ಮದುವೆಗೆ ಹೆಣ್ಣು ಸಿಗಲಿಲ್ಲ ಅಂತ ಮನನೊಂದು ಕುರಿಗಾಯಿ ಯುವಕ ಆತ್ಮಹತ್ಯೆ!
ಚಿಕ್ಕಮಗಳೂರು: ಮದುವೆಯಾಗದೆ ಬೇಸರಗೊಂಡಿದ್ದ ಯುವಕನೊಬ್ಬ ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕಿನ ಯಗಟಿ ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕುಮಾರ್ (26) ಎಂದು ಗುರುತಿಸಲಾಗಿದೆ. ಅವರು ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ನಿವಾಸಿಯಾಗಿದ್ದರು.
ಕುಮಾರ್ ತಮ್ಮ ಕುಟುಂಬದೊಂದಿಗೆ ಶಿರಾದಿಂದ ಕಡೂರು ತಾಲೂಕಿನ ಬಾಸೂರು ಬಳಿ ವಾಸವಾಗಿದ್ದರು. ಕುರಿಮಂದೆ ಸಾಕಾಣಿಕೆ ಮಾಡಿಕೊಂಡು, ಹಳ್ಳಿಗಳ ತೋಟಗಳಲ್ಲಿ ಗೊಬ್ಬರಕ್ಕಾಗಿ ಕುರಿಗಳನ್ನು ನಿಲ್ಲಿಸಿ ಜೀವನ ನಡೆಸುತ್ತಿದ್ದರು.
ಕುಮಾರ್ ಪೋಷಕರಿಗೆ ಮೂವರು ಗಂಡು ಮಕ್ಕಳು ಇದ್ದು, ಯಾರಿಗೂ ಮದುವೆಯಾಗಿರಲಿಲ್ಲ. ಕುಮಾರ್ ಮದುವೆ ಮಾಡಿಕೊಡಬೇಕೆಂದು ಪೋಷಕರನ್ನು ಕೇಳುತ್ತಿದ್ದ. ಆದರೆ, “ಮೊದಲು ದೊಡ್ಡ ಅಣ್ಣಂದಿರಿಗೆ ಮದುವೆ ಆಗಲಿ, ನಂತರ ನಿನಗೆ ಮಾಡುತ್ತೇವೆ” ಎಂದು ಪೋಷಕರು ಹೇಳುತ್ತಿದ್ದರು ಎನ್ನಲಾಗಿದೆ.ಮದುವೆ ಆಗದ ಬೇಸರದಿಂದ ಕುಮಾರ್ ಮನನೊಂದು ಮದ್ಯ ಸೇವನೆ ಮಾಡುತ್ತಿದ್ದನು. ಇದೇ ಮನಸ್ಥಿತಿಯಲ್ಲಿ ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಯಗಟಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಯುವಕನ ಸಾವಿಗೆ ನಿಖರ ಕಾರಣ ಮದ್ಯಪಾನವೇ ಅಥವಾ ಮದುವೆ ಆಗದ ಬೇಸರವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.



