ಪ್ರತಿಭಟನಾನಿರತ ಯುವಜನರನ್ನು ಬಂಧಿಸಿ ಜೈಲಿಗೆ
ಕಳಿಸಿದ್ದು ನೀಚಕೃತ್ಯ: ಗೋವಿಂದ ಕಾರಜೋಳ
ಬೆಂಗಳೂರು: ಪ್ರತಿಭಟನಾನಿರತ ಯುವಜನರನ್ನು ಬಂಧಿಸಿ ಜೈಲಿಗೆ ಕಳಿಸಿದ್ದು ನೀಚಕೃತ್ಯ; ಇದು ಖಂಡನೀಯ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರಕಾರ ನಿರುದ್ಯೋಗಿ ಯುವಜನರಿಗೆ ನಿರುದ್ಯೋಗ ಭತ್ಯೆಯನ್ನೂ ನೀಡಿಲ್ಲ ಎಂದು ಟೀಕಿಸಿದರು. ಸುಮಾರು 3 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಅವನ್ನು ಭರ್ತಿ ಮಾಡಿಲ್ಲ; ಪ್ರತಿಭಟನೆಯ ಅವಕಾಶವನ್ನೂ ಕೊಡದೇ ಬಂಧಿಸಿದ್ದನ್ನು ಖಂಡಿಸುವುದಾಗಿ ಹೇಳಿದರು.
ಧಾರವಾಡದಲ್ಲಿ ರೂಂ ಮಾಡಿ ಕೋಚಿಂಗ್ ಪಡೆದು ಅವರೆಲ್ಲರೂ ಮೂರು ವರ್ಷ ಕಾದಿದ್ದಾರೆ. ಕೋರ್ಟ್ ನೆಪ ಹೇಳಿ ಒಳಮೀಸಲಾತಿ ವಿಷಯದಲ್ಲೂ ದ್ರೋಹ ಮಾಡುವ ಕೆಲಸವನ್ನು ಸಿದ್ದರಾಮಯ್ಯನವರ ಸರಕಾರ ಮಾಡುತ್ತಿದೆ. ಇದನ್ನು ಆರೂವರೆ ಕೋಟಿ ಜನರು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಸರಕಾರ ಕೂಡಲೇ ನೇಮಕಾತಿ ಮಾಡಬೇಕು. ನಿರುದ್ಯೋಗ ಭತ್ಯೆಯನ್ನೂ ಕೊಡಬೇಕು. ಯುವಜನತೆಗೆ ಜೀವನದ ಭರವಸೆ ನೀಡುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.



