್ರವರಿ ಅಂತ್ಯದ ವೇಳೆಗೆ ಒಟ್ಟು ಬಾಕಿ ಮೊತ್ತ ₹851.33 ಕೋಟಿಯಾಗಿದ್ದು, ಇದರಲ್ಲಿ ₹539.43 ಕೋಟಿ ಅಸಲು ಮತ್ತು ₹311.90 ಕೋಟಿ ಬಡ್ಡಿ ಸೇರಿದೆ.
ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಹಾಗೂ ಬಾಕಿ ವಸೂಲಿ ಸುಗಮಗೊಳಿಸಲು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಯೋಜನೆ ಗೃಹ, ವಾಣಿಜ್ಯ ಮತ್ತು ಕೈಗಾರಿಕಾ ಸೇರಿದಂತೆ ಎಲ್ಲ ವರ್ಗದ ಗ್ರಾಹಕರಿಗೂ ಅನ್ವಯವಾಗುತ್ತದೆ. ಸರ್ಕಾರಿ ಇಲಾಖೆಗಳಿಗೂ ಲೆಕ್ಕಪತ್ರ ಸಮನ್ವಯದ ಮೂಲಕ ಸೌಲಭ್ಯ ಒದಗಿಸಲಾಗುತ್ತದೆ.
ಗ್ರಾಹಕರಿಗೆ ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಬಾಕಿ ವಿವರಗಳನ್ನು ನೀಡಲಾಗುತ್ತದೆ. ಅವರು BWSSB ಕಿಯೋಸ್ಕ್ಗಳು, ಆನ್ಲೈನ್ ಪೋರ್ಟಲ್ ಹಾಗೂ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಹಣ ಪಾವತಿಸಬಹುದು.
ಈ ಯೋಜನೆಯ ಮೂಲಕ ಸುಮಾರು ₹311 ಕೋಟಿ ಬಡ್ಡಿ ಮನ್ನಾ ಮಾಡಲಾಗುತ್ತಿದ್ದು, ಸಾರ್ವಜನಿಕರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬೇಕು ಎಂದು D. K. Shivakumar ಕರೆ ನೀಡಿದ್ದಾರೆ.
ಜಲಮಂಡಳಿಯಿಂದ ಯುಗಾದಿ ಉಡುಗೊರೆ: ನೀರಿನ ಬಿಲ್ ಬಾಕಿಗೆ ಬಡ್ಡಿ ಮನ್ನಾ ಯೋಜನೆ
Date:






